ಅತ್ಯಾಚಾರಿಗಳನ್ನು ಸಮರ್ಥಿಸುವ ವ್ಯಕ್ತಿ ದೇಶದ ಶಿಕ್ಷಣ ಸಚಿವ: ರಾಹುಲ್ ಗಾಂಧಿ

Picture of Savistara

Savistara

Bureau Report

ನವದೆಹಲಿ: ಕೇಂದ್ರ ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್ಅವರ ಬದಲಿಗೆ ಪ್ರಹ್ಲಾದ ಜೋಶಿ ಅವರನ್ನು ನೇಮಕ ಮಾಡಿರುವುದಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರಿಗಳನ್ನು ಸಮರ್ಥಿಸುವ ವ್ಯಕ್ತಿಗೆ ಶಿಕ್ಷಣ ಸಚಿವಾಲಯದ ಹೊಣೆ ವಹಿಸಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.ಮಂಗಳವಾರ ಸಂಸತ್ ಆವರಣದಲ್ಲಿ ಮಾತನಾಡಿದ ಅವರು, ‘ದೇಶದ ಯುವಕರು ಶಿಕ್ಷಣ ವ್ಯವಸ್ಥೆಯ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ವಿದ್ಯಾರ್ಥಿನಿಯರ ಮೇಲೆ ಲಾಠಿ ಪ್ರಹಾರ ನಡೆದಿದೆ. ಇಂತಹ ಸಂದರ್ಭದಲ್ಲಿ ಅತ್ಯಾಚಾರಿಗಳನ್ನು ಸಮರ್ಥಿಸುವ ವ್ಯಕ್ತಿಯನ್ನು ಬಿಜೆಪಿ ಶಿಕ್ಷಣ ಸಚಿವರನ್ನಾಗಿ ನೇಮಿಸಿದೆ. ಅತ್ಯಾಚಾರಿಗಳಿಗೆ ರಕ್ಷಣೆ ಬೇಕು ಎಂದು ಹೇಳುವ ವ್ಯಕ್ತಿಗಿಂತ ಕೆಟ್ಟವರು ಯಾರೂ ಇರಲಾರರು. ಅಂತಹ ವ್ಯಕ್ತಿಯೇ ಈಗ ದೇಶದ ಶಿಕ್ಷಣ ಸಚಿವರಾಗಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರ ವಿಚಿತ್ರವಾಗಿದೆ. ಅವರ ಸಚಿವ ಸಂಪುಟದಲ್ಲಿ ಹಲವರು ಇದ್ದರು. ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಬಹುದಿತ್ತು. ಆದರೆ ಅವರು ಅತ್ಯಾಚಾರಿಗಳನ್ನು ರಕ್ಷಿಸುವವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರ ಈ ಹೇಳಿಕೆಯು 2022ರ ಅಕ್ಟೋಬರ್‌ನಲ್ಲಿ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ನೀಡಲಾದ ಅವಧಿಪೂರ್ವ ಬಿಡುಗಡೆ ಕುರಿತು ಪ್ರಹ್ಲಾದ ಜೋಶಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿರುವುದಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಆ ವೇಳೆ ಗುಜರಾತ್‌ನಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಜೋಶಿ, ಕಾನೂನಿನ ಪ್ರಕಾರ ಶಿಕ್ಷೆಯ ಅವಧಿ ಪೂರೈಸಿದ ನಂತರವೇ ಅಪರಾಧಿಗಳಿಗೆ ಕ್ಷಮಾದಾನ ನೀಡಲಾಗಿದೆ ಎಂದು ಹೇಳಿದ್ದರು. ಅಲ್ಲದೆ, ಅವರ ಉತ್ತಮ ನಡವಳಿಕೆಯನ್ನು ಆಧರಿಸಿ ಅವಧಿಪೂರ್ವ ಬಿಡುಗಡೆ ಮಾಡಲಾಗಿದೆ ಎಂದೂ ಸಮರ್ಥಿಸಿದ್ದರು.

[t4b-ticker]
error: Content is protected !!