ರಾಜ್ಯ ಸಹಕಾರಿ ವಲಯದ ಶಕ್ತಿ ಕೇಂದ್ರವಾದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಚುನಾವಣೆ ದಿಢೀರ್ ಮುಂದೂಡಿಕೆಯಾಗಿದೆ. ಇಂದು (ಜ. 29) ನಡೆಯಬೇಕಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಚುನಾವಣೆಯನ್ನು ಮುಂದೂಡಿದೆ.ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಬಣದಿಂದ ಕೆ.ಎನ್. ರಾಜಣ್ಣ ಹಾಗೂ ಡಿ.ಕೆ. ಶಿವಕುಮಾರ್ ಬಣದಿಂದ ಎಂಎಲ್ಸಿ ಎಸ್. ರವಿ ಕಣದಲ್ಲಿದ್ದಾರೆ. ಇವರ ನಡುವಿನ ಪೈಪೋಟಿ ಬಣ ರಾಜಕೀಯಕ್ಕೆ ತಿರುಗಿದ್ದರಿಂದ, ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಹಸ್ತಕ್ಷೇಪ ಮಾಡಿದೆ.ಚುನಾವಣೆಯಲ್ಲಿ ಒಮ್ಮತ ಮೂಡಿಸಲು ಸಿಎಂ ಸಿದ್ದರಾಮಯ್ಯ ಅವಿರೋಧ ಆಯ್ಕೆಯ ಸೂತ್ರ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ, ಸಿಎಂ ಸೂಚನೆ ಮೇರೆಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬೆಳ್ಳಿ ಪ್ರಕಾಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶರಣಗೌಡ ಬಯ್ಯಾಪುರ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು.ಮುಖ್ಯ ಪೈಪೋಟಿದಾರರಾದ ರಾಜಣ್ಣ ಮತ್ತು ಎಸ್. ರವಿ ಪಟ್ಟು ಸಡಿಲಿಸದ ಕಾರಣ ಸಂಧಾನ ವಿಫಲಗೊಂಡು ಚುನಾವಣೆ ಮುಂದೂಡಿಕೆಯಾಗಿದೆ. ಇಬ್ಬರು ನಾಯಕರ ಸಂಘರ್ಷ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಆತಂಕದಿಂದ ಹೈಕಮಾಂಡ್ ಈ ಹಸ್ತಕ್ಷೇಪ ಮಾಡಿದೆ. ಇದೇ ವೇಳೆ, ರಾಜಣ್ಣ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ.ಅಪೆಕ್ಸ್ ಬ್ಯಾಂಕ್ ಚುನಾವಣೆಯ ಮುಂದಿನ ದಿನಾಂಕ ಶೀಘ್ರವೇ ಪ್ರಕಟವಾಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಹೈಕಮಾಂಡ್ ಎರಡೂ ಬಣಗಳ ನಡುವೆ ಒಮ್ಮತ ಮೂಡಿಸುತ್ತದೆಯೇ ಎಂಬ ಕುತೂಹಲ ಮೂಡಿದೆ.
ಕೊನೆಗೂ ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಕೆ – ಬ್ಯಾಂಕ್ ಅಧ್ಯಕ್ಷ ಗಾದಿಗೆ ಸಿಎಂ & ಡಿಸಿಎಂ ಬಣದ ಕದನ!
Savistara
Bureau Report
[t4b-ticker]












































