ಅಯೋಧ್ಯೆ (ಉತ್ತರ ಪ್ರದೇಶ): ರಾಮ ಮಂದಿರದ ಕಾಣಿಕೆ ಕಳವುಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಣಿಗೆ ಸಂಗ್ರಹ ಮತ್ತು ಎಣಿಕೆ ಪ್ರಕ್ರಿಯೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಭಕ್ತರು ನೀಡುವ ಕಾಣಿಕೆಯ ಸಂಗ್ರಹದಿಂದ ಎಣಿಕೆವರೆಗೆ ಪ್ರತಿಯೊಂದು ಹಂತವನ್ನೂ ವಿಡಿಯೊ ಚಿತ್ರೀಕರಣ ಮಾಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಜುಲೈ 25ರಿಂದ ಈ ವ್ಯವಸ್ಥೆ ಜಾರಿಯಲ್ಲಿದ್ದು, ಎಣಿಕೆ ಕೊಠಡಿಯಿಂದ ಖಾಲಿ ಕಾಣಿಕೆ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗುವುದು, ಅವುಗಳಲ್ಲಿ ಕಾಣಿಕೆ ಸಂಗ್ರಹಿಸುವುದು, ಸೀಲ್ ಮಾಡಿ ಮತ್ತೆ ಎಣಿಕೆ ಕೊಠಡಿಗೆ ತರುವುದು ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ನಿರಂತರ ಕ್ಯಾಮೆರಾ ನಿಗಾದಲ್ಲಿ ಮಾಡಲಾಗುತ್ತದೆ ಎಂದು ಟ್ರಸ್ಟಿ ಮಹಂತ್ ದಿನೇಂದ್ರ ದಾಸ್ ಹೇಳಿದ್ದಾರೆ.360 ಡಿಗ್ರಿ ಕ್ಯಾಮೆರಾ, 8 ಸದಸ್ಯರ ಮೇಲ್ವಿಚಾರಣಾ ತಂಡಈ ಕಾರ್ಯಕ್ಕಾಗಿ ಎಂಟು ಸದಸ್ಯರ ಮೇಲ್ವಿಚಾರಣಾ ತಂಡವನ್ನು ನಿಯೋಜಿಸಲಾಗಿದ್ದು, 360 ಡಿಗ್ರಿ ಕ್ಯಾಮೆರಾಗಳ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ದಾಖಲಿಸಲಾಗುತ್ತಿದೆ. ಈ ಕೆಲಸಕ್ಕಾಗಿ ಇಬ್ಬರು ವೃತ್ತಿಪರ ವಿಡಿಯೊಗ್ರಾಫರ್ಗಳನ್ನು ನೇಮಿಸಲಾಗಿದೆ.
ಒಂದೇ ದಿನ ಎಲ್ಲ ಪೆಟ್ಟಿಗೆಗಳ ಎಣಿಕೆ ಇಲ್ಲಮಂದಿರ ಆವರಣದಲ್ಲಿ ಇರುವ ಸುಮಾರು 40 ಕಾಣಿಕೆ ಪೆಟ್ಟಿಗೆಗಳನ್ನು ಒಂದೇ ದಿನ ಲೆಕ್ಕ ಮಾಡುವ ಬದಲು, ಬೇರೆ ಬೇರೆ ದಿನ ಎಣಿಕೆ ಮಾಡಲು ನಿಶ್ಚಯಿಸಲಾಗಿದೆ. ಕಾಣಿಕೆ ತುಂಬಿದ ಪೆಟ್ಟಿಗೆ ಎಣಿಕೆ ಕೊಠಡಿಗೆ ತಲುಪಿದ ಬಳಿಕ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಅದನ್ನು ಸೀಲ್ ಮಾಡುತ್ತಾರೆ. ಅಲ್ಲದೆ, ಎಣಿಕೆ ಕೊಠಡಿಯೊಳಗೂ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಒಂದು ರೂಪಾಯಿಯೂ ಕಳವಾಗದು’ಇನ್ನು ಮುಂದೆ ರಾಮ ಮಂದಿರದಲ್ಲಿ ಒಂದು ರೂಪಾಯಿಯೂ ಕಳವಾಗದು. ಎಲ್ಲವೂ ಸುರಕ್ಷಿತವಾಗಿದೆ. ಅಗತ್ಯವಿದ್ದರೆ ಇನ್ನಷ್ಟು ಸುಧಾರಿತ ವ್ಯವಸ್ಥೆಗಳನ್ನು ಜಾರಿಗೆ ತರುತ್ತೇವೆ. ಆಡಳಿತ ಕಟ್ಟುನಿಟ್ಟಾದರೆ ಕಳ್ಳತನ ತಾನಾಗಿಯೇ ನಿಲ್ಲುತ್ತದೆ’ ಎಂದು ಮಹಂತ್ ದಿನೇಂದ್ರ ದಾಸ್ ಹೇಳಿದ್ದಾರೆ.










































