ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಮಾಡಿದ ಈ ಒಂದು ಕಾರ್ಯ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪಾದರಕ್ಷೆ ಕೊಳ್ಳಲು ಶಕ್ತಿಯಿಲ್ಲದ ಕುಗ್ರಾಮದ ಜನರ ಖುಷಿಗೆ ಪಾರವೇ ಇಲ್ಲದಾಗಿದೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪೆದಪಾಡು ಗ್ರಾಮ ಈ ಹೃದಯ ಸ್ಪರ್ಶಿ ಕಾರ್ಯಕ್ಕೆ ಸಾಕ್ಷಿಯಾಗಿದೆ.ಇತ್ತೀಚೆಗೆ ಡಿಸಿಎಂ ಪವನ್ ಕಲ್ಯಾಣ್ ಅವರು ಸರಿಯಾದ ರಸ್ತೆಯೂ ಇಲ್ಲದ, ಬುಡಕಟ್ಟು ಜನರೇ ಅತಿ ಹೆಚ್ಚು ವಾಸಿಸುತ್ತಿರುವ ಈ ಪೆದಪಾಡು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಯಾರೊಬ್ಬರ ಕಾಲಿನಲ್ಲೂ ಪಾದರಕ್ಷೆಯೇ ಇರಲಿಲ್ಲ. ಈ ಶೋಚನೀಯ ಪರಿಸ್ಥಿತಿಯನ್ನು ಕಂಡ ಪವನ್ ಕಲ್ಯಾಣ್ ಅವರ ಮನ ಮಿಡಿದಿದೆ.
ಪೆದಪಾಡು ಗ್ರಾಮದಲ್ಲಿ ಜನರ ಬದುಕೇ ದುಸ್ಥರವಾಗಿದೆ. ಇಲ್ಲಿನ ಜನರಿಗೆ ಚಪ್ಪಲಿ ಖರೀದಿ ಮಾಡುವುದು ದುಬಾರಿಯಾಗಿದೆ. ಹೀಗಾಗಿ ಹಲವರು ಚಪ್ಪಲಿ ಧರಿಸದೇ ಜೀವನ ಸಾಗಿಸುತ್ತಾರೆ. ಪವನ್ ಕಲ್ಯಾಣ್ ಅವರು ಈ ಗ್ರಾಮಸ್ಥರ ಪರಿಸ್ಥಿತಿ ನೋಡಿ ಮರುಗಿದ್ದಾರೆ.
ಸ್ಥಳದಲ್ಲೇ ಅಧಿಕಾರಿಗಳನ್ನು ಕರೆಸಿದ ಪವನ್ ಕಲ್ಯಾಣ್ ಅವರು ಈ ಗ್ರಾಮದಲ್ಲಿ ಎಷ್ಟು ಜನರಿದ್ದಾರೆ. ಅಷ್ಟೂ ಮಂದಿಗೆ ಈ ಕೂಡಲೇ ಅವರ ಕಾಲಿನ ಗಾತ್ರಕ್ಕೆ ತಕ್ಕಂತ ಚಪ್ಪಲಿಯನ್ನು ನೀಡುವಂತೆ ಸೂಚಿಸಿದ್ದಾರೆ.
ಪೆದಪಾಡು ಗ್ರಾಮದಲ್ಲಿ ಸುಮಾರು 350 ಜನ ವಾಸಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರು ತಕ್ಷಣವೇ ಗ್ರಾಮದ ಎಲ್ಲರಿಗೂ ಚಪ್ಪಲಿಗಳನ್ನು ಖರೀದಿಸಿ ವಿತರಿಸುವಂತೆ ಆದೇಸಿದ್ದರು. ಡಿಸಿಎಂ ಆದೇಶದಂತೆ ಸಮೀಕ್ಷೆ ನಡೆಸಿದ ಜಿಲ್ಲಾಡಳಿತ ಮಕ್ಕಳಿಂದ ಹಿಡಿದು ಗ್ರಾಮ ಹಿರಿಯರ ಚಪ್ಪಲಿಯ ಗಾತ್ರವನ್ನು ದಾಖಲಿಸಿಕೊಂಡು ವರದಿ ನೀಡಿತ್ತು.
ಇದಾದ ಬಳಿಕ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಕಾಲಿನ ಗಾತ್ರ ಚಪ್ಪಲಿಗಳನ್ನು ವಿತರಿಸಿದ್ದಾರೆ. ಪವನ್ ಕಲ್ಯಾಣ್ ಆದೇಶದಿಂದ ಚಪ್ಪಲಿ ಪಡೆದ ಇಡೀ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ. ಪೆದಪಾಡು ಗ್ರಾಮದಲ್ಲಿ ಹೊಸ, ಹೊಸ ಪಾದರಕ್ಷೆಯಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ.













































