ಕರ್ನಾಟಕಕ್ಕೆ ಹೊಸ 2 ರೈಲು ಮಾರ್ಗ ಘೋಷಿಸಿದ ವಿ ಸೋಮಣ್ಣ; 235 ಕಿಮೀ ದೂರ, 6 ಜಿಲ್ಲೆಗಳಿಗೆ ಅನುಕೂಲ! ಎಲ್ಲಿಂದ ಎಲ್ಲಿಗೆ?

Picture of Savistara

Savistara

Bureau Report

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಕರ್ನಾಟಕಕ್ಕೆ ಎರಡು ಹೊಸ ರೈಲು ಮಾರ್ಗಗಳನ್ನು ಘೋಷಿಸಿದ್ದಾರೆ. ಆಲಮಟ್ಟಿ-ಯಾದಗಿರಿ ಮತ್ತು ಭದ್ರಾವತಿ-ಚಿಕ್ಕಜಾಜೂರು ಮಾರ್ಗಗಳ ಸಮೀಕ್ಷೆಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ ಮಧ್ಯ ಹಾಗೂ ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈ ಯೋಜನೆಗೆ 5.87 ಕೋಟಿ ರೂ. ಮೀಸಲಿಡಲಾಗಿದೆ, ಇದು ಸಂಪರ್ಕ ಸುಧಾರಣೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಬೆಂಗಳೂರು: ಕರ್ನಾಟಕ ಜನರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಗುಡ್‌ನ್ಯೂಸ್‌ ನೀಡಿದ್ದಾರೆ. ಹೊಸ 2 ಮಾರ್ಗ ಆರಂಭದ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಮಾರ್ಗದಿಂದ ಮಧ್ಯ ಕರ್ನಾಟಕದ 3 ಜಿಲ್ಲೆಗಳಿಗೆ, ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಸೇರಿ ಒಟ್ಟು ರಾಜ್ಯದ ಆರು ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ಒಂದು ಮಾರ್ಗ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಆಲಮಟ್ಟಿ – ಯಾದಗಿರಿ, ಮತ್ತೊಂದು ಮಾರ್ಗ ಅರೆ ಮಲೆನಾಡಿಗೆ ಸಂಬಂಧಿಸಿದ ಭದ್ರಾವತಿ – ಚಿಕ್ಕಜಾಜೂರ್ ನಡುವೆ ಚನ್ನಗಿರಿ ಮೂಲಕ. ಇನ್ನು ಈ ಎರಡು ರೈಲು ಮಾರ್ಗದಿಂದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.

ಈ ಬಗ್ಗೆ ಕೇಂದ್ರ ಸಚಿವ ಸ್ವತಃ ವಿ ಸೋಮಣ್ಣ ಟ್ವೀಟ್‌ ಮಾಡಿದ್ದು, ” ಕರ್ನಾಟಕಕ್ಕೆ ಒಳ್ಳೆಯ ಸುದ್ದಿ. ನಮ್ಮ ರಾಜ್ಯದ ಹೆಚ್ಚುತ್ತಿರುವ ಅಗತ್ಯಗಳನ್ನು ಗುರುತಿಸಿ, ಎರಡು ಹೊಸ ರೈಲು ಮಾರ್ಗಗಳಿಗೆ ಅಂತಿಮ ಸ್ಥಳ ಸಮೀಕ್ಷೆಗಳನ್ನು ಅನುಮೋದಿಸಲಾಗಿದೆ ” ಎಂದು ತಿಳಿಸಿದ್ದಾರೆ. ಸುಧಾರಿತ ಸಂಪರ್ಕ ಮತ್ತು ವೇಗವರ್ಧಿತ ಪ್ರಾದೇಶಿಕ ಅಭಿವೃದ್ಧಿಯತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದಿರವ ವಿ ಸೋಮಣ್ಣ ಅವರು ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ. (ಕರ್ನಾಟಕಕ್ಕೆ ಹೊಸ ವಂದೇ ಭಾರತ್‌ ರೈಲು)

ಮಾರ್ಗ ಸಮೀಕ್ಷೆಗೆ ಕೋಟ್ಯಾಂತರ ರೂ ಹಣ ಬಿಡುಗಡೆ

ಸದ್ಯ ಘೋಷಣೆಯಾಗಿರುವ ಆಲಮಟ್ಟಿ – ಯಾದಗಿರಿ, ಭದ್ರಾವತಿ – ಚಿಕ್ಕಜಾಜೂರ್ ಮಾರ್ಗ ಸಮೀಕ್ಷೆಗೆ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ. ಒಟ್ಟು ಎರಡು ಮಾರ್ಗ ಸೇರಿ 5.87 ಕೋಟಿ ರೂ. ನೀಡಲಾಗಿದೆ ಎಂದು ವಿ ಸೋಮಣ್ಣ ಹೇಳಿದ್ದಾರೆ. ಇತ್ತೀಚೆಗೆ ವಿ ಸೋಮಣ್ಣ ಅವರು ಚಿತ್ರದುರ್ಗ ಉಜ್ಜಿನಿ ನಡುವೆ ರೈಲು ಮಾರ್ಗ ಘೋಷಣೆ ಮಾಡಿದ್ದರು.

ಭದ್ರಾವತಿ – ಚಿಕ್ಕಜಾಜೂರು ರೈಲು ಮಾರ್ಗದ ಅನುಕೂಲಗಳೇನು?

  • ಅಡಕೆ ನಾಡು ಚನ್ನಗಿರಿಯ ರೈಲು ಸಂಪರ್ಕ ಸಿಗಲಿದೆ.
  • ತುಮ್‌ಕೋಸ್‌ ಅಡಕೆ ಮಾರುಕಟ್ಟೆ ಹಿನ್ನೆಲೆ ಆಮದು ರಫ್ತು ಸಾಗಣೆಗೆ ಅನುಕೂಲ.
  • ಹೊದಿಗೆರೆಯಲ್ಲಿ ಶಿವಾಜಿ ತಂದೆ ಷಹಾಜಿ ರಾಜೇ ಬೋಸ್ಲೆ ಸಮಾಧಿ, ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆ ಇದ್ದು ಪ್ರವಾಸಿರಿಗೆ ಅನುಕೂಲ.

ಮುದ್ದೇಬಿಹಾಳ ಜನರಿಗೆ ಅನುಕೂಲ

ಆಲಮಟ್ಟಿ – ಯಾದಗಿರಿ ರೈಲು ಮಾರ್ಗವನ್ನು ಮುದ್ದೇಬಿಹಾಳ, ತಾಳಿಕೋಟೆ, ಸುರಪುರ ಮೂಲಕ ನಿರ್ಮಿಸುವ ಸಾಧ್ಯತೆ ಇದೆ. ಈ ಮೂಲಕ ವಿಜಯಪುರ ಪ್ರಮುಖ ತಾಲೂಕು ಮುದ್ದೇಬಿಹಾಳಕ್ಕೆ ರೈಲು ಸಂಪರ್ಕ ಸಿಗಲಿದೆ. ಸದ್ಯ ಮುದ್ದೇಬಿಹಾಳ ತಾಲೂಕು ಜನ ಆಲಮಟ್ಟಿ ನಿಲ್ದಾಣದಿಂದ ರೈಲು ಸಂಚಾರ ಮಾಡುತ್ತಿದ್ದಾರೆ..

[t4b-ticker]
error: Content is protected !!