ನವದೆಹಲಿ: ಜಲಸಂಪನ್ಮೂಲ ಇಲಾಖೆಯನ್ನು ಹೊರತುಪಡಿಸಿಕೇಂದ್ರ ಸರ್ಕಾರದಿಂದ ಬಾಕಿ ಇರುವ ಪ್ರಮುಖ ಯೋಜನೆಗಳಿಗೆ ಅನುಮೋದನೆ, ಅನುದಾನಗಳು ಸೇರಿದಂತೆ ಒಟ್ಟು 13 ಅಂಶಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರ ಜತೆ ಸೋಮವಾರ ಚರ್ಚೆ ನಡೆಸಿದರು.
ಕರ್ನಾಟಕ ಭವನದಲ್ಲಿ ಸೋಮವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಸಂಸದರ ಜೊತೆಗಿನ ಸಭೆಯಲ್ಲಿ ಈ ಯೋಜನೆಗಳ ಅನುಮೋದನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಲಾಯಿತು.ಮುಖ್ಯವಾಗಿ ರಾಜ್ಯದ ವಿವಿಧ ವಿಧೇಯಕಗಳಿಗೆ ಅನುಮೋದನೆ ಸೇರಿದಂತೆ ಗ್ರಾಮ ಪಂಚಾಯತಿಗಳ ಅನುದಾನ, ಸಾಗರಮಾಲ 2.0 ಯೋಜನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ, ರಕ್ಷಣಾ ಇಲಾಖೆಯ ಭೂಮಿ ರಾಜ್ಯ ಸರ್ಕಾರಕ್ಕೆ ವರ್ಗಾವಣೆ, ಬೆಂಗಳೂರು ರಿಂಗ್ ರಸ್ತೆ, ಕೋಲಾರ ರೈಲ್ವೆ ಕೋಚ್ ಕಾರ್ಖಾನೆ, ಬೆಂಗಳೂರು ಉಪನಗರ ರೈಲು ಯೋಜನೆ, ಬೆಂಗಳೂರು-ಮುಂಬೈ ಅತಿ ವೇಗದ ರೈಲು ಮಾರ್ಗ, ಎಚ್ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸುವುದು, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಪೊಲೀಸ್ ಆಧುನೀಕರಣದ ಬಗ್ಗೆ ಗಮನ ಹರಿಸುವಂತೆ ಸಭೆಯಲ್ಲಿ ಕೋರಲಾಯಿತು.ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆಂದು ಒಟ್ಟು ₹1,438.59 ಕೋಟಿಗೂ ಅಧಿಕ ನೆರವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಬೇಕಾಗಿದೆ. ಸರ್ಕಾರವು ಈ ಕಡೆ ಗಮನ ನೀಡಬೇಕು ಎಂದು ಒತ್ತಾಯಿಸಲಾಯಿತು
ಕುದುರೆಮುಖ ಪುನರ್ವಸತಿ
ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ ಕಾಂಪಾ ಯೋಜನೆಯಡಿ ₹300 ಕೋಟಿ ಅನುದಾನವನ್ನು 02.04.2025ರಂದು ಕೋರಲಾಗಿದ್ದು,ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮೋದನೆ ಬಾಕಿಯಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.2025-26ನೇ ಸಾಲಿನ 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. 2025-26ನೇ ಸಾಲಿಗೆ 15ನೇ ಹಣಕಾಸು ಆಯೋಗವು ₹2,186.20 ಕೋಟಿ ನೆರವು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರವು ಈ ಮೊತ್ತವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಸಭೆಗೆ ತಿಳಿಸಲಾಯಿತು.ಪಂಚಾಯತ್ ರಾಜ್ ಸಚಿವಾಲಯದೊಂದಿಗೆ ನಿರಂತರ ಅನುಸರಣೆ ನಡೆಸಿ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರು ಹಲವು ಬಾರಿ ಪತ್ರ ಬರೆಯಲಾಗಿದೆ. ಜೊತೆಗೆ ಮುಖ್ಯ ಕಾರ್ಯದರ್ಶಿ ಅವರೂ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು ಸಂಬಂಧಿತ ಕೇಂದ್ರ ಸಚಿವರಿಗೆ ಮೂರು ಬಾರಿ ಪತ್ರ ಬರೆದಿದ್ದಾರೆ ಎಂದು ತಿಳಿಸಲಾಗಿದೆ.
ಸಾಗರಮಾಲಾ 2.0 ಕಾರ್ಯಯೋಜನೆಗೆ ಅನುಮೋದನೆ
ಸಾಗರಮಾಲಾ 2.0 ಯೋಜನೆಯಡಿ ಕರ್ನಾಟಕ ಜಲಸಾರಿಗೆ ಮಂಡಳಿಯು ₹16,561 ಕೋಟಿ ಮೌಲ್ಯದ 176 ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದೆ. ಭಾರತ ಸರ್ಕಾರ ಇನ್ನೂ ಸಾಗರಮಾಲಾ 2.0 ಕಾರ್ಯಯೋಜನೆಯನ್ನು ಅನುಮೋದಿಸಿಲ್ಲ. ಈ ಯೋಜನೆಗಳಿಂದ ಕರಾವಳಿ ಮೂಲಸೌಕರ್ಯ, ಬಂದರು ಸಂಪರ್ಕ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಈ ಕುರಿತು ಅಗತ್ಯ ಕ್ರಮ ಅವಶ್ಯಕ ಎಂದು ಮನವಿ ಮಾಡಲಾಯಿತು.










































