17 ವರ್ಷ ಬಳಿಕ ಬಾಂಗ್ಲಾದಲ್ಲಿ ಮತದಾರನಾಗಿ ಹೆಸರು ನೋಂದಾಯಿಸಿದ ತಾರಿಕ್‌, ಫೆ.12ರ ಚುನಾವಣೆಯಲ್ಲಿ ಸ್ಪರ್ಧೆ

Picture of Savistara

Savistara

Bureau Report

ಢಾಕಾ: ಸ್ವಯಂ ಗಡೀಪಾರು ಹೊಂದಿ 17 ವರ್ಷದ ಬಳಿಕ ಲಂಡನ್‌ನಿಂದ ಬಾಂಗ್ಲಾದೇಶಕ್ಕೆ ಆಗಮಿಸಿರುವ ‘ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ’ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರೀಕ್‌ ರೆಹಮಾನ್‌ ಶನಿವಾರ ಮತಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡರು.

ಬಿಗಿ ಭದ್ರತೆಯ ನಡುವೆ ಢಾಕಾದಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಭೇಟಿ ಕೊಟ್ಟು ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದರು. ‘‘ಆನ್‌ಲೈನ್‌ ಮೂಲಕವೇ ತಾರೀಕ್‌ ಅರ್ಜಿ ಸಲ್ಲಿಸಿದ್ದರು. ಕೆಲವು ಭೌತಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕಚೇರಿಗೆ ಆಗಮಿಸಿದ್ದರು. ಇನ್ನೊಂದು ದಿನದಲ್ಲಿ ಅವರಿಗೆ ರಾಷ್ಟ್ರೀಯ ಗುರುತಿನ ಕಾರ್ಡ್‌ (ಎನ್‌ಐಡಿ ) ಸಿಗಲಿದೆ,’’ ಎಂದು ಆಯೋಗದ ರಾಷ್ಟ್ರೀಯ ಗುರುತು ನೋಂದಣಿ ಘಟಕದ ಮಹಾ ನಿರ್ದೇಶಕ ಎಎಸ್‌ಎಂ ಹುಮಾಯೂನ್‌ ಕಬೀರ್‌ ಹೇಳಿದರು.

ಬಾಂಗ್ಲಾದೇಶದಲ್ಲಿ ಭಾವಚಿತ್ರ ಮತ್ತು ಬಯೋಮೆಟ್ರಿಕ್‌ ಡೇಟಾ ಹೊಂದಿರುವ ಮತದಾರರ ಪಟ್ಟಿಯನ್ನು ಮೊದಲು 2008ರಲ್ಲಿ ಫಕ್ರುದ್ದೀನ್‌ ಅಹ್ಮದ್‌ ನೇತೃತ್ವದ ಸೇನಾ ಬೆಂಬಲಿತ ಉಸ್ತುವಾರಿ ಸರಕಾರದ ಅವಧಿಯ ಲ್ಲಿಜಾರಿಗೆ ತರಲಾಗಿತ್ತು. ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ರೆಹಮಾನ್‌ ಆ ಸಮಯದಲ್ಲಿ ರಾಜಕೀಯ ಕೈದಿಯಾಗಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಅವರು 2008ರ ಸೆಪ್ಟೆಂಬರ್‌ 11 ರಂದು ಲಂಡನ್‌ಗೆ ತೆರಳಿದ್ದರು.

ಬಾಂಗ್ಲಾದೇಶದಲ್ಲಿ ಫೆಬ್ರವರಿ 12ರಂದು ಚುನಾವಣೆ ನಡೆಯಲಿದ್ದು, ರೆಹಮಾನ್‌ ಅವರು ತಮ್ಮ ಪೂರ್ವಜರ ಕ್ಷೇತ್ರ ಬೋಗುರಾ ಸದರ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಹಾದಿ ಸಮಾಧಿಗೆ ಭೇಟಿ

ಬಿಗಿ ಭದ್ರತೆಯ ನಡುವೆ ತಾರೀಕ್‌ ರೆಹಮಾನ್‌ ಢಾಕಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಇತ್ತೀಚಿನ ಝೆನ್‌ ಝೀ ದಂಗೆಯಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ಹಾದಿ ಅವರ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಿವಿಯಲ್ಲಿರುವ ಮಸೀದಿ ಪಕ್ಕದಲ್ಲಿರುವ ಬಾಂಗ್ಲಾದೇಶದ ರಾಷ್ಟ್ರಕವಿ ಕಾಜಿ ನಜ್ರುಲ್‌ ಇಸ್ಲಾಂ ಅವರ ಸಮಾಧಿಯಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು.

ಜೇಮ್ಸ್‌ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ

ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳ ಅಟ್ಟಹಾಸ ಮುಂದುವರಿದಿದೆ. ಹಲವು ಬಾಲಿವುಡ್‌ ಸಿನಿಮಾಗಳಲ್ಲೂ ಹಿನ್ನೆಲೆ ಗಾಯಕರಾಗಿ ಸದ್ದು ಮಾಡಿದ್ದ ಬಾಂಗ್ಲಾದೇಶದ ಪ್ರಸಿದ್ಧ ರಾಕ್‌ ಸಿಂಗರ್‌ ಜೇಮ್ಸ್‌ ಅವರ ಸಂಗೀತ ಕಾರ್ಯಕ್ರಮದ ಮೇಲೆ ದುಷ್ಕರ್ಮಿಗಳ ಗುಂಪು ಶುಕ್ರವಾರ ರಾತ್ರಿ ದಾಳಿ ನಡೆಸಿದೆ. ಫರೀದ್‌ಪುರದ ಶಾಲೆಯೊಂದರ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವು ದಾಂಧಲೆಯಿಂದ ರದ್ದಾಗಿದೆ.ದುಷ್ಕರ್ಮಿಗಳು ಕಾರ್ಯಕ್ರಮ ಸ್ಥಳಕ್ಕೆ ನುಗ್ಗಿ ಕಲ್ಲು ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಆಯೋಜಕ ಸಮಿತಿಯ ಸಂಚಾಲಕ ಮುಸ್ತಾಫಿಜುರ್‌ ರೆಹಮಾನ್‌ ಶಮೀಮ್‌ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ‘ದಿ ಡೈಲಿ ಸ್ಟಾರ್‌’ ಪತ್ರಿಕೆ ವರದಿ ಮಾಡಿದೆ.‘‘ಇತ್ತೀಚೆಗೆ ಢಾಕಾದಲ್ಲಿ ಸಾಂಸ್ಕೃತಿಕ ಕೇಂದ್ರ ಛಾಯಾನೌತ್‌ ಮತ್ತು ಜಾತ್ಯತೀತ ಮತ್ತು ಪ್ರಗತಿಪರ ಪ್ರಜ್ಞೆ ಮೂಡಿಸುತ್ತಿದ್ದ ಉದೀಚಿ ಸಂಘಟನೆಗಳ ಕಚೇರಿಗಳನ್ನು ಸುಟ್ಟು ಭಸ್ಮ ಮಾಡಲಾಗಿದೆ. ಈಗ ಮೂಲಭೂತವಾದಿಗಳು ಗಾಯಕ ಜೇಮ್ಸ್‌ ಕಾರ್ಯಕ್ರಮದ ಮೇಲೂ ದಾಳಿ ನಡೆಸಿದ್ದು, ಇದು ಖಂಡನೀಯ’’ ಎಂದು ಲೇಖಕಿ ತಸ್ಲಿಮಾ ನಸ್ರೀನ್‌ ‘ಎಕ್ಸ್‌’ನಲ್ಲಿ ಟೀಕಿಸಿದ್ದಾರೆ.

[t4b-ticker]
error: Content is protected !!