ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಸುಡು ಬಿಸಿಲು ಹಾಗೂ ಬಿಸಿ ಗಾಳಿಯಂಥ ಹವಾಮಾನದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವೆಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ. 134ನೇ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಹೆಚ್ಚು ನೀರು ಕುಡಿಯಿರಿ ಎಂದು ಜನರಿಗೆ ಸಲಹೆ ಮಾಡಿದರು. ಮನೆಯಿಂದ ಹೊರಗಡೆ ಹೋಗುವಾಗ ಎಚ್ಚರಿಕೆಯಿಂದ ಇರಲು ತಿಳಿಸಿದ ಮೋದಿ, ಆರೋಗ್ಯ ರಕ್ಷಣೆಗೆ ವಿವಿಧ ಸರ್ಕಾರಿ ಇಲಾಖೆಗಳ ಮಾರ್ಗಸೂಚಿ ಅನುಸರಿಸಲು ಮರೆಯಬೇಡಿ ಎಂದು ಕರೆ ನೀಡಿದರು.
ನಮ್ಮ ದೇಶದಲ್ಲಿ ಬೇಸಿಗೆಯನ್ನು ಎದುರಿಸಲು ನಮ್ಮ ಅಡುಗೆ ಮನೆಗಳಲ್ಲೇ ಹೆಚ್ಚಿನ ಪರಿಹಾರಗಳು ಕಂಡುಬರುತ್ತವೆ ಎಂದು ಪ್ರಧಾನಿ ಹೇಳಿದರು. ಕೆಲವು ಸ್ಥಳಗಳಲ್ಲಿ ನೀರಿಗಾಗಿ ಮಣ್ಣಿನ ಮಡಕೆಗಳನ್ನು ಬಳಸಲಾರಂಭಿಸಿದರೆ, ಇನ್ನು ‘ಕೆಲವೆಡೆ ಮಜ್ಜಿಗೆಯನ್ನು ಮಡಕೆಯಲ್ಲಿ ಹಾಕಿ ಇಡಲಾಗುತ್ತದೆ. ಕೆಲವೆಡೆ ಮಾವಿನ ಕಾಯಿಗಳನ್ನು ಕುದಿಸಲಾಗುತ್ತದೆ. ಇದು ಸ್ಥಳೀಯ ಪಾನೀಯಗಳ ಋತುವಿನ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದರು.ಬೆಂಗಳೂರು ಖಗೋಳವಿಜ್ಞಾನ ಸಂಸ್ಥೆ: ದೇಶದ ಸಮೃದ್ಧಖಗೋಳಶಾಸ್ತ್ರ ಪರಂಪರೆಯನ್ನು ಪ್ರಧಾನಿ ನೆನಪಿಸಿದರು. ಬೆಂಗಳೂರು ಖಗೋಳಶಾಸ್ತ್ರ ಸಂಸ್ಥೆ, ಖಗೋಳ ಮಂಡಲ್, ಅಷ್ಟೋ-ಕೇರಳಂ ಮತ್ತು ಐಸಾಕ್ನಂಥ ಸಂಸ್ಥೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಅವುಗಳ ಕಾರ್ಯವನ್ನು ಶ್ಲಾಘಿಸಿದರು.ಜೋಳ ಪರಂಪರೆಯ ತಟ್ಟೆ ವಾಪಸ್: ತಮ್ಮ ಇತ್ತೀಚಿನನೆದರ್ಲೆಂಡ್ಸ್ ಭೇಟಿ ವೇಳೆ ಚೋಳ ಪರಂಪರೆಯ ತಾಮ್ರದ ತಟ್ಟೆಗಳನ್ನು ಭಾರತಕ್ಕೆ ಹಿಂದಿರುಗಿಸಿದ ಪ್ರಕರಣವನ್ನು ಮೋದಿ ನೆನಪಿಸಿದರು. ಇಂಥ ಅಮೂಲ್ಯ ಪಾರಂಪರಿಕ ವಸ್ತುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಮಾವು ಬೆಳೆಗಾರರು ವಿಶೇಷ ರೈತರು
ಮಾವಿನ ಹಣ್ಣಿನ ಕುರಿತು ಭಾರತೀಯರ ಪ್ರೀತಿಯನ್ನು ಪ್ರಸ್ತಾಪಿಸಿದ ಮೋದಿ, ದೇಶದಲ್ಲಿ ಮಾವಿನ ಹಣ್ಣಿನ ಬೆಳೆಯು ಗ್ರಾಮಗಳಿಂದ ಜಾಗತಿಕ ಮಾರುಕಟ್ಟೆಗಳಿಗೆ ವಿಸ್ತರಿಸುತ್ತಿದೆ ಎಂದು ಹೇಳಿದರು. ಮಾವು ಬೆಳೆಗಾರರು ದೇಶದ ಕೃಷಿ ಅರ್ಥ ವ್ಯವಸ್ಥೆಗೆ ಕೇವಲ ಸಾಮಾನ್ಯ ರೈತರಲ್ಲ, ಬದಲು ವಿಶೇಷ ರೈತರು ಎಂದು ವರ್ಣಿಸಿದ ಪ್ರಧಾನಿ, ಇದನ್ನು ಹೀಗೆಯೇ ಮುಂದುವರಿಸಿ ಎಂದು ಕರೆ ನೀಡಿದರು.









































