ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರದ ಬಗ್ಗೆ ಹೇಳಿದ ಒಂದೇ ಒಂದು ಹೇಳಿಕೆಯನ್ನು ಗುರಿಯಾಗಿಸಿದ ಮಾಜಿ ಐಪಿಎಸ್ ಅಧಿಕಾರಿ, ಹಾಲಿ ತಮಿಳುನಾಡು ಬಿಜೆಪಿ ನಾಯಕ ಕೆ.ಅಣ್ಣಾಮಲೈ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವಾಚ್ಯ ಶಬ್ದಗಳಿಂದ ಬೈದು ರಾಜಕೀಯ ವಿವಾದವನ್ನು ಸೃಷ್ಟಿಸಿದ್ದಾರೆ.
ಜ. 15ರಂದು ನಡೆಯಲಿರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಅಣ್ಣಾಮಲೈ ಮುಂಬೈನಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಮಾಧ್ಯಮಗಳು ಜೊತೆ ಮಾತನಾಡಿದ್ದ ಅವರು, ಬಾಂಬೆ ಮಹಾರಾಷ್ಟ್ರದ ನಗರವಲ್ಲ. ಅದು ಅಂತರರಾಷ್ಟ್ರೀಯ ನಗರ ಎಂದು ಹೇಳಿದ್ದು ವಿವಾದದ ಕಿಡಿ ಹೊತ್ತಿಸಿದೆ.
ರಾಜ್ ಠಾಕ್ರೆ ಹೇಳಿದ್ದೇನು?
ಭಾನುವಾರ(ಜ. 11) ದಾದರ್ನ ಶಿವತೀರ್ಥದಲ್ಲಿ ನಡೆದ ಬಿಎಂಸಿ ಚುನಾವಣೆಯ ಶಿವಸೇನಾ ಮತ್ತು ಎಂಎನ್ಎಸ್ ಜಂಟಿ ರ್ಯಾಲಿಯಲ್ಲಿ ಮಾತನಾಡಿದ್ದ ರಾಜ್ ಠಾಕ್ರೆ, ಬಾಂಬೆ ಮಹಾರಾಷ್ಟ್ರದ ನಗರವಲ್ಲ. ಅದು ಅಂತರರಾಷ್ಟ್ರೀಯ ನಗರ ಎಂಬ ಅಣ್ಣಾಮಲೈ ಹೇಳಿಕೆಯನ್ನು ಗುರಿಯಾಗಿಸಿಕೊಂಡು ರಸ್ಮಲೈ ಎಂದು ಕರೆದು ಕಿಡಿಕಾರಿದ್ದು, ಮುಂಬೈ ಬಗ್ಗೆ ಮಾತನಾಡಲು ಅವರು ಯಾರು ಎಂದು ವಾಗ್ದಾಳಿ ನಡೆಸಿದ್ದರು.
ಇತ್ತೀಚೆಗೆ ತಮಿಳುನಾಡಿನಿಂದ ಮುಂಬೈ ಬಂದ ರಸ್ಮಲೈ ಮುಂಬೈ ಮಹಾರಾಷ್ಟ್ರದ ನಗರವಲ್ಲ. ಇದು ಅಂತಾರಾಷ್ಟ್ರೀಯ ನಗರ ಎಂದು ಹೇಳುತ್ತಾನೆ. ಅವರಿಗೂ ಮುಂಬೈಗೂ ಏನೂ ಸಂಬಂಧ, ಮುಂಬೈ ಬಗ್ಗೆ ಮಾತನಾಡಲು ಅವರು ಯಾರು? ಅದಕ್ಕಾಗಿ ಬಾಳಾ ಸಾಹೇಬ್ ಠಾಕ್ರೆ ಹಟಾವೊ ಲುಂಗಿ, ಬಜಾವೊ ಪುಂಗಿ ಎಂದು ಹೇಳಿದ್ದರು ಎಂದು ಅಪಹಾಸ್ಯ ಮಾಡಿದ್ದು, ಈ ಹೇಳಿಕೆ ರಾಜ್ಯದ ರಾಜಧಾನಿಯ ಮೇಲಿನ ಸಾರ್ವಭೌಮತ್ವಕ್ಕೆ ನೇರ ಬೆದರಿಕೆಯಾಗಿದೆ. ಮಹಾರಾಷ್ಟ್ರದಿಂದ ಮುಂಬೈಯನ್ನು ಬೇರ್ಪಡಿಸಲು ಬಿಜೆಪಿಯಿಂದ ಪಿತೂರಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕೆ.ಅಣ್ಣಾಮಲೈ ತಿರುಗೇಟು
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಾಡಿದ ಹೇಳಿಕೆಗಳಿಗೆ ತೀಕ್ಷ್ಯ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ, ನನಗೆ ಬೆದರಿಕೆ ಹಾಕಲು ಆದಿತ್ಯ ಠಾಕ್ರೆ ಮತ್ತು ರಾಜ್ ಠಾಕ್ರೆ ಯಾರು? ನಾನು ರೈತನ ಮಗನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅವರು ನನ್ನನ್ನು ನಿಂದಿಸಲು ಸಭೆಗಳನ್ನು ಆಯೋಜಿಸಿದ್ದಾರೆ. ನಾನು ಅಷ್ಟು ಮುಖ್ಯನಾಗಿದ್ದೇನೆಯೇ ಎಂಬು ನನಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಮುಂಬೈ ಬಂದ್ರೆ ಕಾಲುಗಳನ್ನು ಕತ್ತರಿಸುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಮುಂಬೈಗೆ ಬರುತ್ತೇನೆ. ಇಂತಹ ಬೆದರಿಕೆಗಳಿಗೆ ಹೆದರಿದ್ದರೆ ನಾನು ನನ್ನ ಹಳ್ಳಿಯಲ್ಲೇ ಇರುತ್ತಿದ್ದೆ. ಕಾಮರಾಜ್ ಭಾರತದ ಶ್ರೇಷ್ಠ ನಾಯಕರು ಅಂತ ಹೇಳಿದ್ರೆ ಅವರು ಇನ್ಮುಂದೆ ತಮಿಳರಲ್ಲವೇ? ಮುಂಬೈ ವಿಶ್ವದರ್ಜೆ ನಗರ ಎಂದು ಹೇಳಿದ್ರೆ ಹೇಗೆ ಅದು ಮಹಾರಾಷ್ಟ್ರದ ನಗರ ಆಗಲ್ಲವೇ? ಇವರೆಲ್ಲಾ ಅಜ್ಞಾನಿಗಳು ಎಂದಿದ್ದಾರೆ.













































