ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪದಚ್ಯುತ ಅಧ್ಯಕ್ಷ ಬಿಜೆಪಿಯ ಬಳುವಳಿ. ಇಂತಹ ಸತ್ಯವನ್ನು ಒಪ್ಪಿಕೊಳ್ಳದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ದೂರಿದ್ದಾರೆ.
ರಾಜ್ಯದಲ್ಲಿ 1951ರಿಂದಲೂ ಆಯೋಗ ಕಾರ್ಯ ನಿರ್ವಹಿಸುತ್ತಿದೆ. ಹಿಂದೆ ನಡೆಸಿದ್ದ ಹಲವು ಪರೀಕ್ಷೆಗಳಲ್ಲಿ ಆರೋಪ ಕೇಳಿ ಬಂದಿದ್ದವು, ತನಿಖೆಗಳೂ ನಡೆದಿವೆ. ಹಿಂದೆ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ, ಎಚ್.ಎನ್. ಕೃಷ್ಣ ಅವಧಿಯ ಹಗರಣಗಳನ್ನು ಕರ್ನಾಟಕದ ಜನರು ಮರೆತಿಲ್ಲ. ಅಂದು ಕಂಕಣ ಭಾಗ್ಯದ ಆಧಾರದ ಮೇಲೆ ನೇಮಕಾತಿಗಳು ನಡೆದಿದ್ದು ತನಿಖೆಗಳಲ್ಲೂ ಬಯಲಾಗಿತ್ತು. ಆ ಅವಧಿಯ ನೇಮಕಾತಿ ಮತ್ತು ಅಕ್ರಮಗಳ ಆರೋಪಗಳ ಹಿಂದೆ ಯಾವ ಕೃಪಾಪೋಷಿತ ನಾಟಕ ಮಂಡಳಿ ಕೆಲಸ ಮಾಡಿತು ಎಂಬುದಕ್ಕೆ ಕುಮಾರಸ್ವಾಮಿ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.’ಕುಮಾರಸ್ವಾಮಿ ಅವರು ವೈಯಕ್ತಿಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಸುಳ್ಳು ಆರೋಪಗಳನ್ನು ಮಾಡುವುದರ ಮೂಲಕ ನಿಜಬಣ್ಣ ಬಯಲು ಮಾಡಿಕೊಳ್ಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆರವರ ಹೆಸರನ್ನು ಎಳೆದು ತಂದು ಸಂಘ ಪರಿವಾರದ ಸಮರ್ಥನೆಗೆ ಮುಂದಾಗಿರುತ್ತಾರೆ. ಆ ಮೂಲಕ ಕೇಂದ್ರದಲ್ಲಿ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಿರಬಹುದು’ ಎಂದಿದ್ದಾರೆ.’ರಾಮ ಮಂದಿರದ ದೇಣಿಗೆ ಕುರಿತು 2021ರಲ್ಲಿ ಇದೇ ಕುಮಾರಸ್ವಾಮಿ ಆರ್ಎಸ್ಎಸ್ ಅನ್ನು ಜರ್ಮನಿಯ ನಾಜಿಗಳ ಮನಸ್ಥಿತಿಗೆ ಹೋಲಿಕೆ ಮಾಡಿದ್ದರು ಕೇಂದ್ರದಲ್ಲಿ ಬಿಜೆಪಿ ಬದಲು ಆರ್ಎಸ್ಎಸ್ ದೇಶವನ್ನು ಆಳುತ್ತಿದೆ ಎಂದಿದ್ದರು. ಸಂಘ ಪರಿವಾರವನ್ನು ವಿಷಕಾರಿ ಎಂದು ವರ್ಗೀಕರಿಸಿ ಲೇಖನವನ್ನೂ ಪ್ರಕಟಿಸಿದ್ದರು. ಕೇಂದ್ರ ಸಚಿವರಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಒಂದು ದಿನವೂ ಧ್ವನಿ ಎತ್ತದ ಅವರು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.















































