ಉದ್ಯೋಗ ಮೇಳದಲ್ಲಿ ಡಿಕೆಶಿ ಬಾಂಗ್ಲಾದೇಶದ ಪ್ರಧಾನಿ ಮೊಹ್ಮದ್ ಯೂನುಸ್ ಅವರ ಅಭಿಮಾನಿ ಎಂದು ಹೇಳಿಕೊಂಡರು. ಕೌಶಲ್ಯ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು. ಯೂನುಸ್ ಮಾತುಗಳು ತಮಗೆ ಪ್ರೇರಣೆ ಎಂದರು.
ಕಲಬುರಗಿ (ಏ.17): ನಗರದಲ್ಲಿ ನಡೆದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ ಬಾಂಗ್ಲಾದಲ್ಲಿ ಹಿಂದೂಗಳ ಮಾರಣ ಹೋಮಕ್ಕೆ ಕಾರಣ ಎನ್ನಲಾದ ಅಲ್ಲಿನ ಪ್ರಧಾನಿ ಮೊಹ್ಮದ್ ಯೂನುಸ್ ಅವರ ಅಭಿಮಾನಿ ಎಂದು ಹೇಳಿಕೊಂಡು ಸರ್ವರ ಗಮನ ಸೆಳೆದರು.ಕೌಶಲ್ಯ ಶಿಕ್ಷಣ, ಆ ಕುರಿತಂತೆ ಹಲವು ನಿದರ್ಶನಗಳನ್ನು ಹೇಳುತ್ತಲೇ ತಾವು ಬಾಂಗ್ಲಾದೇಶದ ಪ್ರಧಾನಿ ಮೊಹ್ಮದ್ ಯೂನುಸ್ ಅವರ ಬಹುದೊಡ್ಡ ಅಭಿಮಾನಿ ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಂಡರು. ಬದುಕಲ್ಲಿ ಕೌಶಲ್ಯ ಅದೆಷ್ಟು ಮುಖ್ಯ ಎಂಬುದಕ್ಕೆ ಬಾಂಗ್ಲಾ ಪ್ರಧಾನಿ ಮಾತುಗಳು ತಮಗೆ ಪ್ರೇರಣಾದಾಯಕ ಎಂದರು.
ಬಾಂಗ್ಲಾ ಪ್ರಧಾನಿ ಮಹ್ಮದ್ ಯುನುಸ್ ನೊಬೆಲ್ ಪ್ರಶಸ್ತಿ ಬಂದಾಗ ನಡೆದ ಮಾಧ್ಯಮ ಸಂದರ್ಶನದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮೀನು ಕೊಟ್ಟರೆ ಅದು ಒಂದು ಹೊತ್ತಿನ ಊಟಕ್ಕೆ ಆಗುತ್ತೆ, ಆದರೆ ಅದೇ ವ್ಯಕ್ತಿಗೆ ಮೀನು ಹಿಡಿಯುವ ಕೆಲಸ ಕೊಟ್ಟರೆ ಅವನ ಜೀವನವೇ ಆಗುತ್ತೆ ಎಂದಿದ್ದರು. ಆ ಮಾತು ನನಗೆ ತುಂಬ ಹಿಡಿಸಿತು. ಅಂದಿನಿಂದ ನಾನು ಮೊಹ್ಮದ್ ಯುನಿಸ್ನ ದೊಡ್ಡ ಅಭಿಮಾನಿಯಾಗಿದ್ದೇನೆಂದು ಡಿ.ಕೆ.ಶಿವಕುಮಾರ್ ಹೇಳಿಕೊಂಡರು.













































