ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟ ನಿಷೇಧ

Picture of Savistara

Savistara

Bureau Report

ಬೆಂಗಳೂರು: ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಾಥಮಿಕ ಹಂತದಿಂದ ಪಿಯುಸಿವರೆಗಿನ ಶಾಲಾ-ಕಾಲೇಜುಗಳ ಆವರಣದ ಸುತ್ತ 50 ಮೀಟ‌ರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು ಸಕ್ಕರೆ ಹಾಗೂ ಉಪ್ಪಿನ ಅಂಶವಿರುವ(ಎಚ್‌ಎಫ್‌ಎಸ್‌ಎಸ್) ಯಾವುದೇ ಆಹಾರ ಪದಾರ್ಥಗಳ ಮಾರಾಟ, ವಿತರಣೆ ಮತ್ತು ಪ್ರಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. “ಶಾಲೆ, ಕಾಲೇಜು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳ ಸುತ್ತ 50 ಮೀಟ‌ರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು ಟ್ರಾನ್ಸ್‌ಫ್ಯಾಟ್, ಆ್ಯಡೆಡ್ ಶುಗರ್, ಅಧಿಕ ಸೋಡಿಯಂ ಅಥವಾ ಉಪ್ಪು ಹೊಂದಿರುವ ಆಹಾರ ಪದಾರ್ಥಗಳ ಮಾರಾಟ, ಉಚಿತ ವಿತರಣೆ, ದಾಸ್ತಾನು, ಪ್ರಚಾರವನ್ನು ನಿಷೇಧಿಸಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಲಾ-ಕಾಲೇಜು ಆಡಳಿತ ಮಂಡಳಿ ಕ್ರಮ ವಹಿಸಲು ಸೂಚಿಸಿದ್ದೇವೆ. ಆಹಾರ ಮಳಿಗೆ, ಹೋಟೆಲ್, ಬೇಕರಿ, ಕಾಂಡಿಮೆಂಟ್ಸ್ ಕ್ಯಾಂಟೀನ್ ಮಾಲೀಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಜುಲೈನಲ್ಲಿ ರಾಜ್ಯದ ವಿವಿಧೆಡೆಯ 134 ಶಾಲಾ ಕಾಲೇಜುಗಳ ಆವರಣ ಹಾಗೂ ಸುತ್ತಲಿನ ಕ್ಯಾಂಟೀನ್‌ಗಳಲ್ಲಿ ಪರಿಶೀಲನಾ ಅಭಿಯಾನ ನಡೆಸಲಾಗಿದೆ. ಈ ವೇಳೆ ನೂರಕ್ಕೂ ಅಧಿಕ ಶಾಲೆಗಳ ಬಳಿ ಜಂಕ್‌ಫುಡ್ ಮಾರಾಟ ಮಾಡುವುದು ಕಂಡು ಬಂದಿದೆ. ಬಿಳಿ ಬ್ರೆಡ್, ಪಾಸ್ತಾ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೆಟ್ ಅವಲಂಬಿಸಿರುವ ಹೆಚ್ಚಿನ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇವು ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿವೆ. ಈ ಹಿನ್ನೆಲೆಯಲ್ಲಿಇಂತಹ ಆಹಾರ ಪದಾರ್ಥಗಳ ಮಾರಾಟಕ್ಕೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ ಎಂದರು. ಗುಣಮಟ್ಟ ಸ್ವಚ್ಚತೆ, ನೈರ್ಮಲ್ಯ, ಲೇಬಲಿಂಗ್, ಅವಧಿ ಮೀರಿದ ಉತ್ಪನ್ನಗಳ ಕುರಿತು ತಪಾಸಣೆ ನಡೆಸಲಾಗಿದ್ದು ಸಂಶಯಾಸ್ಪದವಾಗಿ ಕಂಡು ಬಂದ 53 ಆಹಾರ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಆಧರಿಸಿ ಆಹಾರ ಸುರಕ್ಷತೆ ಗುಣಮಟ್ಟ ಕಾಯಿದೆ-2006, 2011ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು”ಗುಣಮಟ್ಟ ಕಾಯಿದೆ-2006ರಡಿ ಅಗತ್ಯ ನೋಂದಣಿ ಮಾಡಿಸಿ ಸ್ವಚ್ಛತೆ, ಆಹಾರ ಸುರಕ್ಷತಾ ಮಾನದಂಡ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಮಾರಾಟ ಮಾಡಿದಲ್ಲಿ ಸುಮಾರು 3 ಲಕ್ಷ ರೂ.ವರೆಗೆ ದಂಡ, ಆಹಾರ ಪದಾರ್ಥ ವಶಕ್ಕೆ ಪಡೆಯಲು, ಮಾರಾಟ ಪರವಾನಗಿ ರದ್ದು ಮಾಡಲು ಹಾಗೂ ಅಗತ್ಯವಿದ್ದಲ್ಲಿ ಕಾನೂನುರೀತ್ಯ ಕ್ರಮ ವಹಿಸಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.ಮಳೆಗಾಲದಲ್ಲಿಎಲ್ಲಾಹೋಟೆಲ್‌ಗಳು ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿನೀರನ್ನೇ ನೀಡಬೇಕು. ನೀರಿನಿಂದ ಹರಡುವ ಸಾಂಕ್ರಾಮಿಕ ರೋಗ ತಡೆಗಟ್ಟಲು ಈ ಕ್ರಮ ಅನುಸರಿಸುವಂತೆ ತಿಳಿಸಲಾಗುವುದು ಎಂದು ಸಚಿವರು ಹೇಳಿದರು.

[t4b-ticker]
error: Content is protected !!