ದೇಶದ ಹೆಮ್ಮೆಯ ಪ್ರಜೆಯಾಗಿ ವೈಯಕ್ತಿಕ ಹೇಳಿಕೆ ನೀಡಿದ್ದೇನೆ: ಕಾಂಗ್ರೆಸ್ ಸಂಸದ
ಹೊಸದಿಲ್ಲಿ: ಭಾರತ-ಪಾಕ್ ಉದ್ವಿಗ್ನತೆ ವೇಳೆ ಕೇಂದ್ರಸರಕಾರವನ್ನು ಮುಕ್ತಕಂಠದಲ್ಲಿ ಹೊಗಳಿದ್ದಕ್ಕಾಗಿ ಸ್ವಪಕ್ಷೀಯರ ಟೀಕೆಗೆ ತುತ್ತಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ತನ್ನ ಹೇಳಿಕೆ ತನ್ನ ಪಕ್ಷದ ಅಧಿಕೃತ ನಿಲುವಲ್ಲ. ಸರಕಾರದ ವಕ್ತಾರನೂ ನಾನಲ್ಲ. ದೇಶದ ಹೆಮ್ಮೆಯ ಪ್ರಜೆ-ಯಾಗಿ ವೈಯಕ್ತಿಕ ಹೇಳಿಕೆ ನೀಡಿದ್ದೇನೆ’ ಎಂದಿದ್ದಾರೆ.ಈ ಮೂಲಕ “ತರೂರ್ ಲಕ್ಷ್ಮಣ ರೇಖೆ ದಾಟುತ್ತಿದ್ದಾರೆ’ ಎಂದು ಎಚ್ಚರಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಅವರಿಗೆ ಟಾಂಗ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಆದಾಗ್ಯೂ ಕಾಂಗ್ರೆಸ್ ಸಭೆಯಲ್ಲಿ ನನ್ನ ವಿರುದ್ಧ ಟೀಕೆ ನಡೆದದ್ದು ಯಾವಾಗ ಎಂದು ತಿಳಿದಿಲ್ಲವೆಂದೂ ತರೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ನಾಯಕರು ಹೇಳಿದ್ದೇನು?
ಭಾರತ- ಪಾಕಿಸ್ತಾನ ಸಂಘರ್ಷದ ಕುರಿತು ಸಂಸದ ಶಶಿ ತರೂರ್ ಕೇಂದ್ರ ಸರ್ಕಾರದ ಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿರುವುದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಕಾಂಗ್ರೆಸ್ ಒಂದು ಪ್ರಜಾಪ್ರಭುತ್ವ ಪಕ್ಷವಾಗಿದ್ದು, ಅದರಲ್ಲಿ ನಾಯಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ, ಆದರೆ ಶಶಿ ತರೂರ್ ಅವರು ಭಾರತ- ಪಾಕಿಸ್ತಾನ ಸಂಘರ್ಷದ ಕುರಿತು ಪದೇ ಪದೇ ಹೇಳಿಕೆ ನೀಡುವ ಮೂಲಕ ‘ಲಕ್ಷ್ಮಣ ರೇಖೆ’ಯನ್ನು ಮೀರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ನವದೆಹಲಿಯ 24, ಅಕ್ಟರ್ ರಸ್ತೆಯ ಕಚೇರಿಯಲ್ಲಿ ತರೂರ್, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಚಿನ್ ಪೈಲಟ್ ಸೇರಿದಂತೆ ಹಿರಿಯ ನಾಯಕರ ಸಭೆಯಲ್ಲಿ ಈ ಹೇಳಿಕೆ ವ್ಯಕ್ತವಾಗಿದೆ.
“ನಮ್ಮದು ಪ್ರಜಾಸತ್ತಾತ್ಮಕ ಪಕ್ಷ ಮತ್ತು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ, ಆದರೆ ಈ ಬಾರಿ ತರೂರ್ ಲಕ್ಷ್ಮಣ ರೇಖೆಯನ್ನು ಮೀರಿದ್ದಾರೆ” ಎಂದು ಪಕ್ಷದ ಮೂಲಗಳು ತಿಳಿಸಿವೆ. ಯಾರನ್ನೂ ಹೆಸರಿಸದೆ, ಪಕ್ಷದ ನಾಯಕತ್ವವು ಸಭೆಯಲ್ಲಿ “ಸ್ಪಷ್ಟ ಸಂದೇಶ”ವನ್ನು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.












































