ಇಷ್ಟೊಂದು ದುರಹಂಕಾರವಾ? ಭಾರತೀಯ ಸೇನೆಯನ್ನು ‘Use less’ ಎಂದ ಶಾಹಿದ್‌ ಅಫ್ರಿದಿ

Picture of Savistara

Savistara

Bureau Report

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭಾರತೀಯ ಸೇನೆಯನ್ನು ಟೀಕಿಸಿದ್ದಾರೆ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಈ ದಾಳಿಗೆ ಭಾರತೀಯ ಸೇನೆಯ ಅಸಮರ್ಥತೆಯೇ ಕಾರಣ ಎಂದು ಅಫ್ರಿದಿ ಹೇಳಿದ್ದಾರೆ. ಭಾರತೀಯ ಸೇನೆಯನ್ನು ಶಾಹಿದ್‌ ಅಫ್ರಿದಿ ‘use lessʼ ಎಂದು ಕರೆದಿರುವುದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಭಾರತೀಯ ಮಾಧ್ಯಮಗಳು ಈ ವಿಷಯವನ್ನು ವಿಕೃತವಾಗಿ ಬಿಂಬಿಸುತ್ತಿವೆ ಎಂದು ದೂರಿದ್ದಾರೆ.

ಕರಾಚಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭಾರತೀಯ ಸೇನೆಯನ್ನು ಟೀಕಿಸಿದ್ದಾರೆ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಈ ದಾಳಿಗೆ ಭಾರತೀಯ ಸೇನೆಯ ಅಸಮರ್ಥತೆಯೇ ಕಾರಣ ಎಂದು ಅಫ್ರಿದಿ ಹೇಳಿದ್ದಾರೆ.

ಭಾರತೀಯ ಸೇನೆಯನ್ನು ಶಾಹಿದ್‌ ಅಫ್ರಿದಿ ‘use lessʼ ಎಂದು ಕರೆದಿರುವುದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಭಾರತೀಯ ಮಾಧ್ಯಮಗಳು ಈ ವಿಷಯವನ್ನು ವಿಕೃತವಾಗಿ ಬಿಂಬಿಸುತ್ತಿವೆ ಎಂದು ದೂರಿದ್ದಾರೆ. ಕೆಲ ಭಾರತೀಯ ಕ್ರಿಕೆಟಿಗರು ಯಾವುದೇ ಆಧಾರವಿಲ್ಲದೆ ಪಾಕಿಸ್ತಾನವನ್ನು ದೂರುತ್ತಿದ್ದಾರೆ ಎಂದು ಖಂಡಿಸಿದ್ದಾರೆ.

ಪಾಕಿಸ್ತಾನದ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಭಾರತೀಯ ಸೇನೆಯನ್ನು ಟೀಕಿಸಿದರು. ‘ಅಲ್ಲಿ (ಭಾರತ) ಪಟಾಕಿ ಸಿಡಿದರೂ, ಪಾಕಿಸ್ತಾನ ಮಾಡಿದೆ ಎನ್ನುತ್ತಾರೆʼ ಎಂದು ವ್ಯಂಗ್ಯವಾಡಿದರು. ಕಾಶ್ಮೀರದಲ್ಲಿ 8 ಲಕ್ಷ ಸೈನಿಕರಿದ್ದರೂ ಪಹಲ್ಗಾಮ್‌ನಲ್ಲಿ ಉಗ್ರ ದಾಳಿ ಘಟನೆ ನಡೆದಿದೆ. ಅಂದರೆ ನೀವು ಅಸಮರ್ಥರು. ಜನರಿಗೆ ಭದ್ರತೆ ನೀಡಲು ಸಾಧ್ಯವಾಗದವರು ನೀವು ಎಂದು ಅಫ್ರಿದಿ ಹೇಳಿದ್ದಾರೆ.

‘ಪಹಲ್ಗಾಮ್‌ ದಾಳಿಯಾದ ಒಂದು ಗಂಟೆಯಲ್ಲೇ ಅವರ ಮಾಧ್ಯಮಗಳು ಬಾಲಿವುಡ್ ಆದವು. ದೇವರಿಗಾಗಿ ಎಲ್ಲವನ್ನೂ ಬಾಲಿವುಡ್ ಮಾಡಬೇಡಿʼ ಎಂದು ಅಫ್ರಿದಿ ಕಿಡಿಕಾರಿದರು. ಭಾರತೀಯ ಮಾಧ್ಯಮಗಳು ವಿಷಯವನ್ನು ತಿರುಚಿ, ಬೇರೆ ರೀತಿಯಲ್ಲಿ ಬಿಂಬಿಸುತ್ತಿವೆ. ಅವರು ಮಾತನಾಡುತ್ತಿದ್ದ ರೀತಿಯನ್ನು ನಾನು ಆನಂದಿಸುತ್ತಿದ್ದೆ. ಅವರ ಯೋಚನೆಗಳನ್ನು ನೋಡಿ, ಅವರು ತಮ್ಮನ್ನು ತಾವು ವಿದ್ಯಾವಂತರು ಎಂದು ಕರೆದುಕೊಳ್ಳುತ್ತಾರೆʼ ಎಂದು ಅಫ್ರಿದಿ ವ್ಯಂಗ್ಯವಾಡಿದರು.

ಯಾವುದೇ ಪುರಾವೆಗಳಿಲ್ಲದೆ ಪಾಕಿಸ್ತಾನವನ್ನು ದೂಷಿಸುತ್ತಿರುವ ಭಾರತೀಯ ಕ್ರಿಕೆಟಿಗರನ್ನು ಅಫ್ರಿದಿ ತರಾಟೆಗೆ ತೆಗೆದುಕೊಂಡರು. ‘ಭಾರತದ ಪರವಾಗಿ ಬಹಳ ಕ್ರಿಕೆಟ್ ಆಡಿದ ಇಬ್ಬರು ಕ್ರಿಕೆಟಿಗರು ರಾಯಭಾರಿಗಳಾಗಿದ್ದರು. ದೊಡ್ಡ ಕ್ರಿಕೆಟಿಗರಾಗಿದ್ದರೂ ಅವರು ನೇರವಾಗಿ ಪಾಕಿಸ್ತಾನವನ್ನು ದೂಷಿಸುತ್ತಾರೆ. ಏಕೆ ಪಾಕಿಸ್ತಾನ? ಏನಾದರೂ ಪುರಾವೆ ತೋರಿಸಿʼ ಎಂದು ಅಫ್ರಿದಿ ಪ್ರಶ್ನಿಸಿದರು.

ಕುಲಭೂಷಣ್ ಜಾಧವ್ ಇನ್ನೂ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೇನೆ ವಾಪಸ್ ಕಳುಹಿಸಿತು. ‘ನಾವು ನಿಮಗೆ ಪುರಾವೆಗಳನ್ನು ನೀಡಿದ್ದೇವೆ. ಒಬ್ಬರು ಇನ್ನೂ ನಮ್ಮೊಂದಿಗಿದ್ದಾರೆ. ಇನ್ನೊಬ್ಬರಿಗೆ ಚಹಾ ಕುಡಿಸಿ ವಾಪಸ್ ಕಳುಹಿಸಿದ್ದೇವೆʼ ಎಂದು ಅಫ್ರಿದಿ ಹೇಳಿದರು. ‘ನಮಗೆ ಪುರಾವೆ ತೋರಿಸಿ, ಸುಮ್ಮನೆ ನಮ್ಮನ್ನು ದೂಷಿಸಬೇಡಿʼ ಎಂದು ಆಗ್ರಹಿಸಿದರು.

‘ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಭಾರತವೇ ಕಾರಣ. ನಮ್ಮ ದೇಶದಲ್ಲಿ ಏನಾಗುತ್ತಿದೆ? ಬಲೂಚಿಸ್ತಾನದಲ್ಲಿ ಏನಾಗುತ್ತಿದೆ? ಇದರ ಹಿಂದೆ ಯಾರು ಇದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ನಾವು ಎಂದಿಗೂ ಯಾವುದೇ ಆರೋಪ ಮಾಡಿಲ್ಲ. ನಾವು ಭಾರತ ಮತ್ತು ಜಗತ್ತಿಗೆ ಪುರಾವೆ ನೀಡಿದ್ದೇವೆʼ ಎಂದು ಹೇಳಿದರು.

ಶಾಹಿದ್‌ ಅಫ್ರಿದಿ ಹೇಳಿಕೆಗಳು ಭಾರತದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಭಾರತೀಯ ಮಾಧ್ಯಮಗಳು ಅಫ್ರಿದಿ ಅವರ ಹೇಳಿಕೆಯನ್ನು ಖಂಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅಫ್ರಿದಿ ಅವರ ಹೇಳಿಕೆಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಯಿದೆ. ಪಹಲ್ಗಾಮ್‌ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇನ್ನಷ್ಟು ಹಳಸಿರುವ ಹೊತ್ತಿನಲ್ಲಿ ಶಾಹಿದ್ ಅಫ್ರಿದಿ ಹೇಳಿಕೆಗಳು ಸಾಕಷ್ಟು ವಿವಾದ ಹುಟ್ಟು ಹಾಕಿದೆ.

[t4b-ticker]
error: Content is protected !!