ಅಯೋಧ್ಯೆ: ಹಣದ ಕೊರತೆಯಿಂದಾಗಿ ಅಯೋಧ್ಯೆಯಧನ್ನಿಪುರದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಭವ್ಯ ಮಸೀದಿ ಬದಲು ಸಣ್ಣ ಮಸೀದಿ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಬರಲ್ ಫೌಂಡೇಶನ್ (ಐಐಸಿಎಫ್) ನಿರ್ಧರಿಸಿದೆ.
ಮೂಲಗಳ ಪ್ರಕಾರ, ಮಸೀದಿ, ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಪಾಕಶಾಲೆ ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನೆಗೆ ಸುಮಾರು ₹300 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದುವರೆಗೆ ಟ್ರಸ್ಟ್ಗೆ ಕೇವಲ ₹1.5 ಕೋಟಿ ದೇಣಿಗೆ ಲಭಿಸಿದೆ. ಹೀಗಾಗಿ ಯೋಜನೆಯನ್ನು ಮರುಪರಿಶೀಲನೆ ಮಾಡಲು ಟ್ರಸ್ಟ್ ನಿರ್ಧರಿಸಿದೆ.ಇದೀಗ ಮಸೀದಿ ನಿರ್ಮಾಣಕ್ಕೆ ಮಾತ್ರ ಸುಮಾರು ₹3 ಕೋಟಿ ವೆಚ್ಚವಾಗುವಂತೆ ಹೊಸ ಯೋಜನೆ ರೂಪಿಸಲಾಗಿದೆ. ಆಸ್ಪತ್ರೆ ಸೇರಿದಂತೆ ಇತರ ಸೌಲಭ್ಯಗಳ ನಿರ್ಮಾಣವನ್ನು ಕೈಬಿಡುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಭೂಮಿ ಹಂಚಿಕೆ
ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ, ಅಯೋಧ್ಯೆ ಪಟ್ಟಣದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಧನ್ನಿಪುರ ಗ್ರಾಮದಲ್ಲಿ 5 ಎಕರೆ ಜಮೀನನ್ನು ಸುನ್ನಿ ವಕ್ಸ್ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿತ್ತು.
ಮಸೀದಿ ನಿರ್ಮಾಣಕ್ಕಾಗಿ ಇಂಡೋ-ಇಸ್ಲಾಮಿಕ್ ಕಲ್ಬರಲ್ ಫೌಂಡೇಶನ್ ಟ್ರಸ್ಟ್ ರಚನೆಯಾಗಿದ್ದು, ಮಸೀದಿಯ ಜೊತೆಗೆ ಹಲವು ಸಾರ್ವಜನಿಕ ಸೇವಾ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿತ್ತು.
ಇನ್ನೂ ಆರಂಭವಾಗದ ಕಾಮಗಾರಿ
ಆದರೆ ವಿವಿಧ ಕಾರಣಗಳಿಂದಾಗಿ ಮಸೀದಿ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಪ್ರಸ್ತಾವಿತ ಮಸೀದಿಯ ನಕ್ಷೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿದ್ದೂ ವಿಳಂಬಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಸ್ಥಳೀಯ ಮುಸ್ಲಿಮರ ನಿರಾಸಕ್ತಿ
ಅಯೋಧ್ಯೆಯ ಮುಸ್ಲಿಮರಲ್ಲಿ ಧನ್ನಿಪುರ ಮಸೀದಿ ಕುರಿತು ಹೆಚ್ಚಿನ ಉತ್ಸಾಹ ಕಂಡುಬಂದಿಲ್ಲ. ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ಪ್ರಮುಖ ಮುಸ್ಲಿಂ ಅರ್ಜಿದಾರರಾಗಿದ್ದ ಇಟ್ಬಾಲ್ ಅನ್ಸಾರಿ ಈ ಹಿಂದೆ, ‘ಧನ್ನಿಪುರದಲ್ಲಿ ಮಸೀದಿ ನಿರ್ಮಿಸುವ ಅಗತ್ಯವಿಲ್ಲ. ಅಯೋಧ್ಯೆಯಲ್ಲಿ ಎಲ್ಲ ಧರ್ಮಗಳಿಗೂ ಪೂಜಾ ಸ್ಥಳಗಳಿವೆ’ ಎಂದು ಹೇಳಿದ್ದರು.ಅಯೋಧ್ಯೆ ವಕ್ಸ್ ಸಮಿತಿಯ ಪದಾಧಿಕಾರಿಯೊಬ್ಬರೂ, ಧನ್ನಿಪುರ ಅಯೋಧ್ಯೆಯಿಂದ ಸಾಕಷ್ಟು ದೂರದಲ್ಲಿರುವುದರಿಂದ ಅಲ್ಲಿಗೆ ನಮಾಜ್ ಸಲ್ಲಿಸಲು ಸ್ಥಳೀಯ ಮುಸ್ಲಿಮರಲ್ಲಿ ಹೆಚ್ಚಿನವರು ಹೋಗುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.


















































