ಮೇ 25ಕ್ಕೆ ಬಮೂಲ್ ಚುನಾವಣೆ: ಕೆಎಂಎಫ್‌ನತ್ತ ಡಿ.ಕೆ. ಸುರೇಶ್ ಚಿತ್ತ

Picture of Savistara

Savistara

Bureau Report

ರಾಮನಗರ: ರೇಷ್ಮೆ ಜೊತೆಗೆ ಹಾಲು ಉತ್ಪಾದನೆಯಲ್ಲೂಮುಂಚೂಣಿಯಲ್ಲಿರುವ ಜಿಲ್ಲೆಯಲ್ಲೀಗ ಹಾಲಿನ ರಾಜಕಾರಣ ರಂಗೇರಿದೆ. ಮೇ 25ರಂದು ಜಿಲ್ಲೆ ಒಳಗೊಂಡಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಕೆಎಂಎಫ್ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ ಮಾಜಿ ಸಂಸದ ಡಿ.ಕೆ. ಸುರೇಶ್ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುರೇಶ್ ಅವರು ತಮ್ಮ ತೋಟದ ಮನೆ ಇರುವ ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 180 ದಿನ ಹಾಲು ಪೂರೈಕೆ ಮಾಡಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬಮೂಲ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಂಘದಿಂದ ಡೆಲಿಗೇಷನ್ ಫಾರಂ ಸಹ ಪಡೆದಿರುವ ಅವರು, ಬಮೂಲ್ ಚುನಾವಣೆಯಲ್ಲಿ ಗೆದ್ದು ಕೆಎಂಎಫ್ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಿದ್ದತೆ ನಡೆಸಿದ್ದಾರೆ ಎನ್ನುತ್ತವೆ ಮೂಲಗಳು.

‘ಕೈ’ ಕ್ಲೀನ್ ಸ್ವೀಪ್ ತಂತ್ರ:

ಜಿಲ್ಲೆಯ 5 ತಾಲ್ಲೂಕುಗಳಿಂದ ಒಟ್ಟು 6 ನಿರ್ದೇಶಕರು ಬಮೂಲ್ ಪ್ರತಿನಿಧಿಸಲಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಹಾರೋಹಳ್ಳಿ ತಾಲ್ಲೂಕು ಕೇಂದ್ರಗಳ ಜೊತೆಗೆ ಮಾಗಡಿ ತಾಲ್ಲೂಕಿನ ಕುದೂರು ಕ್ಷೇತ್ರದಿಂದ ಒಬ್ಬರ ಆಯ್ಕೆಗೆ ಚುನಾವಣೆ ನಡೆಯಲಿದೆ. ಸದ್ಯ ಚನ್ನಪಟ್ಟಣದಲ್ಲಷ್ಟೇ ಜೆಡಿಎಸ್ ಪ್ರಾತಿನಿಧ್ಯವಿದ್ದು, ಉಳಿದ 5 ಸ್ಥಾನಗಳು ಕಾಂಗ್ರೆಸ್ ತೆಕ್ಕೆಯಲ್ಲಿವೆ.“ಆರು ಕ್ಷೇತ್ರಗಳ ಪೈಕಿ, ಸುರೇಶ್ ತಮ್ಮ ತವರಾದ ಕನಕಪುರದಿಂದ ಕಣಕ್ಕಿಳಿಯಲಿದ್ದಾರೆ. ಅವರು ಅವಿರೋಧವಾಗಿ ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಾತಿನಿಧ್ಯವನ್ನು ಜಿಲ್ಲೆಯಲ್ಲಿ ಶೂನ್ಯಕ್ಕಿಳಿಸಿರುವ ಡಿ.ಕೆ ಸಹೋದರರು ಬಮೂಲ್ ಚುನಾವಣೆಯಲ್ಲೂ ಕ್ಲೀನ್ ಸ್ವೀಪ್ ಮಾಡಿ ಜೆಡಿಎಸ್‌ಗೆ ಪಾಠ ಕಲಿಸಲು ರಣವ್ಯೂಹ ರಚಿಸಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.

‘ಸದ್ಯ ಕನಕಪುರ ಕ್ಷೇತ್ರ ಪ್ರತಿನಿಧಿಸುತ್ತಿರುವ ಎಚ್‌.ಪಿ. ರಾಜಕುಮಾ‌ರ್ ಬಮೂಲ್ ಅಧ್ಯಕ್ಷರಾಗಿದ್ದಾರೆ. ಸುರೇಶ್ ಸ್ಪರ್ಧೆಗೆ ಯಾವುದೇ ತಕರಾರಿಲ್ಲದೆ ಬಿಟ್ಟು ಕೊಡುತ್ತಾರೆ. ಕನಕಪುರ ಮತ್ತು ಹಾರೋಹಳ್ಳಿ ಕ್ಷೇತ್ರದಲ್ಲಿ ಸಹೋದರರು ಯಾರನ್ನು ಸೂಚಿಸುತ್ತಾರೊ ಅವರೇ ನಿರ್ದೇಶಕರು. ಅಷ್ಟರ ಮಟ್ಟಿಗೆ ಅಲ್ಲಿ ಅವರ ಹಿಡಿತವಿದೆ’ ಎಂದರು.

ಹಿಡಿತ ತಪ್ಪಿಸಿದ್ದ ಡಿಕೆಶಿ:

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರುಜಿಲ್ಲೆಯ ರಾಜಕಾರಣ ಪ್ರವೇಶಿಸಿದಾಗಿನಿಂದ ಅವರಿಗೆ ಪ್ರಬಲ ಎದುರಾಳಿಯಾಗಿರುವವರು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್. ಗೌಡರ ಬಳಿಕ ಎಚ್‌.ಡಿ. ಕುಮಾರಸ್ವಾಮಿ ಜಿಲ್ಲೆಯ ರಾಜಕಾರಣದಲ್ಲಿ ಮುಂಚೂಣಿಗೆ ಬಂದ ಬಳಿಕ, ಇಬ್ಬರ ನಡುವಣ ರಾಜಕೀಯ ಹಣಾಹಣಿ ಹೆಚ್ಚುತ್ತಲೇ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದ ಎಲ್ಲಾ ಹಂತದ ಚುನಾವಣೆಗಳಲ್ಲೂ ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ಪರಸ್ಪರ ಹೋರಾಡಿಕೊಂಡು ಬಂದಿದ್ದಾರೆ.2001ರಲ್ಲಿ ಸಹಕಾರ ಸಚಿವರಾಗಿದ್ದ ಶಿವಕುಮಾ‌ರ್, ಕೆಎಂಎಫ್‌ನಲ್ಲಿ ಗೌಡರ ಕುಟುಂಬ ಹೊಂದಿದ್ದ ಹಿಡಿತವನ್ನು ಸಡಿಲಗೊಳಿಸಿದ್ದರು. ಆಗ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಗೌಡರ ಪುತ್ರ ಎಚ್.ಡಿ. ರೇವಣ್ಣ ಅವರನ್ನು ಸೋಲಿಸಿ ಕಾಂಗ್ರೆಸ್ಸಿರನ್ನು ಕೂರಿಸುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದರು. ಆ ಮೂಲಕ, ಹಾಲಿನ ರಾಜಕಾರಣದಲ್ಲಿ ಗೌಡರ ಕುಟುಂಬಕ್ಕೆ ಸವಾಲು ಹಾಕಿದ್ದರು.

ಜಿಲ್ಲೆಯಲ್ಲಿವೆ 933 ಸಂಘಗಳು:

ಜಿಲ್ಲೆಯಲ್ಲಿ 933 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಪೈಕಿ ಆಡಳಿತ ಮಂಡಳಿ ಹೊಂದಿರುವ ಜೊತೆಗೆ ಒಕ್ಕೂಟಕ್ಕೆ ಸಮರ್ಪಕವಾಗಿ ಲೆಕ್ಕಪತ್ರ ಸಲ್ಲಿಸಿ ‘ಎ’ ದರ್ಜೆ ಮತ್ತು ‘ಬಿ’ ದರ್ಜೆಯಲ್ಲಿರುವ ಹಾಗೂ ಯಾವುದೇ ಬಾಕಿ ಉಳಿಸಿಕೊಳ್ಳದ ಸಂಘಗಳ ಅಧ್ಯಕ್ಷರು ಅಥವಾ ನಿರ್ದೇಶಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.ಮತದಾನ ಮತ್ತು ಸ್ಪರ್ಧೆಗೆ ಸಂಘಗಳು ತಮ್ಮ ಪ್ರತಿನಿಧಿಯನ್ನು ನಿಯೋಜಿಸಿ, ಅವರಿಗೆ ಒಕ್ಕೂಟದಿಂದ ಡೆಲಿಗೇಷನ್ ಫಾರಂ ಪಡೆದುಕೊಳ್ಳಬೇಕು. ಮೇ 2ವರೆಗೆ ಡೆಲಿಗೇಷನ್ ಫಾರಂ ಪಡೆದುಕೊಳ್ಳಲು ಸಂಘಗಳಿಗೆ ಅವಕಾಶವಿದೆ. ಬಳಿಕ, ಚುನಾವಣಾಧಿಕಾರಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದ್ದು, ಮೇ 25ಕ್ಕೆ ಚುನಾವಣೆ ನಡೆಯಲಿದೆ.

ಅಖಾಡಕ್ಕೆ ಯೋಗೇಶ್ವ‌ರ್, ನಿಖಿಲ್

ಚೆನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಜೆಡಿಎಸ್‌ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಬಮೂಲ್‌ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂತ್ರ ಹೆಣೆಯುತ್ತಿದ್ದಾರೆ. ಡೇರಿಗಳ ಸಿಇಒಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಯೋಗೇಶ್ವ‌ರ್ ಇತ್ತೀಚೆಗೆ ಸಭೆ ನಡೆಸಿದ್ದಾರೆ. ಎದುರಾಳಿ ಜೆಡಿಎಸ್‌ನ ಹಾಲಿ ನಿರ್ದೇಶಕ ಜಯಮುತ್ತು ವಿರುದ್ಧ ಪಕ್ಷದ ಬೆಂಬಲಿತ ಅಭ್ಯರ್ಥಿ ಎಸ್. ಲಿಂಗೇಶ್ ಕುಮಾರ್ ಗೆಲ್ಲಿಸಲು ಬಲವಾಗಿ ಬೆನ್ನಿಗೆ ನಿಂತಿದ್ದಾರೆ. ಸ್ವತಃ ಮತಯಾಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕುಸಿದಿರುವ ಜೆಡಿಎಸ್‌ ಬಲವನ್ನು ಬಮೂಲ್ ಚುನಾವಣೆಗೆಯ ಗೆಲುವಿನ ಮೂಲಕ ವೃದ್ಧಿಸಲು ಮುಂದಾಗಿರುವ ನಿಖಿಲ್ ಕಾಂಗ್ರೆಸ್‌ಗೆ ಎದಿರೇಟು ಕೊಡಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ರಾಮನಗರ ತಾಲ್ಲೂಕಿನಲ್ಲಿ ತಮ್ಮ ಪಕ್ಷದ ಬೆಂಬಲಿತ ಡೇರಿ ಪದಾಧಿಕಾರಿಗಳು ಹಾಗೂ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಸತತ 6 ಸಲ ಬಮೂಲ್ ಪ್ರತಿನಿಧಿಸಿ 7 ಸಲ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಪಿ. ನಾಗರಾಜ್ ವಿರುದ್ಧ ಬಿಡದಿಯ ರೇಣುಕಾ ಕೆಂಪಣ್ಣ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಅನುಭವಿ ಅಭ್ಯರ್ಥಿ ಎದುರು ಹೊಸ ಮುಖವನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ.

ಕಣಕ್ಕಿಳಿಯುವರೇ ತಮ್ಮಾಜಿ?

ಮಾಗಡಿ ತಾಲ್ಲೂಕಿನಿಂದ ಈಗಾಗಲೇ ಮೂರು ಸಲ ಬಮೂಲ್ ಪ್ರತಿನಿಧಿಸಿರುವ ಮಾಜಿ ಅಧ್ಯಕ್ಷರು ಆಗಿರುವ ನರಸಿಂಹಮೂರ್ತಿ ಬದಲಿಗೆ ಶಾಸಕ ಎಚ್‌.ಸಿ. ಬಾಲಕೃಷ್ಣ ಸಹೋದರ ಎಚ್‌.ಎನ್‌. ಅಶೋಕ್‌ (ತಮ್ಮಾಜಿ) ಕಣಕ್ಕಿಲಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರೂ ಆಗಿರುವ ತಮ್ಮಾಜಿ ಹುಲಿಕಟ್ಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಸ್ಪರ್ಧೆಗೆ ಆಸಕ್ತಿ ಸಿದ್ಧತೆ ನಡೆಸಿದ್ದಾರೆ ಎನ್ನುತ್ತಾರೆ ಸ್ಥಳೀಯ ಮುಖಂಡರು. ಕಳೆದ ಸಲ ಬಮೂಲ್ ಚುನಾವಣೆಯಲ್ಲಿ ಸೋಲುಂಡಿದ್ದ ಪೂಜಾರಿಪಾಳ್ಯ ಕೃಷ್ಣಮೂರ್ತಿ ಇದೀಗ ಕಾಂಗ್ರೆಸ್‌ನಲ್ಲಿದ್ದಾರೆ. ಈ ಸಲ ಅವರಿಗೇ ಅವಕಾಶ ಕೊಟ್ಟರೂ ಕೊಡಬಹುದು ಎಂದು ಕೆಲವರು ಹೇಳುತ್ತಾರೆ. ಕುದೂರಿನಿಂದ ಹಾಲಿ ನಿರ್ದೇಶಕ ರಾಜಣ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಪ್ರಬಲ ಕೈ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಮುಂದಾಗಿರುವ ಜೆಡಿಎಸ್ ಮಾಗಡಿಯಿಂದ ನರಸಿಂಹಯ್ಯ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಕುದೂರಿನಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ ಎನ್ನುತ್ತವೆ ಪಕ್ಷದ ಮೂಲಗಳು.

ಸ್ಪರ್ಧೆಗಿರುವ ನಿಯಮವೇನು?

ಬಮೂಲ್‌ ಚುನಾವಣೆ ಸಹಕಾರ ಸಂಸ್ಥೆಯ ಚುನಾವಣೆಯಾಗಿದೆ. ಸಂಘಗಳ ಚುನಾವಣಾ ನಿಯಮ ಹಾಗೂ ಒಕ್ಕೂಟದ ಬೈಲಾ ಪ್ರಕಾರ ಚುನಾವಣೆ ನಡೆಯಲಿದೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಬೇಕಾದರೆ ತಾನು ಪ್ರತಿನಿಧಿಸಲು ಇಚ್ಛಿಸುವ ತಾಲ್ಲೂಕಿನ ಯಾವುದಾದರೂ ಒಂದು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿರಬೇಕು. ನಿರ್ದೇಶ ಕಸ್ಥಾನದ ಚುನಾವಣೆಗೆ ಸ್ಪರ್ಧಿಸಲು 180 ದಿನ ನಿರಂತರವಾಗಿ ಸಂಘಕ್ಕೆ ಹಾಲು ಪೂರೈಕೆ ಮಾಡಿರಬೇಕು. ಸಂಘದ ನಿರ್ದೇಶಕ ಮಂಡಳಿ ಸಭೆಯಲ್ಲಿ ಬಹುಮತದ ಮೇರೆಗೆ ಒಕ್ಕೂಟದ ಚುನಾವಣೆಯಲ್ಲಿ ಸಂಘದ ಪರವಾಗಿ ಪಾಲ್ಗೊಳ್ಳಲು ಡೆಲಿಗೇಷನ್‌ ಪಡೆದಿರಬೇಕು.ಡೆಲಿಗೇಷನ್ ಪಡೆದ ಸಂಘಗಳಿಗೆ ಮತದಾನದ ಹಕ್ಕು ಸಿಗಲಿದೆ.

[t4b-ticker]
error: Content is protected !!