ಮೈಸೂರು: ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತೂ ಯುದ್ಧದ ಪರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಯುದ್ಧದ ಬದಲು ಭದ್ರತೆಯನ್ನು ಬಿಗಿ ಮಾಡಿಕೊಳ್ಳಬೇಕಿದೆ. ನಾವು ಯಾವತ್ತೂ ಶಾಂತಿಯ ಪರ, ಯುದ್ಧದ ಬಗ್ಗೆ ಯೋಚನೆ ಬೇಡ. ಭದ್ರತೆಯನ್ನು ಬಿಗಿ ಮಾಡಿ ಎಂದು ಸಲಹೆ ನೀಡಿದರು.ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸುವ ವಿಚಾರಕ್ಕೆ ಮಾತನಾಡಿ, ಕೇಂದ್ರದ ಸೂಚನೆಗೆ ನಾವು ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನದ ಪ್ರಜೆಗಳು ಇದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರದ ಸೂಚನೆಯನ್ನು ನಾವು ಪಾಲಿಸುತ್ತೇವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ ಅಲ್ಲಿ ಭದ್ರತೆಯ ವೈಫಲ್ಯ ಉಂಟಾಗಿದೆ. ಹಾಗಾದರೆ ಇವರು ಮಾಡಿದ್ದು ಬರೀ ಭಾಷಣಾನಾ?. ಈಗ ಏನೇ ಕ್ರಮಕೈಗೊಂಡರೂ ಹೋದ 26 ಜೀವಗಳನ್ನು ವಾಪಸ್ ತರಲು ಸಾಧ್ಯಾನಾ?. ಪುಲ್ವಾಮಾ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು ಎಂದು ಯಾರಿಗೆ ಗೊತ್ತಿದೆ ಹೇಳಿ. ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದೆ, ನನ್ನ ಮಾತು ನಿಜವಾಗಿದೆ ಎಂದು ಹೇಳಿದರು. ಸರ್ವ ಪಕ್ಷ ಸಭೆಗೆ ಪ್ರಧಾನಿ ಹೋಗದ ವಿಚಾರ. ಇಂತಹ ಸಭೆಗಿಂತ ಮಹತ್ವದ ಸಭೆ ಯಾವುದು ಇದೆ ಹೇಳಿ. ಚುನಾವಣಾ ಪ್ರಚಾರದ ಭಾಷಣ ಮುಖ್ಯನಾ? ಸಭೆ ಮುಖ್ಯಾನಾ?. ಇವರಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿದೆಯಾ? ಎಂದು ಕಿಡಿಕಾರಿದರು.













































