ಕೆಎಂಎಫ್‌ ಅಧ್ಯಕ್ಷರಾಗಲು ಡಿಕೆ ಸುರೇಶ್ ತಾಲೀಮು: ಎಲ್ಲರಿಗಿಂತ ಮೊದಲು ಕನಕಪುರದಲ್ಲಿ ಡೆಲಿಗೇಷನ್ ಫಾರಂ ಪಡೆದ ಮಾಜಿ ಸಂಸದ!

Picture of Savistara

Savistara

Bureau Report

ಲೋಕಸಭೆ ಚುನಾವಣೆಯಲ್ಲಿನ ಸೋಲಿನ ನಂತರ, ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ಬಮೂಲ್ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಲು ಡೆಲಿಗೇಷನ್ ಫಾರಂ ಪಡೆದಿದ್ದಾರೆ. ಈ ಹಿಂದೆ ದೇವೇಗೌಡರ ಕುಟುಂಬವು ಕೆಎಂಎಫ್‌ನಲ್ಲಿ ಅಧಿಕಾರ ಹೊಂದಿತ್ತು, ಈಗ ಸುರೇಶ್ ಈ ಸ್ಥಾನಕ್ಕೆ ಪ್ರವೇಶಿಸುತ್ತಿರುವುದು ಕುತೂಹಲ ಮೂಡಿಸಿದೆ. ಈ ನಡೆಯು ಅವರು ಹಿಂಬಾಗಿಲಿನಿಂದ ರಾಜಕೀಯ ಪ್ರವೇಶಿಸಿಲ್ಲ ಎಂಬುದನ್ನು ತೋರಿಸುತ್ತದೆ.

ರಾಮನಗರ: ಲೋಕಸಭೆ ಚುನಾವಣೆ ಪರಾಭವದ ಬಳಿಕ ಕೆಲವು ದಿನ ಕ್ಷೇತ್ರದಲ್ಲಿ ಸುತ್ತಾಡಿಕೊಂಡಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್‌, ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್‌)ನ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಮತ್ತೆ ಚುನಾವಣೆ ರಾಜಕೀಯಕ್ಕೆ ಧುಮುಕಿದ್ದಾರೆ.

ಇದೇ ಮೇ 25ರಂದು ಬಮೂಲ್‌ ನಿರ್ದೇಶಕರ ಚುನಾವಣೆ ನಡೆಯುತ್ತಿದ್ದು, ಸುರೇಶ್‌ ಅವರು ಇದರಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಡೆಲಿಗೇಷನ್‌ ಫಾರಂ ಪಡೆದುಕೊಂಡಿದ್ದಾರೆ. ಬಮೂಲ್‌ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವುದು, ಮತದಾನದಲ್ಲಿ ಪಾಲ್ಗೊಳ್ಳುವುದೂ ಸೇರಿದಂತೆ, ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಸರಕಾರದಿಂದ ನೇರವಾಗಿ ನಾಮ ನಿರ್ದೇಶನಗೊಳ್ಳುವುದಕ್ಕೂ ಈ ಡೆಲಿಗೇಷನ್‌ ಫಾರಂ ಸಹಕಾರಿ ಆಗಲಿದೆ.

ಹಿಂದಿನಿಂದಲೂ ಚರ್ಚೆ:ವರ್ಷಗಳ ಹಿಂದಿನಿಂದಲೂ ಕೆಎಂಎಫ್‌ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಡಿ.ಕೆ.ಸುರೇಶ್‌ ಅವರ ಹೆಸರು ಕೇಳಿಬರುತ್ತಲೇ ಇತ್ತು. ನನ್ನ ಸಹೋದರ ಹಾಲಿನ ಡೇರಿಯಲ್ಲಿ ಸದಸ್ಯ. ಹಿಂದಿನಿಂದಲೂ ಹಾಲು ಹಾಕುತ್ತಿದ್ದಾನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಎಲ್ಲ ಪ್ರಶ್ನೆಗಳಿಗೂ ಮುಗುಳು ನಗೆ ಬೀರುತ್ತಲೇ, ಇನ್ನು ಟೈಂ ಇದೆ ನೋಡೋಣ ಎನ್ನುತ್ತಿದ್ದ ಡಿ.ಕೆ.ಸುರೇಶ್‌, ಎಲ್ಲರಿಗಿಂತ ಮೊದಲೇ ಕನಕಪುರದ ಕೋಡಿಹಳ್ಳಿ ಹಾಲಿನ ಡೇರಿಯಿಂದ ‘ಡೆಲಿಗೇಷನ್‌ ಫಾರಂ’ ಪಡೆದುಕೊಂಡಿರುವುದು ಈ ಸುದ್ದಿಗಳಿಗೆ ಇನ್ನಷ್ಟು ಪುಷ್ಠಿ ನೀಡುತ್ತಿದೆ.

ಹೊಸದೇನು ಅಲ್ಲ:ಹಾಲಿನ ರಾಜಕಾರಣಕ್ಕೆ ಪ್ರತಿಷ್ಠಿತ ಕುಟುಂಬಗಳು ಸ್ಪರ್ಧಿಸುವುದು ಹೊಸದೇನು ಅಲ್ಲ. ಈ ಹಿಂದೆ ದೇವೇಗೌಡರ ಕುಟುಂಬ ಅನೇಕ ವರ್ಷಗಳ ಕಾಲ ಕೆಎಂಎಫ್‌ನಲ್ಲಿಅಧಿಕಾರ ಹೊಂದಿತ್ತು. ಎಚ್‌.ಡಿ.ರೇವಣ್ಣ ಕೆಎಂಎಫ್‌ ಅಧ್ಯಕ್ಷರಾಗಿದ್ದ ವೇಳೆ ಅವರ ವಿರುದ್ಧ ಹೋರಾಟ ನಡೆಸುತ್ತಿದ್ದ ಡಿಕೆಶಿ, 2002ರಲ್ಲಿ ಮಹಶ್ವರಪ್ಪ ಎನ್ನುವವರನ್ನು ಗೆಲ್ಲಿಸಿಕೊಂಡಿದ್ದರು. ಈಗ, ಡಿ.ಕೆ.ಸುರೇಶ್‌ ನೇರವಾಗಿ ಕೆಎಂಎಫ್‌ಗೆ ಎಂಟ್ರಿ ನೀಡುತ್ತಿದ್ದಾರೆ.

ಭೀಮಾ ನಾಯಕ್‌, ಬಾಲಚಂದ್ರ ಜಾರಕಿಹೊಳೆ, ಜನಾರ್ದನರೆಡ್ಡಿ ಅವರ ಸಹೋದರ ಜಿ.ಸೋಮಶೇಖರ್‌ರೆಡ್ಡಿ, ಎಂ.ಪಿ.ರವೀಂದ್ರ…ಹೀಗೆ ಅನೇಕ ಘಟಾನುಘಟಿ ನಾಯಕರುಗಳು ಕೆಎಂಎಫ್‌ ಅಧ್ಯಕ್ಷರಾಗಿದ್ದರು. ರಾಜ್ಯದಲ್ಲಿ 1 ಕೋಟಿಗೂ ಅಧಿಕ ಲೀಟರ್‌ ಹಾಲು ಪೂರೈಸುವುದರೊಂದಿಗೆ ಸಾವಿರಾರು ಕೋಟಿ ವ್ಯವಹಾರ ನಡೆಸುವ ಕೆಎಂಎಫ್‌ಗೆ ಅಧ್ಯಕ್ಷರಾಗುವುದು ಪ್ರತಿಷ್ಠೆಯ ವಿಷಯವು ಹೌದು.

ಡೆಲಿಗೇಷನ್‌ ಫಾರಂ ಎಂದರೇನು?:ಮೇ 25ಕ್ಕೆ ಬಮೂಲ್‌ನ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಾಗಿ ಡೆಲಿಗೇಷನ್‌ ಫಾರಂ ಪಡೆಯುವವರು, ನಿರ್ದೇಶಕರ ಸ್ಥಾನಗಳಿಗೆ ಸ್ಫರ್ಧಿಸಬಹುದು. ಇಲ್ಲವೇ, ಮತದಾನ ಮಾಡಬಹುದು. ಚುನಾವಣೆಯ ಎಲ್ಲ ಕೆಲಸಗಳಲ್ಲಿಯೂ ಭಾಗವಹಿಸಬಹುದು. ಇನ್ನು ಚುನಾವಣೆ ವ್ಯಾಪ್ತಿಯಲ್ಲಿನ ಪ್ರತಿ ಹಾಲಿನ ಡೇರಿಯಲ್ಲಿ ಒಬ್ಬರಿಗೆ ಮಾತ್ರವೇ ಡೆಲಿಗೇಷನ್‌ ಫಾರಂ ನೀಡಲಾಗುವುದು. ಈ ಡೆಲಿಗೇಷನ್‌ ಫಾರಂ ಹೊಂದಿರುವವರು ಮಾತ್ರವೇ ಮತದಾನಕ್ಕೆ ಅರ್ಹರು

ಅಪವಾದ ತಪ್ಪಿಸಿಕೊಳ್ಳಲು ಕ್ರಮಮಾಜಿ ಸಂಸದರಾಗಿದ್ದ ಡಿ.ಕೆ.ಸುರೇಶ್‌, ಡೆಲಿಗೇಷನ್‌ ಫಾರಂ ಪಡೆದು, ಕೇವಲ ಮತ ಚಲಾಯಿಸುವ ಅವಶ್ಯಕತೆ ಇರಲಿಲ್ಲ. ಈ ಫಾರಂ ಮೂಲಕ ನಿರ್ದೇಶಕ ಸ್ಥಾನಕ್ಕೆ ಸ್ಫರ್ಧಿಸುವ ಅನಿವಾರ‍್ಯವು ಅವರಿಗಿಲ್ಲ. ಸರಕಾರವೇ ನೇರವಾಗಿ ನಾಮ ನಿರ್ದೇಶನ ಮಾಡಿ, ಅಧಿಕಾರ ನೀಡಬಹುದು. ಆದರೂ, ಅವರು ಡೆಲಿಗೇಷನ್‌ ಫಾರಂ ಪಡೆಯುವ ಮೂಲಕ ‘ನಾನು ಹಿಂಬಾಗಿಲಿನ ಮೂಲಕ ರಾಜಕೀಯ ನಡೆಸಿಲ್ಲ’ ಎಂಬ ಸಂದೇಶದೊಂದಿಗೆ ಕೆಎಂಎಫ್‌ಗೆ ಪೂರ್ವ ಸಿದ್ಧತೆಗಳನ್ನು ಡಿಕೆ ಸಹೋದರರು ಅಂತಿಮಗೊಳಿಸಿದ್ದಾರೆ ಎನ್ನಬಹುದು.

ಸರಕಾರವೇ ನಾಮ ನಿರ್ದೇಶನ ಮಾಡಿದರೆ, ಸರಕಾರ ಅಂತ್ಯಗೊಂಡ ಬಳಿಕ ಅವರ ಅಧಿಕಾರವು ಮೊಟಕುಗೊಳ್ಳಬಹುದು. ಆದರೆ, ಡೆಲಿಗೇಷನ್‌ ಫಾರಂ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಸರಕಾರ ಪತನಗೊಂಡರೂ, 5 ವರ್ಷ ಪೂರ್ಣವಧಿ ಅಧಿಕಾರ ನಡೆಸಬಹುದು ಎಂಬುದು ಡಿಕೆ ಸಹೋದರರ ಲೆಕ್ಕಾಚಾರ.ನಮ್ಮದು ಕೃಷಿಕರ ಕುಟುಂಬ, ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ತಾಯಿ ಅವರು ಮೊದಲಿನಿಂದಲೂ ಹಸು ಸಾಕಿಕೊಂಡು ಡೇರಿಗೆ ಹಾಲು ಹಾಕುತ್ತಿದ್ದರು. ಅವರಿಗೆ ವಯಸ್ಸಾಗಿರುವುದರಿಂದ ನನ್ನ ತಮ್ಮ ಸುರೇಶ್‌ ಹಾಲು ಹಾಕುತ್ತಿದ್ದಾನೆ. ಆತ ಹಾಲಿನ ಡೇರಿಯ ಸದಸ್ಯನೂ ಹೌದು ಎನ್ನುತ್ತಾರೆ ಡಿಸಿಎಂ ಡಿ.ಕೆ. ಶಿವಕುಮಾರ್‌

[t4b-ticker]
error: Content is protected !!