ನವದೆಹಲಿ: ‘ಈಶಾನ್ಯ ಭಾಗವನ್ನು ಹೊರತುಪಡಿಸಿ, ದೇಶದ ಇತರೆಡೆ ಈ ಬಾರಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ.
50 ವರ್ಷಗಳ ದೀರ್ಘಾವಧಿ ಸರಾಸರಿ (1971ರಿಂದ 2020ರವರೆಗಿನ ದತ್ತಾಂಶ) ಲೆಕ್ಕಾಚಾರದಲ್ಲಿ ದೇಶದಲ್ಲಿ ಜೂನ್ನಿಂದ ಸೆಪ್ಟೆಂಬರ್ವರೆ 87 ಸೆಂ.ಮೀನಷ್ಟು ಮಳೆಯಾಗುತ್ತದೆ. ಈ ಬಾರಿ ಈ ಪ್ರಮಾಣದ ಶೇ 90ರಷ್ಟು ಮಾತ್ರವೇ ಮಳೆಯಾಗಲಿದೆ ಎಂದು ಇಲಾಖೆ ಅಂದಾಜಿಸಿದೆ. ಶೇ 94ರಷ್ಟು ಮಳೆಯಾದರೆ, ಅದು ವಾಡಿಕೆಯಷ್ಟು ಮಳೆ ಎಂದು ಪರಿಗಣಿಸಲಾಗುತ್ತದೆ.’ವಾಡಿಕೆಗಿಂತ ಶೇ 4ರಷ್ಟು ಮಳೆ ಪ್ರಮಾಣದಲ್ಲಿ ಏರುಪೇರಾಗಬಹುದು. ಒಂದು ವೇಳೆ ವಾಡಿಕೆ ಮಳೆ ಪ್ರಮಾಣದ ಶೇ 90ರಷ್ಟು ಮಳೆಯಾದರೆ ದೇಶದಲ್ಲಿ ಮಳೆ ಕೊರತೆ ಉಂಟಾಗಲಿದೆ. ಜೊತೆಗೆ, ಮಳೆಯಾಧಾರಿತ ಕೃಷಿ ಚಟುವಟಿಕೆ ನಡೆಯುವ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ’ ಎಂದು ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹೋಪಾತ್ರಾ ಹೇಳಿದರು.
ಜೂನ್: ತಾಪಮಾನ ಏರಿಕೆ
‘ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಬಿಹಾರ, ಒಡಿಶಾ, ಛತ್ತೀಸಗಢ, ಗುಜರಾತ್, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಜೂನ್ನಲ್ಲಿ ಸಾಮಾನ್ಯ ವಾಗಿ ದಾಖಲಾಗುವ ತಾಪ ಮಾನಕ್ಕಿಂತ ಅಧಿಕ ತಾಪಮಾನ ದಾಖಲಾಗಲಿದೆ. ರಾಜಸ್ಥಾನ ಮತ್ತು ಜಾರ್ಖಂಡ್ ನಲ್ಲಿ ವಾಡಿಕೆ ಗಿಂತ ಕಡಿಮೆ ತಾಪಮಾನ ದಾಖಲಾಗಲಿದೆ’ ಎಂದು ಐಎಂಡಿ ತಿಳಿಸಿದೆ.
‘ಕೃಷಿ, ಆರ್ಥಿಕತೆಗೆ ಹೊಡೆತ”
‘ಎಲ್ ನಿನೊ ತೀವ್ರಗೊಳ್ಳುವ ಕಾರಣದಿಂದಾಗಿಯೇ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಸೆಪ್ಟೆಂಬರ್ ಹೊತ್ತಿಗೆ ಎಲ್ ನಿನೊ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಇದರಿಂದ ಮಳೆಯಾಧಾರಿತ ಕೃಷಿಗೂ ಹೊಡೆತ ಬೀಳಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.ದೇಶದ ಶೇ 52ರಷ್ಟು ಪ್ರದೇಶಗಳಲ್ಲಿ ಮಳೆಯಾಧಾರಿತ ಕೃಷಿ ಚಟುವಟಿಕೆಗಳು ನಡೆಯುತ್ತವೆ. ‘ಆಹಾರ ಉತ್ಪಾದನೆ, ಜಲವಿದ್ಯುತ್ ಉತ್ಪಾದನೆ ಕಡಿತಗೊಳ್ಳಲಿದೆ. ಇದರಿಂದ ಗ್ರಾಮೀಣ ಭಾಗದ ಜನರ ಆದಾಯ ಕಡಿಮೆಯಾಗಲಿದೆ’ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.’ಕಡಿಮೆ ಮಳೆ ಕಾರಣದಿಂದ ಕೃಷಿ ಚಟುವಟಿಕೆಗಳು ತಡವಾಗಿ ಆರಂಭವಾಗಬಹುದು. ಹೀಗಾದರೆ, ದೇಶದ ವಾಯುವ್ಯ ಭಾಗದಲ್ಲಿ ಬಿಸಿಗಾಳಿ ಕಾಣಿಸಿಕೊಳ್ಳಬಹುದು’ ಎಂದು ಐಐಟಿ ಕಾನ್ಸುರದ ಪ್ರೊಫೆಸರ್ ರಘು ಅವರು ಹೇಳಿದರು.
‘ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ಇಂಧನ ದರಗಳು ಏರಿಕೆಯಾಗಿವೆ. ಜೊತೆಗೆ, ರಸಗೊಬ್ಬರ ಕೊರತೆಯು ಈಗಾಗಲೇ ತಲೆದೋರಿದೆ. ಇದರಿಂದ ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಹೆಚ್ಚು ಹಣ ವ್ಯಯಿಸಬೇಕಾಗುವ ಸಂದರ್ಭವು ಎದುರಾಗಲಿದೆ. ಈಗಾದರೆ, ದೇಶದಲ್ಲಿ ಹಣದುಬ್ಬರ ಏರಲಿದೆ. ಅಂತಿಮವಾಗಿ ಇದು ದೇಶದ ಆರ್ಥಿಕತೆಗೆ ಹೊಡೆತ ನೀಡಲಿದೆ’ ಎಂದು ತಜ್ಞರು ಹೇಳುತ್ತಿದ್ದಾರೆ.
‘ಅಗತ್ಯವಾದ ಸಿದ್ಧತೆ ನಡೆಸುತ್ತಿದ್ದೇವೆ’
ಬೇಡಿಕೆಗೆ ತಕ್ಕಂತೆ ನಮ್ಮ ಬಳಿ ಸಾಕಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇದೆ. ಎಲ್ ನಿನೊ ಪರಿಣಾಮಗಳನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರಗಳೂ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು.
- ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಕೃಷಿ ಸಚಿವ (ರಾಷ್ಟ್ರೀಯ ಕೃಷಿ ಸಮಾವೇಶದಲ್ಲಿ ಪತ್ರಕರ್ತರ ಪ್ರಶ್ನೆಗೆ ನೀಡಿದ ಉತ್ತರ)









































