ಸುಳ್ಯ, ಮೇ 29: ರಾಷ್ಟ್ರೀಯ ಹೆದ್ದಾರಿ 275ರ ಮಾಣಿ-ಸಂಪಾಜೆ ನಡು ವಿನ 71.60 ಕಿ.ಮೀ. ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆ ಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮತ್ತೆ ರಾಜ್ಯ ಲೋಕೋಪ ಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ರಾಷ್ಟ್ರೀಯ ಹೆದ್ದಾರಿ ವಿಭಾಗವು ಸಮಗ್ರ ಯೋಜನಾ ವರದಿ ಸಿದ್ದಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ಯೋಜನೆಯ ಅಂದಾಜು ವೆಚ್ಚ ರೂ.1,000 ಕೋಟಿಗೂ ಅಧಿಕವಾಗಿದ್ದರಿಂದ ಕಾಮಗಾರಿಯನ್ನು ಎನ್ಎಚ್ಎಐ ತನ್ನ ವ್ಯಾಪ್ತಿಗೆ ಪಡೆದುಕೊಂಡಿತ್ತು. ಇದರ ಭಾಗವಾಗಿ ಮಡಿಕೇರಿಯಲ್ಲಿ ಹೊಸ ವಿಭಾಗೀಯ ಕಚೇರಿ ತೆರೆಯುವ ಯೋಜನೆಯೂ ರೂಪಿಸಲಾಗಿತ್ತು.ಆದರೆ, ಯೋಜನೆ ಅನುಷ್ಠಾನದಲ್ಲಿ ವಿಳಂಬ ಉಂಟಾಗು ತ್ತಿರುವುದನ್ನು ಮನಗಂಡ ಮಂಗಳೂರು ಲೋಕಸಭಾ ಸಂಸದ ಬ್ರಿಜೇಶ್ ಚೌಟ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಕೇಂದ್ರ ಸರಕಾರ ಕಾಮಗಾರಿಯನ್ನು ಮತ್ತೆ ರಾಜ್ಯ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಹಸ್ತಾಂತರಿಸಿ, ಈ ಹಿಂದೆ ಸಿದ್ದಪಡಿಸಿದ್ದ ಯೋಜನಾ ವರದಿ ಆಧಾರದಲ್ಲೇ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿದೆ ಎನ್ನುವ ಮಾಹಿತಿ ಲಭಿಸಿದೆ.
ಯೋಜನೆಯ ವಿವಿಧ ಹಂತಗಳು
ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲು (3.19 ಕೋಟಿ ರೂ. ವೆಚ್ಚ ರಾಜ್ಯ ಸರಕಾರ ಅನುಮತಿ.
ರಾಜ್ಯ ಸರಕಾರದ ರಾಷ್ಟ್ರೀಯ ಹೆದ್ದಾರಿ ವಿಭಾಗ ಸಿದ್ಧಪಡಿಸಿದ ಡಿಪಿಆರ್ ಅನ್ನುರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಯೋಜನೆಗೆ ರೂ.1,000- ಕೋಟಿ ಮೀರಿದ ವೆಚ್ಚ ತಗುಲುವ ಕಾರಣ ಅನುಮೋದನೆ ದೊರೆತಿರಲಿಲ್ಲ.
ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರು ಕಳೆದ ಆರು ತಿಂಗಳಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿದ್ದರು. ಇದೀಗ ಎನ್ಎಚ್ಎಐನಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಹಸ್ತಾಂತರ.









































