ಪುತ್ತೂರಿನಲ್ಲಿ ಮೊಳಗಿದ ಶತ ಜಯಘೋಷ್, ರಾಜ್ಯದಲ್ಲೇ ಮೊದಲ ಬಾರಿಗೆ 1500 ವಿದ್ಯಾರ್ಥಿಗಳಿಂದ ಘೋಷ್ ಪಥಸಂಚಲನ

Picture of Savistara

Savistara

Bureau Report

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇಲ್ಲಿನ ಸಮೂಹ ಸಂಸ್ಥೆಗಳು ಪ್ರತಿವರ್ಷ ನಿರಂತರವಾಗಿ ರಾಷ್ಟ್ರ ಸಂತ ವಿವೇಕಾನಂದರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ. ಈ ಭಾರಿ ವಿವೇಕಾನಂದ ಜಯಂತಿಯ ಅಂಗವಾಗಿ ಶತ ಜಯಘೋಷ್ ಪರಿಕಲ್ಪನೆಯಲ್ಲಿ ಘೋಷ್ ಪಥಸಂಚಲನ ಕಾರ್ಯಕ್ರಮ ನಡೆಯಿತು.

ವಿವೇಕಾನಂದ ವಿದ್ಯಾಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಸುಮಾರು 1500 ವಿದ್ಯಾರ್ಥಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದರು.ಘೋಷ್ ಸಂಚಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅನಕ, ಪಣವ, ಶಂಖ, ವಂಶಿ, ತ್ರಿಭುಜ ಮತ್ತು ಜಲ್ಲರಿ, ಕೊಳಲು ಮೊದಲಾದ ವಾದ್ಯಪರಿಕರಗಳ ಜೊತೆ ಸಂಚಲನದಲ್ಲಿ ಭಾಗವಹಿಸಿರುವುದು ಅತ್ಯಂತ ವಿಶೇಷ ಸಂಗತಿ.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು ಪುತ್ತೂರಿನ ಅಟಲ್ ಉದ್ಯಾನ ಕೊಂಬೆಟ್ಟು ಇಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಸಂಚಲನಕ್ಕೆ ಚಾಲನೆಯನ್ನು ನೀಡಿದರು. ನಂತರ ಕಲ್ಲಾರೆ ಹಾಗೂ ಬೊಳುವಾರಿನಿಂದ ಏಕಕಾಲದಲ್ಲಿ ಪಥಸಂಚಲನ ಆರಂಭಗೊಂಡು ಪುತ್ತೂರಿನ ಮುಖ್ಯರಸ್ತೆಯಿಂದ ಸಂಚರಿಸಿ, ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಹಲವಾರು ಮಂದಿ ಗಣ್ಯರು ಮಹಾಲಿಂಗೇಶ್ವರ ದೇವಳದ ರಥಬೀದಿಯಲ್ಲಿ ನಡೆದ ಜಯಘೋಷ್ ಪಥ ಸಂಚಲನದ ಸಮಾರೋಪದಲ್ಲಿ ಪಾಲ್ಗೊಂಡರು. ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು ರಸ್ತೆ ಬದಿಯಲ್ಲಿ ಸಾಲಾಗಿ ನಿಂತು ಪಥ ಸಂಚಲನಕ್ಕೆ ಪುಷ್ಪಾರ್ಚನೆ ಮಾಡಿ ಗೌರವವನ್ನು ಸಲ್ಲಿಸಿದರು.

[t4b-ticker]
error: Content is protected !!