ರಾಜ್ಯದ ಕುಶಲಕರ್ಮಿಗಳಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಗರಿಷ್ಠ ಕೊಡುಗೆ’ – ಸಂಸದ ಬಿ.ವೈ.ರಾಘವೇಂದ್ರ

Picture of Savistara

Savistara

Bureau Report

ಪಿಎಂ ವಿಶ್ವಕರ್ಮ ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ ನಂ.1; ಯೋಜನೆಯಡಿ ರಾಜ್ಯದ 5.72 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ನೆರವು, 794 ಕೋಟಿ ರೂ. ನೇರ ಸಾಲ ವಿತರಣೆ: ಶಿವಮೊಗ್ಗ ಜಿಲ್ಲೆಯ ಕುಶಲಕರ್ಮಿಗಳಿಗೆ 38.63 ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ರೋತ್ಸಾಹ

ನವದೆಹಲಿ, 23 ಜುಲೈ 2026: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಸಾಂಪ್ರದಾಯಿಕ ಕಲೆ ಹಾಗೂ ಕುಶಲಕರ್ಮಿಗಳ ಜೀವನವನ್ನು ಸಬಲೀಕರಣಗೊಳಿಸಲು ಜಾರಿಗೆ ತಂದಿರುವ ‘ಪಿಎಂ ವಿಶ್ವಕರ್ಮ’ ಯೋಜನೆಯ ಗರಿಷ್ಠ ಪ್ರಯೋಜನ ಕರ್ನಾಟಕ ರಾಜ್ಯಕ್ಕೆ ಲಭಿಸುತ್ತಿದ್ದು, ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ಈ ಕುರಿತಂತೆ ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ MSME ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು, ಮಹತ್ವದ ಅಂಕಿ-ಅಂಶಗಳ ಸಹಿತವಾಗಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಪರಿಣಾಮಕಾರಿ ಆಡಳಿತ ಹಾಗೂ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಯಿಂದಾಗಿ ರಾಜ್ಯದ ಲಕ್ಷಾಂತರ ಸಾಂಪ್ರದಾಯಿಕ ವೃತ್ತಿಪರ ಕುಟುಂಬಗಳು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದು, ಪಿಎಂ ವಿಶ್ವಕರ್ಮ ಯೋಜನೆಯ ಗರಿಷ್ಟ ಲಾಭ ಕನ್ನಡಿಗ ಸಾಂಪ್ರದಾಯಿಕ ಕಸುಬುದಾರರು ಮತ್ತು ಕುಶಲಕರ್ಮಿಗಳಿಗೆ ಸಿಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 16,000ಕ್ಕೂ ಹೆಚ್ಚು ಕುಶಲಕರ್ಮಿಗಳ ನೋಂದಣಿಯಾಗಿದ್ದು, ಸುಮಾರು 38.63 ಕೋಟಿ ರೂ. ಮೊತ್ತದ ಸಾಲದ ನೆರವಿನ ಮೂಲಕ ನಮ್ಮ ಮಲೆನಾಡಿನ ಸಾಂಪ್ರದಾಯಿಕ ಕಸುಬುದಾರರ ಮತ್ತು ಕುಶಲಕರ್ಮಿಗಳ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಪರಿಣಾಮಕಾರಿ ಮೈಲಿಗಲ್ಲನ್ನು ಸಾಧಿಸಲಾಗಿದೆ ಎಂದು ರಾಘವೇಂದ್ರ ಹೇಳಿದ್ದಾರೆ.ಲೋಕಸಭೆಯಲ್ಲಿ ಸಂಸದ ರಾಘವೇಂದ್ರ ಅವರಿಗೆ ನೀಡಲಾಗಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಕರ್ನಾಟಕ 5,72,108 ಯಶಸ್ವಿ ನೋಂದಣಿಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 4,89,114 ಕುಶಲಕರ್ಮಿಗಳು ತರಬೇತಿ ಪೂರ್ಣಗೊಳಿಸಿದ್ದು, 3,84,997 ಜನರಿಗೆ ಆಧುನಿಕ ಟೂಲ್‌ಕಿಟ್‌ಗಳನ್ನು ವಿತರಿಸಲಾಗಿದೆ. ಯೋಜನೆಯ ಪ್ರತಿಯೊಂದು ವಿಭಾಗದಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಈ ಯಶಸ್ವಿ ಯೋಜನೆಯ ಗರಿಷ್ಟ ಲಾಭ ರಾಜ್ಯದ ಕುಶಲಕರ್ಮಿಗಳಿಗೆ ಸಿಗುತ್ತಿದೆ. ಇಷ್ಟೇ ಅಲ್ಲದೆ, ಗ್ಯಾರಂಟಿ ರಹಿತ ಸಾಲ ಸೌಲಭ್ಯ ಒದಗಿಸುವಲ್ಲಿಯೂ ರಾಜ್ಯವೇ ಅಗ್ರಸ್ಥಾನದಲ್ಲಿದ್ದು, ಒಟ್ಟು 1,30,750 ಫಲಾನುಭವಿಗಳಿಗೆ 1,034.29 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಇದರಲ್ಲಿ ಈಗಾಗಲೇ 794.15 ಕೋಟಿ ರೂ. ಮೊತ್ತವನ್ನು ನಮ್ಮ ರಾಜ್ಯದ ಕುಶಲಕರ್ಮಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪರಿಶ್ರಮ ಈ ಮೂಲಕ ಸಾಬೀತಾಗಿದ್ದು, ಯೋಜನೆ ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ 16,158 ಕುಶಲಕರ್ಮಿಗಳಲ್ಲಿ 14,248 ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ ಮತ್ತು 10,429 ಮಂದಿ ಉಚಿತ ಟೂಲ್‌ಕಿಟ್‌ಗಳನ್ನು ಪಡೆದುಕೊಂಡಿದ್ದಾರೆ. ಹಣಕಾಸಿನ ನೆರವಿನ ಜೊತೆಗೆ ಸರ್ಕಾರಿ ಇ-ಮಾರುಕಟ್ಟೆ, (GeM), ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮತ್ತು ಪ್ರಮುಖ ಇ-ಕಾಮರ್ಸ್ ವೇದಿಕೆಗಳ ಮೂಲಕ ಕುಶಲಕರ್ಮಿಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಹಾಗೂ ಕೇಂದ್ರ ಸಚಿವರಿಗೆ ಸಂಸದ ಬಿ.ವೈ.ರಾಘವೇಂದ್ರ ಜಿಲ್ಲೆಯ ಸಾಂಪ್ರದಾಯಿಕ ಕಸುಬುದಾರರು ಮತ್ತು ಕುಶಲಕರ್ಮಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

[t4b-ticker]
error: Content is protected !!