ಪಶ್ಚಿಮಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ.
ಕೋಲ್ಕತ್ತಾ (ಪಶ್ಚಿಮ ಬಂಗಾಳ) : ವಕ್ಫ್ ತಿದ್ದುಪಡಿ ಕಾಯ್ದೆಯು ಪಶ್ಚಿಮ ಬಂಗಾಳದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ.ಕೋಲ್ಕತ್ತಾದಲ್ಲಿ ಜೈನ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆ ಜಾರಿಯಿಂದ ನೀವು ನೊಂದಿದ್ದೀರಿ ಎಂದು ತಿಳಿದಿದೆ. ನನ್ನ ಮೇಲೆ ನಂಬಿಕೆಯಿಡಿ. ಬಂಗಾಳದಲ್ಲಿ ಆ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ. ಮುಸ್ಲಿಮರು ಮತ್ತು ಅವರ ಆಸ್ತಿಯನ್ನು ರಕ್ಷಿಸುವುದಾಗಿ ಅಭಯ ನೀಡಿದರು.ವಿಭಜಕರ (ಬಿಜೆಪಿ) ಒಡೆದು ಆಳುವ ನೀತಿಯನ್ನು ನೀವು ಒಗ್ಗಟ್ಟಾಗಿರುವ ಮೂಲಕ ಎದುರಿಸಬೇಕು. ರಾಜಕೀಯಕ್ಕಾಗಿ ಪ್ರಚೋದಿಸುವ ಶಕ್ತಿಗಳ ಬಗ್ಗೆ ಗಮನಬೇಡ. ಮುಸ್ಲಿಮ್ ಸಮುದಾಯದ ರಕ್ಷಣೆಗೆ ನಾವು ಬದ್ಧ. ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಈ ಸಮಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಬೇಕಿರಲಿಲ್ಲ. ಅಲ್ಲಿನ ಜನರ ಬಗ್ಗೆಯೂ ನಾವು ಯೋಚಿಸಬೇಕು ಎಂದು ಹೇಳಿದರು.
ಒಟ್ಟಾಗಿದ್ದರೆ ಜಗತ್ತನ್ನೇ ಗೆಲ್ಲಬಹುದು: “ಇತಿಹಾಸದಲ್ಲಿ ಬಂಗಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತ ಎಲ್ಲವೂ ಒಟ್ಟಿಗೆ ಇದ್ದವು. ನಂತರ ವಿಭಜನೆ ನಡೆಯಿತು. ಎಲ್ಲ ಸಮುದಾಯಗಳು ಒಟ್ಟಿಗೆ ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರಿಗೆ ರಕ್ಷಣೆ ನೀಡುವುದು ನಮ್ಮ ಕೆಲಸ. ನಾವೆಲ್ಲರೂ ಒಟ್ಟಿಗೆ ಇದ್ದರೆ, ಜಗತ್ತನ್ನೇ ಗೆಲ್ಲಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಗುಂಡಿಕ್ಕಿ ಕೊಂದರೂ, ಏಕತೆಯಿಂದ ನನ್ನನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಪ್ರತಿಯೊಂದು ಧರ್ಮ, ಜಾತಿ, ಪಂಥದವರು ಮಾನವೀಯತೆಗಾಗಿ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.ವಕ್ಫ್ ಕಾನೂನುಗಳು ಜಾರಿ: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಏಪ್ರಿಲ್ 3 ರಂದು ಲೋಕಸಭೆ, ಏಪ್ರಿಲ್ 4 ರಂದು ರಾಜ್ಯಸಭೆಯಲ್ಲಿ ಮ್ಯಾರಥಾನ್ ಚರ್ಚೆಗಳ ನಂತರ ಅಂಗೀಕರಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 6 ರಂದು ಮಸೂದೆಗೆ ತಮ್ಮ ಒಪ್ಪಿಗೆ ನೀಡಿದರು. ಏಪ್ರಿಲ್ 8 ರಿಂದ ಅದು ಕಾಯ್ದೆಯಾಗಿ ಜಾರಿಗೆ ಬಂದಿದೆ.













































