ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಕೆಲ ದಿನಗಳ ನಂತರ, ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ನ ಆದಂಪುರ್ ವಾಯು ನೆಲೆಗೆ ಭೇಟಿ ನೀಡಿ, ಯೋಧರೊಂದಿಗೆ ಮಾತುಕತೆ ನಡೆಸಿದರು.ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಇಂದು ಮುಂಜಾನೆ ನಾನು ಆದಂಪುರ್ ವಾಯು ನೆಲೆಗೆ ತೆರಳಿ, ನಮ್ಮ ವೀರ ವಾಯು ಪಡೆಯ ಯೋಧರನ್ನು ಭೇಟಿ ಮಾಡಿದೆ. ತಮ್ಮ ಶೌರ್ಯ, ನಿರ್ಧಾರ ಹಾಗೂ ನಿರ್ಭೀತಿಯನ್ನು ಪ್ರದರ್ಶಿಸಿದವರೊಂದಿಗಿನ ಅನುಭವ ತುಂಬಾ ವಿಶೇಷವಾಗಿತ್ತು. ಸಶಸ್ತ್ರ ಪಡೆಗಳು ನಮ್ಮ ದೇಶಕ್ಕಾಗಿ ಮಾಡುವ ಎಲ್ಲ ಕೆಲಸಗಳಿಗೂ ಭಾರತ ತುಂಬಾ ಆಭಾರಿಯಾಗಿದೆ” ಎಂದು ಶ್ಲಾಘಿಸಿದ್ದಾರೆ.
ಮೇ 7ರಂದು ಭಾರತೀಯ ವಾಯು ಪಡೆಯು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಡಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ, ಮೇ 9 ಹಾಗೂ ಮೇ 10ರ ನಡುವಿನ ರಾತ್ರಿಯಂದು ಪಾಕಿಸ್ತಾನ ದಾಳಿ ನಡೆಸಲು ಯತ್ನಿಸಿದ ವಾಯು ನೆಲಗಳ ಪೈಕಿ ಆದಂಪುರ್ ವಾಯು ನೆಲೆಯೂ ಒಂದಾಗಿತ್ತು. ನಮ್ಮಜೆ-17 ಯುದ್ಧ ವಿಮಾನಗಳಿಂದ ಹಾರಿಸಲಾದ ಹೈಪರ್ಸಾನಿಕ್ ಕ್ಷಿಪಣಿಗಳು ಆದಂಪುರ್ನಲ್ಲಿನ ಭಾರತದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಿದೆ ಎಂದೂ ಪಾಕಿಸ್ತಾನ ಪ್ರತಿಪಾದಿಸಿತ್ತು. ಆದರೆ, ಈ ಪ್ರತಿಪಾದನೆಯನ್ನು ಭಾರತದ ಅಧಿಕಾರಿಗಳು ಅಲ್ಲಗಳೆದಿದ್ದರು.













































