ವಿಜಯಪುರ: ‘ನೀಟ್ ಪ್ರತಿಭಟನೆಯಲ್ಲಿ ಮುಲ್ಲಾಗಳಿಗೆ ಏನು ಕೆಲಸ, ಎದೆ ಸೀಳಿದರೆ ಮೂರು ಅಕ್ಷರ ಇಲ್ಲ’ ಎಂಬ ಅವಿವೇಕಿತನದ ಹೇಳಿಕೆ ನೀಟಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಮುಲ್ಲಾ ಸಮಾಜಕ್ಕೆ ಬೇಷರತ್ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರಿಗೆ ಸಿಕ್ಕಲ್ಲಿ ಮುಖಕ್ಕೆ ಕಪ್ಪು ಮಸಿ ಬಳಿಯಲು ಸಮಾಜದ ಯುವಕರಿಗೆ ಕರೆ ನೀಡುತ್ತೇವೆ. ಅವರಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಕರ್ನಾಟಕ ಮುಲ್ಲಾ ಅಸೋಸಿಯೋಷನ್ ಅಧ್ಯಕ್ಷ ಎಂ.ಸಿ.ಮುಲ್ಲಾ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಚೋದನಕಾರಿ ಹೇಳಿಕೆ ನೀಡಿರುವ ಸಿ.ಟಿ.ರವಿ ಅವರನ್ನು ಸರ್ಕಾರ ತಕ್ಷಣ ಬಂಧಿಸಬೇಕು, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.’ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ ನಡೆದಾಗ, ಸರ್ಕಾರ ತಪ್ಪು ಮಾಡಿದಾಗ ವಿರೋಧಿಸುವ, ಪ್ರತಿಭಟಿಸುವ ಹಕ್ಕು ಎಲ್ಲ ಸಮಾಜದವರಿಗೂ ಇದೆ ಎಂಬುದನ್ನು ರವಿ ಅರಿಯಬೇಕು’ ಎಂದು ಹೇಳಿದರು.’ಮುಲ್ಲಾಗಳಿಗೂ ನೀಟ್ಗೂ ಏನು ಸಂಬಂಧ ಎಂಬ ಸಿ.ಟಿ.ರವಿ ಹೇಳಿಕ ಸಂಪೂರ್ಣ ಬಾಲಿಷವಾದದ್ದು ಮತ್ತು ಖಂಡನೀಯ. ಮುಲ್ಲಾ ಸಮಾಜದ ನೂರಾರು ವಿದ್ಯಾರ್ಥಿಗಳು ನೀಟ್ನಲ್ಲಿ ಈ ವರ್ಷ ಟಾಫರ್ಸ್ ಆಗಿದ್ದಾರೆ. ಉದಾಹರಣೆಗೆ ಈ ವರ್ಷವೇ ಅಮೀನಾ ಆರೀಫ್ ಎಂಬುವವರು 720ಕ್ಕೆ 720 ತೆಗೆದಿದ್ದಾರೆ ಎಂಬುದನ್ನು ತಿಳಿಯಬೇಕು’ ಎಂದು ಹೇಳಿದರು.
‘ಈ ದೇಶದ ರಾಷ್ಟ್ರಪತಿ ಹುದ್ದೆ ಸೇರಿದಂತೆ ಶಿಕ್ಷಣ ಸಚಿವ, ಮುಖ್ಯಮಂತ್ರಿ, ರಾಜ್ಯಪಾಲ, ವಿಜ್ಞಾನಿಗಳು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕ್ರೀಡಾಪಟುಗಳು, ಸಾಹಿತಿಗಳು, ಗಾಯಕರು, ಸಂಗೀತಗಾರರು, ಸಿನಿಮಾ ನಟರು, ಆರ್ಬಿಐ ಉಪ ಗವರ್ನರ್, ಐಎಎಸ್, ಐಪಿಎಸ್, ಕುಲಪತಿ ಹುದ್ದೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮುಸ್ಲಿಮರು ಇದ್ದಾರೆ ಎಂಬುದನ್ನು ಸಿ.ಟಿ.ರವಿ ತಿಳಿದುಕೊಳ್ಳಬೇಕು’ ಎಂದರು.’ದೇಶದ ಸಾಕ್ಷರತೆ ಪ್ರಮಾಣದಲ್ಲಿ ಹಿಂದುಗಳು ಶೇ 74ರಷ್ಟು ಇದ್ದರೆ, ಮುಸ್ಲಿಮರು ಶೇ78 ರಷ್ಟು ಸಾಕ್ಷರರಿದ್ದಾರೆ ಎಂಬುದನ್ನು ಸಿ.ಟಿ.ರವಿ ಮರೆಯಬಾರದು’ ಎಂದು ಹೇಳಿದರು.’ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ಮುಂಚೂಣಿಯಲ್ಲಿ ಇದ್ದರು ಎಂಬುದನ್ನು ನೆನಪಿಸಲು ಬಯಸುತ್ತೇನೆ. ಇಂದಿಗೂ ದೇಶದ ಸೇನೆಯ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ದೇಶದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ದೇಶದ ಪ್ರಮುಖ 10 ತೆರಿಗೆ ಪಾವತಿದಾರರ ಸಾಲಿನಲ್ಲಿ ಮುಸ್ಲಿಮರೂ ಇದ್ದಾರೆ ಎಂಬುದನ್ನು ಸಿ.ಟಿ.ರವಿ ಅರಿಯಬೇಕು’ ಎಂದು ತಿರುಗೇಟು ನೀಡಿದರು.ಕರ್ನಾಟಕ ರಾಜ್ಯ ಮುಲ್ಲಾ ಅಸೋಷಿಯೇಷನ್ ಪದಾಧಿಕಾರಿಗಳಾದ ಶಂಷೀರ್ ಆಲಿ ಮುಲ್ಲಾ, ಮೀರಾ ಸಾಬ್ ಮುಲ್ಲಾ, ಷಹಜಾನ್ ಮುಲ್ಲಾ, ಯೂನುಸ್ ಮುಲ್ಲಾ, ಎಂ.ಎಂ.ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.










































