ಸುಳ್ಯ : ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರು ಸುಳ್ಯದ ವಾರಪತ್ರಿಕೆಯಲ್ಲಿ ನೀಡಿದ್ದ ಆಣೆ-ಪ್ರಮಾಣದ ಹೇಳಿಕೆಗೆ ಹಿತ ರಕ್ಷಣಾ ಸಮಿತಿ ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿದೆ.
ದೇವಸ್ಥಾನದ ಆಡಳಿತ ವೈಖರಿಯ ಬಗ್ಗೆ ವಾಟ್ಸಾಪ್ ಗ್ರೂಪ್ಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಭಕ್ತರು ಸಾರ್ವಜನಿಕ ಸಭೆಗೆ ಮನವಿ ಮಾಡಿದ್ದರು. ಅದರಂತೆ ಕರೆದ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯು ಸರಿಯಾದ ಲೆಕ್ಕಪತ್ರ ನೀಡುವಲ್ಲಿ ವಿಫಲವಾಗಿದೆ ಮತ್ತು ಯಾವುದೇ ಭಕ್ತರು ವೈಯಕ್ತಿಕ ಆರೋಪ ಮಾಡಿಲ್ಲ, ಎಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ ಎಂದು ಸಮಿತಿ ಹೇಳಿದೆ.

ಹಿತರಕ್ಷಣಾ ಸಮಿತಿಯ ಪ್ರಮುಖ ಆರೋಪಗಳು:
– ಹಿಂದಿನ ಬ್ರಹ್ಮಕಲಶೋತ್ಸವ ಸಮಿತಿಯು ಎಲ್ಲಾ ಖರ್ಚು ವೆಚ್ಚ ಭರಿಸಿ ಸುಮಾರು 25 ಲಕ್ಷ ರೂ. ಉಳಿಕೆ ರೇವಣಿ ಇಟ್ಟಿತ್ತು, ಕೊರೋನಾ ಸಂದರ್ಭದಲ್ಲೂ ದೇವಸ್ಥಾನ ನಷ್ಟ ಅನುಭವಿಸಿರಲಿಲ್ಲ. ಆದರೆ ಪ್ರಸ್ತುತ ಆಡಳಿತದಲ್ಲಿ ಆ ಠೇವಣಿ ಹಣವನ್ನೂ ಖರ್ಚು ಮಾಡಲಾಗಿದೆ.
– ಹಿಂದಿನ ಸಮಿತಿಯು ಕಂಪ್ಯೂಟರೀಕರಣಗೊಳಿಸಿದ್ದ ಲೆಕ್ಕಪತ್ರ ವ್ಯವಸ್ಥೆಯಿದ್ದರೂ, ಸಾರ್ವಜನಿಕ ಸಭೆಯಲ್ಲಿ ಜಮಾ-ಖರ್ಚಿನ ವಿವರ ನೀಡಲು ಅಧ್ಯಕ್ಷರು ವಿಫಲರಾಗಿದ್ದಾರೆ.- ಭಕ್ತರು ದೇವಸ್ಥಾನದ ಅಭಿವೃದ್ಧಿಗೆ ನೀಡಿದ ಹಣವನ್ನು ಸ್ವಂತ ಖಾತೆಗೆ ಜಮೆ ಮಾಡಿಸಿಕೊಳ್ಳಲಾಗಿದೆ, ಇದು ಪಾರದರ್ಶಕತೆಗೆ ವಿರುದ್ಧವಾಗಿದೆ.
– ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದ ಸಭೆಯಲ್ಲಿ 20 ಲಕ್ಷ ರೂ. ಹಾಕುವುದಾಗಿ ಹೇಳಿದ್ದ ಅಧ್ಯಕ್ಷರು, ಸಾರ್ವಜನಿಕ ಸಭೆಯಲ್ಲಿ “ನನ್ನ ಕೈಯಿಂದ ಹಣ ಹಾಕಿಲ್ಲ” ಎಂದಿದ್ದರು. ಇದೀಗ ಪತ್ರಿಕಾ ಹೇಳಿಕೆಯಲ್ಲಿ 10 ಲಕ್ಷ ರೂ. ಸ್ವಂತ ಹಣ ಹಾಕಿರುವುದಾಗಿ ಹೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಸಮಿತಿ ಆರೋಪಿಸಿದೆ.
ಇದು ಸಾವಿರಾರು ವರ್ಷಗಳ ಇತಿಹಾಸವಿರುವ ಸೀಮೆ ದೇವಸ್ಥಾನವಾಗಿದ್ದು, ಅದರ ಪಾರಂಪರಿಕ ಪಾವಿತ್ರತೆಗೆ ಧಕ್ಕೆ ಬಂದಾಗ ಮಾತನಾಡಿದ್ದೇವೆ ಹೊರತು ವೈಯಕ್ತಿಕ ಆರೋಪ ಮಾಡಿಲ್ಲ. ದೇವಸ್ಥಾನದ ವಿಷಯದಲ್ಲಿ ರಾಜಕೀಯ ಬಣ್ಣ ಬಳಿದು ವಿಷಯಾಂತರ ಮಾಡುವುದು ಸರಿಯಲ್ಲ ಎಂದು ಹಿತರಕ್ಷಣಾ ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















































