ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನವೇ ಯಾರೂ ಊಹಿಸದ ರೀತಿಯಲ್ಲಿ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿ ತಿರುವು ಪಡೆದುಕೊಂಡಿತು. 20 ವರ್ಷಗಳಿಂದ ದೂರವೇ ಇದ್ದ ಸಹೋದರರಿಬ್ಬರು ತಮ್ಮ ಅಸ್ತಿತ್ವದ ಉಳಿವಿಗಾಗಿ ಮತ್ತೇ ಕೈ ಜೋಡಿಸಿದ್ದರು.ಉದ್ಧವ್ ಮತ್ತು ರಾಜ್ ಠಾಕ್ರೆ ಒಂದಾಗುತ್ತಿದ್ದಂತೆ ಮಹಾರಾಷ್ಟ್ರದ ರಾಜಕೀಯ ಚಿತ್ರಣ ತಿರುವು ಪಡೆದುಕೊಂಡಿತು, ಠಾಕ್ರೆ ಕುಟುಂಬದ ಪ್ರಭಾವ ಇರುವ ಕಡೆಗಳಲ್ಲಿನ ವಿರೋಧಿಗಳ ಪಾಲಿಗೆ ಇದು ನುಂಗಲಾರದ ತುತ್ತಾಗಿತ್ತು. ಇಬ್ಬರು ಸಹೋದರರು ಹೆಚ್ಚೆಚ್ಚು ಪ್ರಚಾರ ನಡೆಸುವ ಮೂಲಕ ಮರಾಠಿ ಮತಗಳನ್ನು ಕ್ರೋಢೀಕರಿಸಲು ಮತ್ತು ಉದ್ಧವ್ ತಂದೆ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಮುಂದುವರೆಸುವ ಲಕ್ಷಣವಾಗಿ ನೋಡಲಾಯಿತು.
ತಮ್ಮ ದೀರ್ಘಕಾಲದ ಮಿತ್ರ ಪಕ್ಷ ಬಿಜೆಪಿಯೊಂದಿಗಿನ ಸಂಬಂಧಕ್ಕೆ ತಿಲಾಂಜಲಿ ಇಟ್ಟ ಉದ್ಧವ್ ಕಾಂಗ್ರೆಸ್ ಮತ್ತು ಶರದ್ ಪವಾರ್ರ ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡು ತಾತ್ಕಾಲಿಕ ಸರ್ಕಾರ ನಡೆಸಿದರು. ಇದಾದ ಬಳಿಕ 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಮೈತ್ರಿಕೂಟ ಹೀನಾಯ ಸೋಲನುಭವಿಸುವ ಮೂಲಕ ಹಿನ್ನಡೆಯ ಸರಮಾಲೆಯನ್ನೇ ತನ್ನ ಕೊರಳಿಗೆ ಹಾಕಿಕೊಂಡು ತಿರುಗಾಡುತ್ತಿದೆ.ಏಷ್ಯಾದ ಅತ್ಯಂತ ಶ್ರೀಮಂತ ಪಾಲಿಕೆಗಳಲ್ಲೊಂದಾದ ಬಿಎಂಸಿ ಚುನಾವಣೆ ಎಲ್ಲ ಪಕ್ಷಗಳ ಪಾಲಿಗೆ ತುಂಬಾ ಮುಖ್ಯ. ಸಣ್ಣ ರಾಜ್ಯವೊಂದರ ಬಜೆಟ್ ಗಾತ್ರ ಹೊಂದಿರುವ ಈ ಪಾಲಿಕೆಯ ಗದ್ದುಗೆ ಹಿಡಿಯುವುದು ಮಹಾರಾಷ್ಟ್ರದ ಎರಡೂ ಮೈತ್ರಿಕೂಟಗಳ ಕನಸು. 25 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶಿವಸೇನೆ ತನ್ನ ಭದ್ರಕೋಟೆಯನ್ನು ರಕ್ಷಿಸಿಕೊಳ್ಳಲು ವಿಫಲವಾಗಿದ್ದು, ಮೊದಲ ಬಾರಿ ಬಿಜೆಪಿ ತನ್ನ ಸದಸ್ಯರನ್ನು ಮೇಯರ್ ಸ್ಥಾನದಲ್ಲಿ ಕೂರಿಸಲಿದೆ.ಇಂದಿನ ಫಲಿತಾಂಶಗಳು ಠಾಕ್ರೆ ಸಹೋದರರ ನಡುವಿನ ಇತ್ತೀಚಿನ ಒಗ್ಗಟ್ಟು ಕೆಲಸ ಮಾಡಲಿಲ್ಲ ಎನ್ನುವುದನ್ನು ಸಾರಿ ಹೇಳಿದೆ. 2017 ರ ಬಿಎಂಸಿ ಚುನಾವಣೆಯಲ್ಲಿ 227 ವಾರ್ಡ್ಗಳಲ್ಲಿ ಅವಿಭಜಿತ ಶಿವಸೇನೆ 84 ಸ್ಥಾನಗಳನ್ನು ಗೆದ್ದಿತ್ತು, ಸದ್ಯದ ಪ್ರಕಾರ ಉದ್ಧವ್ ಬಣ 74 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಸೋಲಿಗೆ ಕಾರಣವೇನು..?
ಮಹಾರಾಷ್ಟ್ರೇತರರ ಬಗ್ಗೆ ರಾಜ್ ಠಾಕ್ರೆರ ಕಠಿಣ ನಿಲುವು ಮತ್ತು ಮರಾಠಿ ಹೆಮ್ಮೆಯ ಹಿಂಸಾತ್ಮಕ ಪ್ರತಿಪಾದನೆ, ಮರಾಠಿ ಮಾತನಾಡವದರ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ಅನೇಕ ಕಾರಣಗಳಿಂದಾಗಿ ಶಿವಸೇನೆ (ಯುಬಿಟಿ) ಈ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಚುನಾವಣೆಯಲ್ಲಿ ಉದ್ಧವ್ ತಮ್ಮ ಸಹೋದರನೊಂದಿದೆ ಹೋಗುವುದಕ್ಕಿಂತ ಕಾಂಗ್ರೆಸ್ ಜೊತೆ ಜೈ ಜೋಡಿಸಿದ್ದರೆ ಅಲ್ಪಸಂಖ್ಯಾತರ ಮತ ಪಡೆದು ಇನ್ನಷ್ಟು ಸ್ಥಾನಗಳನ್ನು ಪಡೆಯಬಹುದಿತ್ತು ಎಂದು ಅನೇಕರು ಲೆಕ್ಕಾಚಾರ ಹಾಕಿದ್ದಾರೆ. ಠಾಕ್ರೆ ಸಹೋದರರ ಜೊತೆ ಮೈತ್ರಿ ಮಾಡಿಕೊಂಡಿದ್ದ ಶರದ್ ಪವಾರ್ರ ಎನ್ಸಿಪಿ ಇಲ್ಲಿಯವರೆಗೂ ತನ್ನ ಖಾತೆ ತೆರೆಯಲು ವಿಫಲವಾಗಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದ ಮಹಾ ವಿಕಾಸ್ ಅಘಾಡಿ ಒಕ್ಕೂಟವು ಒಟ್ಟಾಗಿ ಹೋರಾಡಿದ್ದರೆ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು ಎಂದು ಅನೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.













































