ಕ್ಷೇತ್ರ ಮರುವಿಂಗಡನೆ ಮಸೂದೆ: ಸಂಖ್ಯಾಬಲದ ಆಟದಲ್ಲಿ ಡಿಎಂಕೆಯ ನಿರ್ಧಾರವೇ ನಿರ್ಣಾಯಕ

Picture of Savistara

Savistara

Bureau Report

ನವದೆಹಲಿ: ಲೋಕಸಭಾ ಕ್ಷೇತ್ರಗಳ ಮರು ವಿಂಗಡಿಸಲುಸಂವಿಧಾನ ತಿದ್ದುಪಡಿ ಮಸೂದೆಗೆ ಕಳೆದ ಅಧಿವೇಶನಲ್ಲಿ ಸೋಲಾಗಿತ್ತು. ಈಗ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಅದನ್ನು ಮತ್ತೆ ಮಂಡಿಸಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದ್ದು, ಅಧಿಕೃತ ಘೋಷಣೆ ಆಗಿಲ್ಲ. ಒಂದು ವೇಳೆ ಮಸೂದೆ ಮಂಡಿಸಿದರೆ ಅದನ್ನು ಅಂಗೀಕರಿಸಲು ಅಗತ್ಯವಿರುವ ಎರಡನೇ ಮೂರರಷ್ಟು ಬಹುಮತ ಪಡೆಯಬೇಕಾದರೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಾತ್ರ ನಿರ್ಣಾಯಕವಾಗಲಿದೆ.

ಲೋಕಸಭೆಯಲ್ಲಿ ಡಿಎಂಕೆಗೆ 22 ಸಂಸದರು ಹಾಗೂ ರಾಜ್ಯಸಭೆಯಲ್ಲಿ 8 ಸಂಸದರು ಇದ್ದಾರೆ. ಸರ್ಕಾರದ ಪರ ಡಿಎಂಕೆ ನಿಂತರೆ ಎನ್‌ಡಿಎಗೆ ಅಗತ್ಯ ಸಂಖ್ಯೆಯನ್ನು ತಲುಪುವುದು ಸುಲಭವಾಗಬಹುದು. ಆದರೆ ಪಕ್ಷವು ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಹೊಸ ಮಸೂದೆಯ ವಿವರಗಳನ್ನು ಪರಿಶೀಲಿಸಿದ ಬಳಿಕವೇ ತೀರ್ಮಾನ ಕೈಗೊಳ್ಳುವುದಾಗಿ ಡಿಎಂಕೆ ಹೇಳಿದೆ.ಡಿಎಂಕೆ ನಾಯಕರು, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುರಿದಿದ್ದರೂ ತಾವು ವಿರೋಧ ಪಕ್ಷದಲ್ಲಿಯೇ ಇರುವುದಾಗಿ ಎಂದು ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ವಂದೇ ಮಾತರಂ ಮಸೂದೆ ಹಾಗೂ ಪ್ರಶ್ನೆಪತ್ರ ಸೋರಿಕೆ ತಡೆ ಮಸೂದೆಗಳಿಗೆ ತಿದ್ದುಪಡಿ ಮಂಡಿಸಿ, ವಿರೋಧವಾಗಿ ಮತ ಚಲಾಯಿಸಿದ್ದನ್ನೂ ಅವರು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. ಇದೇ ರೀತಿ, ವಿದೇಶಿ ದೇಣಿಗೆ ನಿಯಂತ್ರಣ (ಎಫ್‌ಸಿಆರ್‌ಎ) ತಿದ್ದುಪಡಿ ಮಸೂದೆ ಬಂದರೂ ವಿರೋಧಿಸುವುದಾಗಿ ತಿಳಿಸಿದ್ದಾರೆ.

ಇನ್ನೊಂದೆಡೆ, ಈ ಮಸೂದೆಗೆ ಡಿಎಂಕೆ ಬೆಂಬಲ ನೀಡುವುದಿಲ್ಲ ಎಂದು ಇಂಡಿಯಾ ಮೈತ್ರಿಕೂಟದ ಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದಾಗ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮಸೂದೆಯ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

`ಕ್ಷೇತ್ರ ಮರುವಿಂಗಡನೆ ಮಸೂದೆಗೆ ಬೆಂಬಲ ನೀಡುವವರು 21ನೇ ಶತಮಾನದ ಎಟ್ಟಪ್ಪನ್‌ ಆಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಬ್ರಿಟಿಷರಿಗೆ ಸಹಾಯ ಮಾಡಿದರೆಂದು ಆರೋಪಿಸಲ್ಪಟ್ಟ 18ನೇ ಶತಮಾನದ ತಮಿಳು ಆಡಳಿತಗಾರ ಎಟ್ಟಪ್ಪನ್‌ಗೆ ಹೋಲಿಕೆ ಮಾಡಿ ಅವರು ಈ ಹೇಳಿಕೆ ನೀಡಿದ್ದಾರೆ.

ಲೋಕಸಭೆಯ ಸಂಖ್ಯಾಬಲ ಹೇಗಿದೆ?

ಪ್ರಸ್ತುತ ಲೋಕಸಭೆಯಲ್ಲಿ 543 ಸ್ಥಾನಗಳಲ್ಲಿ 3 ಸ್ಥಾನಗಳು ಖಾಲಿ ಇದ್ದು, 540 ಸದಸ್ಯರು ಮತ ಚಲಾಯಿಸಿದರೆ ಮಸೂದೆ ಅಂಗೀಕಾರಕ್ಕೆ 360 ಮತಗಳು ಅಗತ್ಯ.ಎನ್‌ಡಿಎಗೆ ಪ್ರಸ್ತುತ 319 ಸಂಸದರು ಇದ್ದಾರೆ.ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ಹಾಗೂ ಶಿವಸೇನಾ (ಯುಬಿಟಿ)ಯಿಂದ ಶಿವಸೇನೆಗೆ ಸೇರಿದ 6 ಸಂಸದರಿಂದ ಎನ್‌ಡಿಎ ಬಲ ಹೆಚ್ಚಿದೆ. ಈ ಹಿಂದೆ ಮಸೂದೆ ಮಂಡಿಸಿದಾಗ ಬೆಂಬಲ ನೀಡಿದ್ದ ವೈಎಸ್‌ಆರ್ ಕಾಂಗ್ರೆಸ್‌ನ 5 ಸಂಸದರು ಬೆಂಬಲಿಸಿದರೆ, ಎನ್‌ಡಿಎ ಬಲ 324ಕ್ಕೆ ಏರಲಿದೆ. ಡಿಎಂಕೆ ಬೆಂಬಲಿಸಿದರೆ ಎನ್‌ಡಿಎ ಬಲ 346 ಆಗುತ್ತದೆ. ಆಗ 14 ಮತಗಳ ಅವಶ್ಯಕತೆ ಬೇಕು.

ಒಂದು ವೇಳೆ ಡಿಎಂಕೆ ಸಭಾತ್ಯಾಗ ಮಾಡಿದರೆ 518 ಸದಸ್ಯರು ಮತ ಚಲಾಯಿಸಲಿದ್ದಾರೆ. ಆಗ ಎರಡನೇ ಮೂರು ಬಹುಮತಕ್ಕೆ 345 ಮತಗಳು ಬೇಕು. ಎನ್‌ಡಿಎ ಬಲ 324 ಇದೆ. ಇನ್ನು 21 ಮತಗಳು ಬೇಕು.

ರಾಜ್ಯಸಭೆಯ ಲೆಕ್ಕಾಚಾರ

ರಾಜ್ಯಸಭೆಯಲ್ಲಿ ಒಟ್ಟು 244 ಸದಸ್ಯರು ಮತ ಚಲಾಯಿಸಿದರೆ, ಮಸೂದೆ ಅಂಗೀಕಾರಕ್ಕೆ 164 ಮತಗಳು ಅಗತ್ಯ. ಎನ್‌ಡಿಎಗೆ 154 ಸದಸ್ಯರು ಇದ್ದಾರೆ. ವೈಎಸ್‌ಆರ್ ಕಾಂಗ್ರೆಸ್‌ನ 4 ಸದಸ್ಯರ ಬೆಂಬಲ ಸಿಕ್ಕರೆ ಸಂಖ್ಯೆ 158ಕ್ಕೆ ಏರಲಿದೆ. ಆಗಲೂ 6 ಮತಗಳ ಕೊರತೆ ಬೀಳಲಿದೆ.ರಾಜ್ಯಸಭೆಯಲ್ಲಿ ಡಿಎಂಕೆ ಸಭಾತ್ಯಾಗ ಮಾಡಿದರೆ, ಮತದಾನ ಮಾಡುವ ಸದಸ್ಯರ ಸಂಖ್ಯೆ 236ಕ್ಕೆ ಇಳಿಯಲಿದ್ದು, ಬಹುಮತಕ್ಕೆ 157 ಮತಗಳು ಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಎನ್‌ಡಿಎ ಮತ್ತು ಬೆಂಬಲಿಗರ ಸಂಖ್ಯೆ 158 ಆಗುವುದರಿಂದ ಮಸೂದೆ ಅಂಗೀಕಾರ ಸಾಧ್ಯವಾಗುವ ಸಾಧ್ಯತೆ ಇದೆ.

[t4b-ticker]
error: Content is protected !!