ಸಂಸದ ಬಿವೈ ರಾಘವೇಂದ್ರ ರ ವಿಶೇಷ ಪ್ರಯತ್ನ | ಶಿವಮೊಗ್ಗ ಮತ್ತು ಕೊಲ್ಲೂರು ಪ್ರಯಾಣಿಕರಿಗೆ ಗುಡ್ ನ್ಯೂಸ್

Picture of Savistara

Savistara

Bureau Report

ಶಿವಮೊಗ್ಗದಿಂದ ಕೊಲ್ಲೂರಿಗೆ ಹೋಗಬೇಕಾದರೆ ಸುಮಾರು 127 ಕಿಲೋಮೀಟರ್ ಪ್ರಯಾಣ ಮಾಡಬೇಕು ಇದಕ್ಕೆ ಮೂರರಿಂದ ಮೂರುವರೆ ಗಂಟೆ ಸಮಯ ಬೇಕು. ಇನ್ನು ಮುಂದಿನ ದಿನಗಳಲ್ಲಿ ಬೈಂದೂರ್ ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ 766c ಪೂರ್ಣಗೊಂಡರೆ ಶಿವಮೊಗ್ಗದಿಂದ ಕೇವಲ 96 ಕಿಲೋಮೀಟರ್ ಗೆ ಕೊಲ್ಲೂರು ತಲುಪಬಹುದು. ಈ ಪ್ರಯಾಣದ ಅವಧಿ ಒಂದು ಮುಕ್ಕಾಲು ಗಂಟೆಯಿಂದ 2 ಗಂಟೆ ಮಾತ್ರ. ಇದು ಸಾಧ್ಯವಾಗುತ್ತಿರುವುದು ರಾಣೆಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ 766 ಸಿ ಹೊಸನಗರದಿಂದ ನೇರವಾಗಿ ನಿಟ್ಟೂರು ಸಮೀಪದ ಅಡಗೋಡಿಗೆ ಶರಾವತಿ ನದಿಗೆ ಇನ್ನೊಂದು ಸೇತುವೆ ನಿರ್ಮಿಸುವ ಮೂಲಕ ಅಂತರ 30 ಕಿ.ಮೀ ಉಳಿತಾಯ ಮತ್ತು ಒಂದು ಗಂಟೆ ಪ್ರಯಾಣದ ಅವಧಿ ಉಳಿತಾಯ ಆಗುತ್ತದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 766 ಸಿ ಹೊಸನಗರದಿಂದ -ನಗರ- ಸಂಪೇ ಕಟ್ಟೆ ಮಾರ್ಗ ಬದಲಿಸಿ ಹೊಸನಗರದಿಂದ ನೇರವಾಗಿ ನಿಟ್ಟೂರು ಸಮೀಪ ತಲುಪಲಿದೆ. ಇದರಿಂದ ಪ್ರಯಾಣಿಕರಿಗೆ ಪ್ರಯಾಣದಲ್ಲಿ ಇಂಧನ ಉಳಿತಾಯ ಮತ್ತು ಸಮಯ ಉಳಿತಾಯದ ಜೊತೆಗೆ ರಸ್ತೆ ಮಾರ್ಗದ ನಿರ್ಮಾಣಕ್ಕಾಗಿ ಅರಣ್ಯ ನಾಶ ಕೂಡ ತಪ್ಪಿದೆ. ಮುಂದಿನ ದಿನಗಳಲ್ಲಿ ಹೊನ್ನಾವರ – ಚಿತ್ತೂರು ರಾಷ್ಟ್ರೀಯ ಹೆದ್ದಾರಿ 69 ಕಾಮಗಾರಿ ಮುಕ್ತಾಯವಾದರೆ ಶಿವಮೊಗ್ಗದಿಂದ ಆನಂದಪುರಂ ತನಕ ಈ ರಾಷ್ಟೀಯ ಹೆದ್ದಾರಿಯಲ್ಲಿ ಸಾಗಿ ಆನಂದಪುರಂನ ಯಡೇಹಳ್ಳಿ ಹಾಗೂ ಆಚಾಪುರದ ಮಧ್ಯ ನಿರ್ಮಾಣ ಆಗಲಿರುವ ಫ್ಲೈ ಓವರ್ ಮೂಲಕ ರಾಣಿಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಗೆ ಇಂಟರ್ ಚೆಂಜ್ ಮೂಲಕ ತಲುಪಿ ಪ್ರಯಾಣಿಕರು ಕೊಲ್ಲೂರು ತಲುಪಬಹುದು. ಮುಂದಿನ ದಿನಗಳಲ್ಲಿ ಇದು ಅತ್ಯಂತ ಹೆಚ್ಚು ವಾಹನಗಳು ಸಂಚರಿಸುವ ವಾಹನ ದಟ್ಟಣೆಯ ಮಾರ್ಗವಾಗಲಿದೆ. ಬೈಂದೂರ್ – ರಾಣಿಬೆನ್ನೂರು ರ್ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡಿಸಿದವರು ಬಿ.ಎಸ್. ಯಡಿಯೂರಪ್ಪನವರು 2014ರಲ್ಲಿ ಸಂಸದರಾದಾಗ. ಈಗ ಅವರ ಪುತ್ರ ಬಿ. ವೈ. ರಾಘವೇಂದ್ರ ಸಂಸದರಾಗಿ ಈ ರಾಷ್ಟ್ರೀಯ ಹೆದ್ದಾರಿ ಶೀಘ್ರ ನಿಮಾ೯ಣಕ್ಕಾಗಿ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ. ಶರಾವತಿ ನದಿಗೆ ರಾಜ್ಯ ಸರ್ಕಾರದ ಹಸಿರುಮಕ್ಕಿ ಮತ್ತು ಕುದುರೆಬೀರಪ್ಪ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದು ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಸೇತುವೆ ಹೊಳೆಬಾಗಲು- ಕಳಸವಳ್ಳಿ (ತುಮರಿ)ಸೇತುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹೊಸನಗರ ತಾಲ್ಲೂಕಿನ ಪಟಗುಪ್ಪೆ ಸೇತುವೆ ಕೂಡ ರಾಜ್ಯ ಸರ್ಕಾರದಿಂದ ನಿರ್ಮಾಣವಾಗಿ ಕಾರ್ಯಾರಂಭವಾಗಿದೆ. ಈಗ ಶರಾವತಿ ನದಿಗೆ ನಿಮಾ೯ಣವಾಗುತ್ತಿರುವ ನಾಲ್ಕನೇ ಸೇತುವೆ ಹೊಸನಗರ – ಅಡಗೋಡಿ ಮಾರ್ಗದಲ್ಲಿ ಪ್ರಗತಿಯಲ್ಲಿದೆ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಎರಡು ಸೇತುವೆ ಮತ್ತು ರಾಜ್ಯ ಸರ್ಕಾರದ ಎರಡು ಸೇತುವೆ ಸೇರಿ ಶರಾವತಿ ನದಿಗೆ ಒಟ್ಟು ನಾಲ್ಕು ಸೇತುವೆ ಆಗುತ್ತಿರುವುದು ವಿಶೇಷ.

[t4b-ticker]
error: Content is protected !!