ಪುತ್ತೂರು: ಮಂಗಳೂರು-ಬೆಂಗಳೂರು ಮಧ್ಯೆ ಹಳಿ ಸಂಪೂರ್ಣ ವಿದ್ಯುದ್ದೀಕರಣಗೊಂಡು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆದಿದೆ. ಘಾಟಿ ಪ್ರದೇಶದಲ್ಲಿ ರೈಲ್ವೆ ಹಳಿಯ ವಿದ್ಯುದ್ದೀಕರಣವನ್ನು ಕನಿಷ್ಠ ಅವಧಿಯಲ್ಲಿ ಮುಗಿಸಿ ಇಲಾಖೆ ಸಾಧನೆ ಮಾಡಿದೆ. ಘಾಟಿಯಲ್ಲಿ 2-3 ಪ್ರಾಯೋಗಿಕ ಓಡಾಟ ನಡೆದಿದ್ದು, ಏರ್ ಬ್ರೇಕಿಂಗ್ ವ್ಯವಸ್ಥೆ ಪರೀಕ್ಷೆ ಪೂರ್ಣವಾಗಿದೆ. ಶೀಘ್ರದಲ್ಲೇ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು. ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ರೈಲ್ವೆ ಮೇಲ್ದರ್ಜೆ ಕಾರ್ಯ ವೇಗವಾಗಿ ನಡೆಯುತ್ತಿದೆ. ಶ್ರೀಘ್ರದಲ್ಲೇ ವಂದೇ ಭಾರತ್ ರೈಲು ಸಂಚಾರಕ್ಕೆ ಸಮಯ, ವೇಳಾಪಟ್ಟಿ ನಿಗದಿ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಹಳಿ ದ್ವಿಗುಣಕ್ಕೆ ಮಾತುಕತೆ: ಮಂಗಳೂರು-ಬೆಂಗಳೂರುಮಧ್ಯೆ ರೈಲ್ವೆ ಹಳಿ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರ ಜತೆಗೆ ಮಾತುಕತೆ ನಡೆಸಲಾಗಿದೆ. ದಕ್ಷಿಣ ರೈಲ್ವೆಯ 20 ಕಿ.ಮೀ. ಭಾಗವನ್ನು ನೈಋತ್ಯ ರೈಲ್ವೆಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಕೊಂಕಣ್ ರೈಲ್ವೆ ಕೂಡ ಭಾರತೀಯ ರೈಲ್ವೆ ಜತೆಗೆ ವಿಲೀನವಾಗಬೇಕು. ನೈಋತ್ಯ ರೈಲ್ವೆಗೆ ವಿಲೀನ ಮಾಡಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿ ಜತೆಗೆ ಯೋಜನೆ ಹಾಕಿಕೊಳ್ಳಲು, ಉತ್ತಮ ರೈಲ್ವೆ ಸೇವೆ ನೀಡಲು ಏಕತೀರ್ಮಾನ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು. ವಿಲೀನಕ್ಕೆ ಕೇರಳ ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಚೌಟ, ಅಭಿವೃದ್ಧಿ ದೃಷ್ಟಿಯಿಂದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ಅದರಲ್ಲಿ ಕ್ಷುಲ್ಲಕ ರಾಜಕೀಯ ಮಾಡಲು ಬಯಸುವುದಿಲ್ಲ ಎಂದರು.














































