ಏಕಪಕ್ಷೀಯ ನಿರ್ಧಾರ: ಯು.ಟಿ. ಖಾದ‌ರ್ ವಿರುದ್ಧ ಬಸವರಾಜ ಹೊರಟ್ಟಿ ಅಸಮಾಧಾನ

Picture of Savistara

Savistara

Bureau Report

ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ವಿರುದ್ಧ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

ಯು.ಟಿ. ಖಾದ‌ರ್ ಅವರಿಗೆ ಪತ್ರ ಬರೆದಿರುವ ಅವರು, ‘ಯಾವುದೇ ಕಾರ್ಯಕ್ರಮ ನಡೆದರೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ಪುಸ್ತಕ ಮೇಳ, ಲೇಸರ್ ಲೈಟ್ ಅಳವಡಿಕೆ ಕುರಿತು ನನ್ನ ಅಭಿಪ್ರಾಯ ಪಡೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.’ಸಿಪಿಎ ಕಾಮನ್ ವೆಲ್ತ್ ಸಮ್ಮೇಳನ ಆಯೋಜನೆಯ ರೂಪುರೇಷೆಗೂ ನಮ್ಮ ಅಭಿಪ್ರಾಯ ಕೇಳಿಲ್ಲ. ಯಾವುದೇ ಕಾರ್ಯಕ್ರಮ ನಡೆದರೂ ಮುಂಚೆಯೇ ಏನೂ ಹೇಳುವುದಿಲ್ಲ. ಇವೆಲ್ಲವನ್ನೂ ಇಲ್ಲಿಯವರೆಗೆ ಸಹಿಸಿಕೊಂಡು ಬಂದಿದ್ದೇನೆ. ಇನ್ನು ಮುಂದೆ ಹೀಗೆ ಆಗುವುದಿಲ್ಲ ಎಂದು ಭಾವಿಸುತ್ತೇನೆಂದು’ ಎಂದು ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಭಾಪತಿ ಸ್ಥಾನಕ್ಕೆ ಕುತ್ತು?

ಈ ಎಲ್ಲಾ ಬೆಳವಣಿಗೆಗಳ ನಡುವೆ ವಿಧಾನ ಪರಿಷತ್‌ನಲ್ಲಿ ಖಾಲಿ ಇದ್ದ ನಾಲ್ಕು ಸ್ಥಾನ ಭರ್ತಿಯಾಗುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲ 37ಕ್ಕೆ ಏರಿಕೆ ಆಗಿದೆ. ತನ್ಮೂಲಕ, ಮೇಲ್ಮನೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ವಿಧಾನ ಪರಿಷತ್‌ನಲ್ಲಿ ಬಹುಮತ ಇರಲಿಲ್ಲ. ಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದುದರಿಂದ ಸಭಾಪತಿ, ಉಪ ಸಭಾಪತಿ ಸ್ಥಾನಗಳು ಬಿಜೆಪಿ

ಹಿಡಿತದಲ್ಲೇ ಇದ್ದವು. ಸಂಖ್ಯಾಬಲ ಇಲ್ಲದ ಕಾರಣಕ್ಕೆ, ರಾಜ್ಯ ಸರ್ಕಾರ ಮಂಡಿಸಿದ್ದ ಕೆಲವು ಮಸೂದೆಗಳು ಮತ ವಿಭಜನೆಯ ವೇಳೆ ಸೋಲು ಕಂಡಿದ್ದವು. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು, ಅನೇಕ ಮಸೂದೆಗಳನ್ನು ಸದನ ಸಮಿತಿಗೆ ಒಪ್ಪಿಸಲೇಬೇಕಾದ ಅನಿವಾರ್ಯಕ್ಕೂ ಸರ್ಕಾರ ಸಿಲುಕಿತ್ತು. ತಾವು ಆಕ್ಷೇಪ ವ್ಯಕ್ತಪಡಿಸಿದ್ದ ಮಸೂದೆಗಳು ಅಂಗೀಕಾರಗೊಳ್ಳದಂತೆ ಮಾಡುವಲ್ಲಿ ವಿರೋಧ ಪಕ್ಷಗಳು ಸಫಲವಾಗಿದ್ದುಂಟು. ನಾಲ್ಕು ಸ್ಥಾನಗಳ ನಾಮನಿರ್ದೇಶನಕ್ಕೆ ರಾಜ್ಯಪಾಲರು ಅಂಗೀಕಾರ ಹಾಕಿದ್ದರಿಂದಾಗಿ, ಪರಿಷತ್ತಿನಲ್ಲಿ ಈಗ ಕಾಂಗ್ರೆಸ್ ಏಕೈಕ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ.ಬಿಜೆಪಿ-ಜೆಡಿಎಸ್ ಸೇರಿ 37 ಸದಸ್ಯರ ಬಲ ಹೊಂದಿವೆ. ಮೇಲ್ನೋಟಕ್ಕೆ ಸಮಬಲ ಎನಿಸುವಂತಿದ್ದರೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ತಮ್ಮ ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿ ಮೇಲ್ಮನೆಯಲ್ಲಿದ್ದಾರೆ. ಹೀಗಾಗಿ, ಪರಿಷತ್ತಿನಲ್ಲಿ ಎದುರಿಸುತ್ತಿದ್ದ ಮುಜುಗರದಿಂದ ಪಾರಾಗುವ ದಾರಿ ಕಾಂಗ್ರೆಸ್ ಸಿಕ್ಕಂತಾಗಿದೆ. ಬಿಜೆಪಿಯಿಂದ ಆಯ್ಕೆ ಆಗಿರುವ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರನ್ನು ಪಟ್ಟದಿಂದ ಕೆಳಗಿಳಿಸಿ, ಪಕ್ಷದ ಸದಸ್ಯರನ್ನು ಆ ಸ್ಥಾನಗಳಲ್ಲಿ ಕುಳ್ಳಿರಿಸಲು ಕೂಡಾ ಕಾಂಗ್ರೆಸ್‌ಗೆ ಅವಕಾಶ ಸಿಕ್ಕಂತಾಗಿದೆ.

[t4b-ticker]
error: Content is protected !!