ನರೇಂದ್ರ ಮೋದಿ ತಲೆ ಇಲ್ಲದ ಫೋಟೋವನ್ನು ಹಾಕಿ ಗಾಯಬ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಕಾಂಗ್ರೆಸ್ ಟ್ವೀಟ್ ಗೆ ಟ್ವಿಟ್ಟರ್ನಲ್ಲಿ ಬಿಜೆಪಿ ಕೂಡಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿತ್ತು. ಈ ನಡುವೆ ಕಾಂಗ್ರೆಸ್ ಟ್ವೀಟ್ ಗೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಈ ರೀತಿಯಲ್ಲಿ ಟ್ವೀಟ್ ಮಾಡುವುದು ಸರಿಯಲ್ಲ. ಯಾವುದೇ ವ್ಯಕ್ತಿಯ ವಿರುದ್ಧ ಇಂತಹ ಟ್ವೀಟ್ ಗಳನ್ನು ಮಾಡಬಾರದು ಎಂದಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಇಲ್ಲದ ಫೋಟೋವನ್ನು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ನಡೆಗೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಈ ಕುರಿತಾಗಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗೆ, ಯಾರೇ ಇರಲಿ, ಅದು ಪ್ರಧಾನಮಂತ್ರಿ ಇರಲಿ, ಯಾವುದೇ ಮುಖಂಡರೇ ಆಗಿರಲಿ, ಅವರ ಗೌರವಕ್ಕೆ ಧಕ್ಕೆ ತರುವಂತ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ. ಅವರಾಗಲೀ ನಮ್ಮವರೇ ಆಗಲಿ ಈ ರೀತಿ ಮಾಡೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಾಕಲಾಗಿತ್ತು. ತಲೆ ಇಲ್ಲದ ಫೋಟೋ ಹಾಗಿ ಗಾಯಬ್ ಎಂಬ ತಲೆಬರಹ ನೀಡಲಾಗಿತ್ತು. ಇದಕ್ಕೆ ಬಿಜೆಪಿ ಟೀಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದರು.
ವಿಶೇಷ ಅಧಿವೇಶನ ಕರಿಯಲು ಪ್ರಧಾನಿಗೆ ಪತ್ರ ಬರೆದ ವಿಚಾರವಾಗಿ ಇದೇ ವೇಳೆ ಮಾತನಾಡಿ, ನಾವು ಎಲ್ಲಾ ಪಕ್ಷದವರು ಒಂದಾಗಿ ಅಧಿವೇಶನ ಕರೆಯಬೇಕು ಅಂತ ಹೇಳಿದ್ದೇವೆ. ಪ್ರಧಾನ ಮಂತ್ರಿಗಳು ಅಧಿವೇಶನದಲ್ಲಿ ಇರಬೇಕು.ಪ್ರಧಾನ ಮಂತ್ರಿಗಳು ಯಾವೆಲ್ಲ ಕ್ರಮ ತೆಗೆದುಕೊಂಡಿದ್ದಾರೆ ಅದನ್ನು ಹೇಳಬೇಕು ಎಂದರು.
ಕೆಲವೊಂದು ಗುಪ್ತ ಕಾರ್ಯಸೂಚಿಗಳಿರುತ್ತೆ ಅದನ್ನು ಅವರು ಮಾಡಲಿ. ಇವತ್ತಿನ ಪರಿಸ್ಥಿತಿ ಏನಿದೆ? ಅವರು ಏನು ಮಾಡಬೇಕು ಎಂಬುದು ಮನಸ್ಸಿನಲ್ಲಿದೆ ಅದನ್ನ ಫ್ಲೋರ್ ಲೀಡರ್ಸ್ನ ಕರೆದು ಮಾತನಾಡಿಸುವುದು ಒಳ್ಳೆಯದು. ಈಗಾಗಲೇ ನಾವು ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ ಎಂದರು.
ಯಾವುದೇ ರೀತಿಯಲ್ಲಿ ಭಾರತ ದೇಶದ ಸೈನಿಕರಿಗಾಗಲಿ ಜನರಿಗಾಗಿ ತೊಂದರೆ ಆಗಬಾರದು. ಪಾಕಿಸ್ತಾನವನ್ನ ಹತೋಟಿಯಲ್ಲಿ ಇಡಲು ಯಾವುದೇ ಕ್ರಮಕ್ಕೂ ನಾವು ಪ್ರಧಾನಿಗಳಿಗೆ ಬೆಂಬಲ ಕೊಟ್ಟಿದ್ದೇವೆ . ಜನರ ಅನಿಸಿಕೆ ಹಾಗೂ ದೇಶದಲ್ಲಿ ಇರುವ ಭಾವನೆ, ಜೊತೆಗೆ ಎಲ್ಲಾ ಪಕ್ಷಗಳು ಅವರಿಗೆ ಅಧಿಕಾರ ನೀಡಿದ್ದೇವೆ ಎಂದು ತಿಳಿಸಿದರು.
ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆಅಧಿಕಾರ ಮಾಡಲು ಕೊಟ್ಟಿದ್ದೇವೆ. ಅದನ್ನ ಅವರು ಉಪಯೋಗ ಮಾಡಿಕೊಳ್ಳಲಿ, ತಮ್ಮ ಕೆಲಸವನ್ನು ಅವರು ಮಾಡಲಿ. ದೇಶದ ರಕ್ಷಣೆ ಮಾಡುವುದಕ್ಕೆ ಆದಷ್ಟು ಬೇಗನೆ ಒಳ್ಳೆಯ ಹೆಜ್ಜೆಯನ್ನು ಇಡಬೇಕು ಎಂದು ಸಲಹೆ ನೀಡಿದರು.ಪಹಲ್ಗಾಮ್ ದಾಳಿಯ ಬಳಿಕ ರಾಜಕೀಯ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದಂತೆ ಕಾಂಗ್ರೆಸ್ ನಾಯಕರಿಗೆ ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.













































