ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತುಬಹುತೇಕ ಅಂತಿಮ ಹಂತ ತಲುಪಿದ್ದು, ಬುಧವಾರ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಜತೆಗಿನ ಸಭೆಯಲ್ಲಿ ಸಚಿವರ ಪಟ್ಟಿಗೆ ಒಪ್ಪಿಗೆ ಮುದ್ರೆ ಬೀಳುವ ಸಾಧ್ಯತೆಗಳಿವೆ.ರಾಹುಲ್ ಜತೆಗಿನ ಸಭೆ ಯಶಸ್ವಿ ಆದರೆ ಶುಕ್ರವಾರವೇ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಂಭವವೂ ಇದೆ. ಹೊಸದಿಲ್ಲಿಯ ಲೋಧಿ ಎಸ್ಟೇಟ್ ನಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸಹಿತ ರಾಜ್ಯದ ಮೂವರು ನಾಯಕರು ಪ್ರತ್ಯೇಕ ಪಟ್ಟಿಗಳನ್ನು ಮಂಡಿಸಿದ್ದಾರೆ. ಆದರೆ ಒಮ್ಮತ ವ್ಯಕ್ತವಾಗಿಲ್ಲ. ಹೀಗಾಗಿ ಬುಧ ವಾರ ಮತ್ತೂಂದು ಸುತ್ತಿನ ಸಭೆ ನಡೆ ಸಲು ಉಭಯ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ.ಸೋಮವಾರವೇ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಕಸರತ್ತು ಹೈಕಮಾಂಡ್ ನಾಯಕರ ಅಲಭ್ಯತೆಯಿಂದಾಗಿ ಮಂಗಳವಾರಕ್ಕೆ ಮುಂದೂಡಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಶಿವಕುಮಾರ್ ಸಹಿತ ಪ್ರಮುಖ ನಾಯಕರು ಹಾಗೂ ಆಕಾಂಕ್ಷಿಗಳು ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದರು. ರಾತ್ರಿ ವೇಳೆಗೆ ವೇಣುಗೋಪಾಲ್ ನಿವಾಸಕ್ಕೆ ಸಿಎಂ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆಗಮಿಸಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುಜೇ।ವಾಲಾ ಕೂಡ ಸಭೆಯಲ್ಲಿ ಇದ್ದರು. ರಾಜ್ಯದ ಮೂವರು ನಾಯಕರು ತಾವು ಸಿದ್ಧಪಡಿಸಿದ್ದ ಸಂಭವನೀಯ ಸಚಿವರ ಪಟ್ಟಿಯನ್ನು ಸಭೆಯ ಮುಂದಿಟ್ಟರು. ಆದರೆ ಕೆಲ ಹೆಸರುಗಳಿಗೆ ಹೈಕಮಾಂಡ್ ನಾಯಕರು ಒಪ್ಪಿಗೆ ಸೂಚಿಸಿಲ್ಲ. ಅಲ್ಲದೆ ತಮ್ಮದೇ ಒಂದು ಪಟ್ಟಿಯನ್ನೂ ಮಂಡಿಸಿದ್ದು, ಅದರಲ್ಲಿ ಇರುವವರಿಗೂ ಮಾನ್ಯತೆ ನೀಡಲು ಸೂಚಿಸಿದ್ದಾರೆ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಬುಧವಾರ ಸಂಸತ್ ಅಧಿವೇಶನ ಮುಗಿದ ಬಳಿಕ ರಾತ್ರಿ ರಾಹುಲ್ ಗಾಂಧಿ ಅವರೊಂದಿಗೆ ಅಂತಿಮ ಹಂತದ ಮಾತುಕತೆ ನಡೆಯಲಿದ್ದು, ಈ ಸಭೆಯಲ್ಲಿ ಪಟ್ಟಿಗೆ ಹಸುರು ನಿಶಾನೆ ಸಿಗುವ ಸಂಭವವಿದೆ.
ಮೈಸೂರಿಗೆ ಹೋಗಿ ಬಂದ ಸಿದ್ದು
ಸೋಮವಾರ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಕುರಿತ ಸಭೆ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮಂಗಳವಾರ ಬೆಳಗ್ಗೆ ತುರ್ತು ಕರೆ ಬೆನ್ನಲ್ಲೇ ಮೈಸೂರಿಗೆ ತೆರಳಿದ್ದರು. ಸಂಜೆ ವೇಳೆಗೆ ದಿಲ್ಲಿಗೆ ಮರಳಿದರು. ಬಳಿಕ ಕರ್ನಾಟಕ ಭವನದಲ್ಲಿ ಆಪ್ತ ಶಾಸಕರಾದ ಬಸವರಾಜ ರಾಯರೆಡ್ಡಿ, ಎಂ.ಆರ್.ಸೀತಾರಾಂ, ಡಾ| ಅಜಯ್ ಧರಂಸಿಂಗ್, ಕೋನರೆಡ್ಡಿ, ಪೊನ್ನಣ್ಣ, ಬಸವರಾಜ ದದ್ದಲ್, ಬಸವರಾಜ ಶಿವಣ್ಣವರ್, ರಿಜ್ವಾನ್ ಅರ್ಷದ್ ಅವರುಗಳೊಂದಿಗೆ ಲಘು ಉಪಾಹಾರ ಸೇವಿಸಿದರು.
ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ರಾಜ್ಯ ನಾಯಕರೆ ಲ್ಲರೂ ತೆರಳಿದ್ದಾರೆ. ಹಿಂದೆ ಜನತಾ ಪರಿವಾರದ ಸರಕಾರ ಇದ್ದಾಗ ಬೆಳಗಾವಿ ನಾಲೈದು ಸಚಿವ ಸ್ಥಾನ ಕೊಟ್ಟದ್ದುಂಟು. ಹೀಗಾಗಿ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಈಗ ಜಿಲ್ಲೆಗಳ ಸಂಖ್ಯೆ ಜಾಸ್ತಿ ಆಗಿದೆ. ಎಲ್ಲೆಡೆಗೂ ಪ್ರಾತಿನಿಧ್ಯ ಸಿಗಬೇಕು. ಹೈಕಮಾಂಡ್ ನಾಯಕರು ಸೋಷಿ ಯಲ್ ಎಂಜಿನಿಯರಿಂಗ್ ಆಧಾರದ ಮೇಲೆ ಹಂಚಿಕೆ ಮಾಡುವ ವಿಶ್ವಾಸವಿದೆ.
– ಲಕ್ಷ್ಮಣ ಸವದಿ, ಕಾಂಗ್ರೆಸ್ ಸದಸ್ಯ
ಸಿಎಂ ಬದಲಾವಣೆ ನೆಪದಲ್ಲಿ ತಿಂಗಳುಗಟ್ಟಲೇ ಆಡಳಿತ ನಡೆದಿರಲಿಲ್ಲ. ಹೊಸ ಸಿಎಂ ಬಂದ ಬಳಿಕ ಸಿಎಂ ಆದಿಯಾಗಿ ಎಲ್ಲರೂ ಮೂರ್ನಾಲ್ಕು ಬಾರಿ ದಿಲ್ಲಿಗೆ ಹೋಗುತ್ತಲೇ ಇದ್ದಾರೆ. ಮಂತ್ರಿಮಂಡಲ ವಿಸ್ತರಣೆ ಆಗಿಲ್ಲ. ಇನ್ನೆಲ್ಲಿ ಆಡಳಿತದ ಗಾಂಭೀರ್ಯ ಬರುತ್ತದೆ? ಸರಕಾರ ಇದೆ ಎನ್ನಿಸುತ್ತಲೇ ಇಲ್ಲ.
–ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ










































