ಒಂದೇ ವೇದಿಕೇಲಿ ರಾಜಕೀಯ ವೈರಿಗಳು ಶರದ್‌-ಅಜಿತ್‌: ಎನ್‌ಸಿಪಿ ವಿಲೀನದ ಮುನ್ಸೂಚನೆ?

Picture of Savistara

Savistara

Bureau Report

ಡಿಸಿಎಂ ಅಜಿತ್‌ ಪವಾರ್‌ ಮತ್ತು ಶರದ್‌ ಪವಾರ್‌ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಖಂಡ ಎನ್‌ಸಿಪಿ ರಚನೆಯಾಗುವ ಮುನ್ಸೂಚನೆ ನೀಡಿದೆ. ಕಳೆದ 4 ದಿನಗಳಲ್ಲಿ 2 ಬಾರಿ ಒಟ್ಟಿಗೆ ಕಾಣಿಸಿಕೊಂಡಿರುವ ಇವರಿಬ್ಬರ ಒಕ್ಕೂಟದಿಂದ ಶರದ್‌ರ ಪಕ್ಷದ ಕೆಲವು ಶಾಸಕರು ಅಜಿತ್‌ರ ಎನ್‌ಸಿಪಿ ಜತೆ ಕೈಜೋಡಿಸುವ ಸಾಧ್ಯತೆ ಇದೆ.

ಮುಂಬೈ (ಮೇ.14): ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಮತ್ತೆ ಅಖಂಡ ಎನ್‌ಸಿಪಿ ರಚನೆಯಾಗುವ ಮುನ್ಸೂಚನೆಗಳು ಇತ್ತೀಚೆಗೆ ದಟ್ಟವಾಗತೊಡಗಿದೆ. ಕಾರಣ, ರಾಜಕೀಯ ವೈರಿಗಳಾಗಿರುವ ಡಿಸಿಎಂ ಅಜಿತ್‌ ಪವಾರ್‌ ಮತ್ತು ಶರದ್‌ ಪವಾರ್‌ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಸಂಬಂಧಿಗಳೂ ಆಗಿರುವ ಶರದ್‌ ಮತ್ತು ಅಜಿತ್‌ ಕಳೆದ 4 ದಿನಗಳಲ್ಲಿ 2 ಬಾರಿ ಒಟ್ಟಿಗೆ ಕಾಣಿಸಿಕೊಂಡಂತಾಗಿದೆ. ಇದೇ ವೇಳೆ, ಶರದ್‌ರ ಪಕ್ಷದ 10 ಶಾಸಕರ ಪೈಕಿ 4 ಮಂದಿ ಅಜಿತ್‌ರ ಎನ್‌ಸಿಪಿ ಜತೆ ಕೈಜೋಡಿಸುವ ಬಗ್ಗೆ ಒಲವು ಹೊಂದಿರುವುದು, 2023ರಲ್ಲಿ ವಿಭಜನೆಗೊಂಡ ಎನ್‌ಸಿಪಿ ಮತ್ತೆ ಒಂದಾಗುವ ನಿರೀಕ್ಷೆ ಹುಟ್ಟುಹಾಕಿದೆ. ಈ ಮೊದಲೂ ಸಹ ಅಜಿತ್‌ ಮತ್ತು ಶರದ್‌ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ, ಉದ್ಧವ್‌ರ ಶಿವಸೇನೆ ಮತ್ತು ಕಾಂಗ್ರೆಸ್‌ ಜತೆ ಮಹಾ ವಿಕಾಸ್‌ ಅಘಾಡಿ ಕೂಟದ ಭಾಗವಾಗಿ ಶರದ್‌ರ ಪಕ್ಷ 86ರಲ್ಲಿ ಕೇವಲ 10 ಸೀಟು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅಂತೆಯೇ, ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದ 10 ಸೀಟುಗಳ ಪೈಕಿ 8ರಲ್ಲಿ ಜಯಶಾಲಿಯಾಗಿತ್ತು. ಇದರ ಬೆನ್ನಲ್ಲೇ ಎನ್‌ಸಿಪಿ ವಿಲೀನದ ಬಗ್ಗೆ ಗುಸುಗುಸು ಶುರುವಾಗಿತ್ತು.

ಅತ್ತ ಶರದ್‌ ಬಣದಲ್ಲಿ ಕೆಲವರು, ಅಜಿತ್‌ರ ಎನ್‌ಸಿಪಿ ಜತೆ ಸೇರುವುದೆಂದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಬೆಂಬಲಿಸುವುದು ಎಂಬ ಅಭಿಪ್ರಾಯ ಹೊಂದಿರುವುದನ್ನೂ ನಿರ್ಲಕ್ಷಿಸಲಾಗದು.

[t4b-ticker]
error: Content is protected !!