ವಿದೇಶಕ್ಕೆ ತೆರಳುವ ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ: ಕಾಂಗ್ರೆಸ್ ಸಂಸದ ಸ್ಪಷ್ಟನೆ
ತಿರುವನಂತಪುರ: ಪಾಕ್ ಭಯೋತ್ಪಾದನೆ ವಿರುದ್ಧಭಾರತದ ನಿಲುವನ್ನು ವಿದೇಶಗಳಿಗೆ ತಿಳಿಸಲು ತೆರಳುತ್ತಿರುವ ನಿಯೋಗದ ನೇತೃತ್ವ ವಹಿಸಿರುವುದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದರೂ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ರವಿವಾರ ಉತ್ತರಿಸಿದ ಅವರು. “ವಿದೇಶಕ್ಕೆ ನಿಯೋಗ ತೆರಳುವುದರಲ್ಲಿ ನನಗಂತೂ ಯಾವುದೇ ರಾಜಕೀಯ ಕಾಣಿಸುತ್ತಿಲ್ಲ. ನಾವೆಲ್ಲರೂ ಭಾರತೀಯರು. ನಮಗೆ ದೇಶ ಇದ್ದಾಗ ಮಾತ್ರ ರಾಜಕೀಯ ಎನ್ನುವುದು ಮಹತ್ವ ಪಡೆಯುತ್ತದೆ. ದೇಶವು ಬಿಕ್ಕಟ್ಟು ಎದುರಿಸುವಾಗ, ಸರಕಾರವು ನಾಗರಿಕರ ನೆರವು ಕೋರುತ್ತದೆ. ಅಂತಹ ಸಂದರ್ಭದಲ್ಲಿ ನೀವಾಗಿದ್ದರೆ ಏನು ಮಾಡುತ್ತಿದ್ದಿರಿ’ ಎಂದು ಪ್ರಶ್ನಿಸಿದ್ದಾರೆ.
ಪಾಕ್ನೊಂದಿಗಿನ 88 ಗಂಟೆಗಳ ಸಂಘರ್ಷವನ್ನು ನಾವೆಲ್ಲ ನೋಡಿದ್ದೇವೆ. ಅದರ ಬಗ್ಗೆ ಜಗತ್ತು ಏನು ಹೇಳುತ್ತಿದೆ ಎಂಬುದನ್ನು ನಾವು ಗಮನಿಸಬೇಕು. ಇದರಲ್ಲಿ ನಮ್ಮ ಪಾತ್ರವೂ ಇದೆ. ಅದಕ್ಕಾಗಿ ನಾನು ಈ ನಿಯೋಗದಲ್ಲಿ ಭಾಗಿಯಾಗುತ್ತಿದ್ದೇನೆ ಎಂದಿದ್ದಾರೆ. ಇದೇ ವೇಳೆ, ನಿಮ್ಮ ಭಾಗೀದಾರಿಕೆಗೆ ಕಾಂಗ್ರೆಸ್ನ ವಿರೋಧವಿದೆಯೇ ಎಂಬ ಪ್ರಶ್ನೆಗೆ ತರೂರ್, “ಅದನ್ನು ನೀವು ಅವರಿಗೇ (ಕಾಂಗ್ರೆಸ್) ಕೇಳಿ’ ಎಂದಿದ್ದಾರೆ.ಇನ್ನೊಂದೆಡೆ, ತರೂರ್ ವಿಚಾರದಲ್ಲಿ ಪ್ರತಿಕ್ರಿಯಿಸಲು ಕೇರಳ ಕಾಂಗ್ರೆಸ್ ನಿರಾಕರಿಸಿದೆ. ಅದನ್ನು ಹೈಕಮಾಂಡ್ ನೋಡಿಕೊಳ್ಳಲಿದೆ ಎಂದು ಹೇಳಿದೆ. ಈ ನಡುವೆ, ಶಿವಸೇನೆ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಮಾತನಾಡಿ, “ವಿದೇಶಿ ನಿಯೋಗವೆಂಬ ದಿಬ್ಬಣವನ್ನು ವಿಪಕ್ಷಗಳ ಇಂಡಿಯಾ ಕೂಟವು ಬಹಿಷ್ಕರಿಸಬೇಕು’ ಎಂದು ಆಗ್ರಹಿಸಿದ್ದಾರೆ.












































