ಲಕ್ನೋ: ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಒಂದು ದಿನದ ನಂತರ, ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ(Virat Kohli) ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ(Anushka Sharma) ಅವರೊಂದಿಗೆ ವೃಂದಾವನಕ್ಕೆ(Vrindavan) ಭೇಟಿ ನೀಡಿದ್ದಾರೆ.
ಇತ್ತೀಚೆಗೆ ಆಧ್ಯಾತ್ಮದ ಕಡೆ ಒಲವು ತೋರಿಸಿರುವ ವಿರುಷ್ಕಾ ಜೋಡಿ ಪ್ರೇಮಾನಂದ ಜಿ ಮಹಾರಾಜ್(Premananda Maharaj) ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಪ್ರೇಮಾನಂದ ಸ್ವಾಮೀಜಿ ವಿರಾಟ್ ಕೊಹ್ಲಿ ಬಳಿ ನೀವು ಸಂತೋಷವಾಗಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಕೊಹ್ಲಿ ನಾವು ಚೆನ್ನಾಗಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ಪ್ರೇಮಾನಂದ ಸ್ವಾಮೀಜಿ ನೀವು ಚೆನ್ನಾಗಿರಬೇಕು ಎಂದು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರುಷ್ಕಾ ದಂಪತಿ ಮಕ್ಕಳೊಂದಿಗೆ ಈ ವರ್ಷದ ಜನವರಿಯಲ್ಲಿ ಪ್ರೇಮಾನಂದ್ ಜಿ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದರು. ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ(Test Cricket) ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವೃಂದಾವನಕ್ಕೆ ಭೇಟಿ ನೀಡಿದ್ದಾರೆ.
2011ರಲ್ಲಿ ಕಿಂಗ್ ಸ್ಟನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಕೊಹ್ಲಿ ಪದಾರ್ಪಣೆ ಮಾಡಿದ್ದರು. ಇದುವರೆಗೆ ಟೀಂ ಇಂಡಿಯಾ 123 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು, 31 ಅರ್ಧಶತಕಗಳೂ ಸೇರಿವೆ. ಇನ್ನೂ ನಾಯಕನಾಗಿ 68 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ 40 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಕಳೆದ 14 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ದಿಗ್ಗಜರ ದಾಖಲೆಗಳನ್ನ ಮುರಿದು ಮೆರೆದಾಡಿದ ಕೊಹ್ಲಿ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ.













































