ಮುಂಬೈ: ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯ ಕಣ ರಂಗೇರುತ್ತಿದ್ದು, ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರು ಉತ್ತರ ಪ್ರದೇಶ ಮತ್ತು ಬಿಹಾರದ ವಲಸಿಗರ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. “ಹಿಂದಿ ಭಾಷೆಯನ್ನು ಹೇರಲು ಪ್ರಯತ್ನಿಸಿದರೆ ನಿಮ್ಮನ್ನು ಒದ್ದು ಓಡಿಸುತ್ತೇನೆ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಭಾಷಾ ಪ್ರೇಮದ ಕುರಿತು ಆಕ್ರೋಶ ಹೊರಹಾಕಿದರು. “ನನಗೆ ಹಿಂದಿ ಭಾಷೆಯ ಮೇಲೆ ದ್ವೇಷವಿಲ್ಲ. ಆದರೆ, ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು; ಹಿಂದಿ ನಿಮ್ಮ ಏಕೈಕ ಭಾಷೆಯಲ್ಲ.
ನೀವು ಇಲ್ಲಿಗೆ ಬಂದು ನಮ್ಮ ಮೇಲೆ ಹಿಂದಿ ಹೇರಲು ಮುಂದಾದರೆ, ನಾನು ನಿಮ್ಮನ್ನು ಒದ್ದು ಓಡಿಸಲು ನಾವು ಹಿಂಜರಿಯುವುದಿಲ್ಲ,” ಎಂದು ಗುಡುಗಿದ್ದಾರೆ.ಇದೇ ಬರುವ ಜ. 15 ರಂದು ನಡೆಯಲಿರುವ ಈ ಬಾರಿಯ ಚುನಾವಣೆ ಮರಾಠಿ ಭಾಷಿಕರಿಗೆ ಕೊನೆಯ ಅವಕಾಶವಾಗಿದೆ, ನಾವು ನಮ್ಮ ನೆಲ ಮತ್ತು ಭಾಷೆಯನ್ನು ಕಳೆದುಕೊಂಡರೆ, ಮರಾಠಿಗರ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಹಾಗಾಗಿ ಮಹಾರಾಷ್ಟ್ರದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಬೇಕಿದೆ ನಮ್ಮ ಭಾಷೆಯನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಅವರು, ಮರಾಠಿ ಅಸ್ಮಿತೆಯನ್ನು ಕಾಪಾಡಲು ಶಾಲೆಗಳನ್ನು ಮುಚ್ಚಿಸಲೂ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.













































