ಪುತ್ತೂರು: ದರ್ಬೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಂಜನಾ ಪೈ ಅವರ ಆರೋಗ್ಯ ವಿಚಾರಿಸಲು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆ.24 ರಂದು ಭೇಟಿ ನೀಡಿದರು. ಗಾಯಾಳುವಿನ ಕ್ಷೇಮ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಸಂಸದರ ಹೇಳಿಕೆಯ ಮುಖ್ಯಾಂಶಗಳು:
ಕಾನೂನು ಸುವ್ಯವಸ್ಥೆ ಕುಸಿತ: ಪುತ್ತೂರಿನಲ್ಲಿ ಪ್ರಸ್ತುತ ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಭಯವಿಲ್ಲದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣಕ್ಕೇ ಇಂತಹ ಭಯಾನಕ ಹಾಗೂ ವಿಚಿತ್ರ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ಸರ್ಕಾರಕ್ಕೆ ನೇರ ಪ್ರಶ್ನೆ: ಓರ್ವ ಮಹಿಳೆಯ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ಸತ್ತಿದೆಯೋ? ಎಂದು ಸಂಸದರು ಖಾರವಾಗಿ ಪ್ರಶ್ನಿಸಿದರು.
ಆರೋಪಿಗಳಿಗೆ ಎಚ್ಚರಿಕೆ: ರೌಡಿಗಳು ಹಾಗೂ ಕೆಲ ನಿರ್ದಿಷ್ಟ ಮನಸ್ಥಿತಿಯ ಜನರು ತಮ್ಮದೇ ಸರ್ಕಾರವಿದೆ ಎಂದು ಭಾವಿಸಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಗಳು ಬದಲಾಗುತ್ತವೆ, ಕಾನೂನು ಎಂದಿಗೂ ಒಂದೇ ಆಗಿರುತ್ತದೆ ಎಂಬುದನ್ನು ದುಷ್ಕರ್ಮಿಗಳು ನೆನಪಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ಕರ್ತವ್ಯನಿರತ ಪೊಲೀಸ್ ವಾಹನದಲ್ಲಿದ್ದ ವ್ಯಕ್ತಿಯ ಮೇಲೆಯೇ ದಾಳಿ ನಡೆಸಿ, ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಖಂಡನೀಯ. ಪುತ್ತೂರಿನಲ್ಲಿ ಇಂತಹ ಗೂಂಡಾ ಸಂಸ್ಕೃತಿಯನ್ನು ಬೆಳೆಸುವುದು ಸರಿಯಲ್ಲ. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪೊಲೀಸರು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.














































