ಶ್ರೀನಗರ: ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಕಾಶ್ಮೀರದ ವ್ಯಾಪಾರೋದ್ಯಮ ಮತ್ತು ಪ್ರವಾಸೋದ್ಯಮ ಸಂಘಟನೆಗಳು ಬುಧವಾರ ಸಂಪೂರ್ಣ ಬಂದ್ ಆಚರಿಸಲು ಕರೆ ನೀಡಿವೆ.
ದಾಳಿಯಿಂದಾಗಿ ಇಡೀ ಕಾಶ್ಮೀರ ಆಘಾತಕ್ಕೆ ಒಳಗಾಗಿದೆ. ದಾಳಿಯನ್ನು ವ್ಯಾಪಕವಾಗಿ ಖಂಡಿಸಲಾಗಿದೆ. ಹಿಂಸಾಚಾರವನ್ನು ಎದುರಿಸಲು ಒಗ್ಗಟ್ಟಾಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.ಕಾಶ್ಮೀರ ವಾಣಿಜ್ಯೋದ್ಯಮ ಸಂಘಟನೆ (ಸಿಸಿಐಕೆ), ಜಮ್ಮು ಮತ್ತು ಕಾಶ್ಮೀರ ಹೋಟೆಲ್ ಮಾಲೀಕರ ಕ್ಲಬ್ (ಜೆಕೆಎಚ್ಸಿ), ಎಲ್ಲ ಪ್ರಮುಖ ಟ್ರಾವೆಲ್ ಸಂಘಟನೆಗಳು, ರೆಸ್ಟೋರೆಂಟ್ ಮಾಲೀಕರು, ನಾಗರಿಕ ಸಮುದಾಯದ ಸಂಘಟನೆಗಳು ಕಾಶ್ಮೀರ ಬಂದ್ಗೆ ಕರೆ ನೀಡಿವೆ.ಸಂತ್ರಸ್ತರ ಜೊತೆ ಇದ್ದೇವೆ ಎಂಬ ಸಂದೇಶ ರವಾನಿಸಲು ಸಾರ್ವಜನಿಕರು ಒಂದು ದಿನದ ಮಟ್ಟಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಕೈಬಿಡಬೇಕು ಎಂಬ ಮನವಿ ಮಾಡಲಾಗಿದೆ.
‘ಇದೊಂದು ದುರಂತ ಮಾತ್ರವೇ ಅಲ್ಲ, ಇದು ಎಚ್ಚರಿಕೆಯ ಕರೆಗಂಟೆ’ ಎಂದು ಶ್ರೀನಗರದ ಹೋಟೆಲ್ ಮಾಲೀಕ ಇಟ್ಬಾಲ್ ಟ್ರಾಂಬೂ ಹೇಳಿದರು.’ಪ್ರವಾಸಿಗರ ಮೇಲಿನ ದಾಳಿಯು ಹಿಂದೆಂದೂ ಆಗಿರಲಿಲ್ಲ… ಕಾಶ್ಮೀರವು ಭಯೋತ್ಪಾದನೆಯ ಎಲ್ಲ ಬಗೆಗಳನ್ನು ತಿರಸ್ಕರಿಸುತ್ತದೆ ಎಂಬುದನ್ನು ತೋರಿಸಬೇಕು, ಈ ಹಿಂಸಾಚಾರವನ್ನು ಏಕಕಂಠದಲ್ಲಿ ಖಂಡಿಸಬೇಕು’ ಎಂದು ಅವರು ಹೇಳಿದರು. ಬಂದ್ ಕರೆಗೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫಿ ಬೆಂಬಲ ಸೂಚಿಸಿದ್ದಾರೆ.













































