ಕ್ಲಾಬ್ ಮತ್ತು ಚರ್ಚ್‌ಗಳು ನೊಂದಣಿಯಾಗಿವೆಯೇ?ಸಣ್ಣ ಪುಸ್ತಕ ಬಿಟ್ಟು ಅಂಬೇಡ್ಕರ್ ಸಂವಿಧಾನ ಓದಿ: ಬ್ರಿಟಿಷರಿಗೇ ಸಾಧ್ಯವಾಗದ್ದು ಪ್ರಿಯಾಂಕ್ ಖರ್ಗೆ ನಿಮ್ಮಿಂದ ಸಾಧ್ಯವೇ? ಆರ್‌ಎಸ್‌ಎಸ್ ಬೆನ್ನಿಗೆ ನಿಂತ ವಿಪಕ್ಷ ನಾಯಕ

Picture of Savistara

Savistara

Bureau Report

ಬೆಂಗಳೂರು: ಆರ್‌ಎಸ್‌ಎಸ್ ನೊಂದಣಿ ವಿಷಯವಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಮತ್ತು ಹಾಕಿದ್ದ ಸವಾಲಿಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಭರ್ಜರಿ ತಿರುಗೇಟು ನೀಡಿದ್ದಾರೆ. ಯಾವುದೋ ಸಣ್ಣಪುಟ್ಟ ಪುಸ್ತಕಗಳನ್ನು ಓದಿ ಮಾತನಾಡುವ ಬದಲು, ಅಂಬೇಡ್ಕರ್ ಬರೆದ ಸಂವಿಧಾನದ ದೊಡ್ಡ ಪುಸ್ತಕವನ್ನು ಮೊದಲು ಓದಿ ಬನ್ನಿ ಎಂದು ಅಶೋಕ್ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆಗಳು ಕಡ್ಡಾಯವಾಗಿ ನೊಂದಣಿಯಾಗಲೇಬೇಕು ಎಂದು ಸಂವಿಧಾನದ ಯಾವ ಭಾಗದಲ್ಲಿ ಹೇಳಲಾಗಿದೆ ಎಂಬುದನ್ನು ಪ್ರಿಯಾಂಕ್ ಖರ್ಗೆ ಮೊದಲು ತೋರಿಸಲಿ. ಆರ್‌ಎಸ್‌ಎಸ್ ಎನ್ನುವುದು ಇವತ್ತು ನಿನ್ನೆಯ ಸಂಘಟನೆಯಲ್ಲ. ಇದು ಬ್ರಿಟಿಷರ ಕಾಲದಲ್ಲೇ ಸ್ಥಾಪನೆಯಾದ ಸಂಸ್ಥೆ. ಆ ಕಾಲದಲ್ಲಿ ಬಲಿಷ್ಠವಾಗಿದ್ದ ಬ್ರಿಟಿಷ್ ಸರ್ಕಾರವೇ ಆರ್‌ಎಸ್‌ಎಸ್ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ. ಅಷ್ಟೇ ಏಕೆ, ದೇಶದ ಹಿಂದಿನ ಪ್ರಭಾವಿ ಪ್ರಧಾನ ಮಂತ್ರಿಗಳೂ ಕೂಡ ಸಂಘಟನೆಯನ್ನು ತಡೆಯಲು ವಿಫಲರಾಗಿದ್ದಾರೆ ಎಂದು ನೆನಪಿಸಿದರು.

ಪ್ರಿಯಾಂಕ್ ಖರ್ಗೆ ಅವರ ನೊಂದಣಿ ತರ್ಕವನ್ನು ಪ್ರಶ್ನಿಸಿದ ಅಶೋಕ್, ಬೆಂಗಳೂರಿನಲ್ಲಿ ಅದೆಷ್ಟೋ ಕ್ಲಬ್‌ಗಳು ಮತ್ತು ಚರ್ಚ್‌ಗಳಿವೆ, ಇವುಗಳೆಲ್ಲವೂ ನೊಂದಣಿಯಾಗಿವೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟಿದ ಅಹಿಂದ ಸಂಘಟನೆಗೆ ನೊಂದಣಿ ಇದೆಯೇ? ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೆ, ಮೊಹರಂ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವವರಿಗೆ ಸದಸ್ಯತ್ವದ ಚೀಟಿ ಅಥವಾ ಆ ಮೆರವಣಿಗೆಗೆ ನೊಂದಣಿ ಇದೆಯೇ ಎಂದು ಖರ್ಗೆ ಅವರಿಗೆ ನೇರ ಟಾಂಗ್ ನೀಡಿದರು.ಸಚಿವ ಪ್ರಿಯಾಂಕ್ ಖರ್ಗೆ ಪ್ರಕಾರ ಮೆರವಣಿಗೆ ಮಾಡಲು ಅಥವಾ ಸಂಘಟನೆ ನಡೆಸಲು ನೊಂದಣಿ ಕಡ್ಡಾಯ ಎಂದಾದರೆ, ಮೊಹರಂ ಮೆರವಣಿಗೆ ಮಾಡಿದವರು ನೊಂದಣಿ ಮಾಡಿಸಿದ್ದಾರೆಯೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು ಕೇವಲ ಪ್ರಚಾರಕ್ಕಾಗಿ ಮತ್ತು ಜನರನ್ನು ದಾರಿ ತಪ್ಪಿಸಲು ಇಂತಹ ಅಪ್ರಸ್ತುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಘಟನೆಯ ಶಕ್ತಿ ಮತ್ತು ಇತಿಹಾಸದ ಅರಿವಿಲ್ಲದೆ ಇಂತಹ ಚರ್ಚೆ ಮಾಡುವುದು ಹಾಸ್ಯಾಸ್ಪದ ಎಂದು ಅಶೋಕ್ ವಾಗ್ದಾಳಿ ನಡೆಸಿದರು. ಸದ್ಯ ಈ ನೊಂದಣಿ ವಿವಾದ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದೆ.

[t4b-ticker]
error: Content is protected !!