ಅಮರಾವತಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ದಾಲ್ಮಿಯಾ ಸಿಮೆಂಟ್ಸ್ಗೆ (Dalmia Cement) ಸಂಬಂಧಿಸಿದ 803 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.ವೈ.ಎಸ್. ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರ 27.5 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ದಾಲ್ಮಿಯಾ ಸಿಮೆಂಟ್ಸ್ನ 793.3 ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ಭೂಮಿಯನ್ನು ತನಿಖಾ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ. ವೈಯಕ್ತಿಕ ಲಾಭಕ್ಕಾಗಿ ಹಣ ವರ್ಗಾವಣೆ ಮಾಡಿರುವ ಆರೋಪ ಈಗ ಜಗನ್ ಮೇಲೆ ಕೇಳಿ ಬಂದಿದೆ.
ಈ ಪ್ರಕರಣವು 2011 ರಲ್ಲಿ ಸಿಬಿಐ ದಾಖಲಿಸಿದ ಎಫ್ಐಆರ್ಗೆ ಸಂಬಂಧಿಸಿದೆ. ಇದರಲ್ಲಿ ಡಿಸಿಬಿಎಲ್ ಭಾರತಿ ಸಿಮೆಂಟ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ನಲ್ಲಿ ಹೂಡಿಕೆ ಮಾಡಿದೆ. ಇಡಿ ತನಿಖೆಯ ಪ್ರಕಾರ, ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಾಲ್ಮಿಯಾ ಸಿಮೆಂಟ್ಸ್ಗೆ ರಾಜ್ಯ ಸರ್ಕಾರದಿಂದ ಅನುಕೂಲಕರ ಒಪ್ಪಂದಗಳನ್ನು ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ, ಕಂಪನಿಯಿಂದ ಗಣನೀಯ ಹಣವನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆಯಾಗಿ ಅಥವಾ ಇತರ ರೂಪದಲ್ಲಿ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಹಣವನ್ನು ಆಂಧ್ರಪ್ರದೇಶ, ತಮಿಳುನಾಡು, ಮತ್ತು ದೆಹಲಿಯಲ್ಲಿ ವಿವಿಧ ಆಸ್ತಿಗಳಾದ ಜಮೀನು, ಕಟ್ಟಡಗಳು, ಮತ್ತು ಷೇರುಗಳ ರೂಪದಲ್ಲಿ ಹೂಡಿಕೆ ಮಾಡಲಾಗಿತ್ತು. ಜಪ್ತಿಯಾದ ದಾಲ್ಮಿಯಾ ಸಿಮೆಂಟ್ಸ್ನ ಕೆಲವು ಘಟಕಗಳು ಮತ್ತು ಆಸ್ತಿಗಳಯ ಜಗನ್ ರೆಡ್ಡಿಯ ಸಹಚರರ ಹೆಸರಿನಲ್ಲಿವೆ.
ಈ ಪ್ರಕರಣವು 2019ರಿಂದ ತನಿಖೆಯಲ್ಲಿದ್ದು, ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐ ಕೂಡ ಇದೇ ಆರೋಪಗಳ ಕುರಿತು ಪ್ರತ್ಯೇಕ ತನಿಖೆ ನಡೆಸುತ್ತಿದೆ. ಇಡಿಯ ಈ ಕ್ರಮವು ರಾಜಕೀಯವಾಗಿ ಸೂಕ್ಷ್ಮವಾಗಿದ್ದು, ಆಂಧ್ರಪ್ರದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವೈಎಸ್ಆರ್ ಕಾಂಗ್ರೆಸ್ ಈ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಕರೆದು ಖಂಡಿಸಿದೆ. ಆದರೆ ಇಡಿ ತನ್ನ ಕಾರ್ಯಾಚರಣೆಯನ್ನು ಕಾನೂನಿನ ಚೌಕಟ್ಟಿನಲ್ಲಿ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.













































