ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ್ಟಿ ಗುರಿಕಾರ ಸ್ಥಾನದಲ್ಲಿ ನಿಲ್ಲುವಂತಿಲ್ಲ ; ಅಪರ ಜಿಲ್ಲಾಧಿಕಾರಿ ಆದೇಶ ! ಇಂದು ಭಂಡಾರ ಮನೆ ಕೆಡವಿದ್ದಕ್ಕೆ ಪಿಲಿಚಾಮುಂಡಿ ದೈವವೇ ಕಾರಣಿಕವೇ..??

Picture of Savistara

Savistara

Bureau Report

ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕ ಕೊಂಡಾಣ ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನ ಕಿಡಿಗೇಡಿಗಳು ಕೆಡವಿ ಹಾಕಿದ ದಿವಸದಂದೇ ಪಿಲಿಚಾಮುಂಡಿ ದೈವದ ಗರ್ಭಗುಡಿ ಮುಂದೆ ನಾವು ಭಕ್ತಿಯಿಂದ ಪ್ರಾರ್ಥಿಸಿದ್ದೆವು.

ಉಳ್ಳಾಲ, ಮೇ 20 : ದಕ್ಷಿಣ ಕನ್ನಡ ಜಿಲ್ಲೆಯ ಕಾರಣಿಕಕೊಂಡಾಣ ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನ ಕಿಡಿಗೇಡಿಗಳು ಕೆಡವಿ ಹಾಕಿದ ದಿವಸದಂದೇ ಪಿಲಿಚಾಮುಂಡಿ ದೈವದ ಗರ್ಭಗುಡಿ ಮುಂದೆ ನಾವು ಭಕ್ತಿಯಿಂದ ಪ್ರಾರ್ಥಿಸಿದ್ದೆವು. ಘಟನೆಗೆ ಒಂದು ವರ್ಷ ಸಲ್ಲುವ ಮೊದಲೇ ದೈವವು ತನ್ನ ಕಾರಣಿಕ ತೋರಿಸಿದ ಫಲವಾಗಿ ಭಂಡಾರ ಮನೆ ಕೆಡವಿದ್ದ ಮುತ್ತಣ್ಣ ಶೆಟ್ಟಿ ಕೊಂಡಾಣ ಕ್ಷೇತ್ರದಲ್ಲಿ ಮುಂಡಾಸು ಕಟ್ಟಿ ಗುರಿಕಾರ ಸ್ಥಾನದಲ್ಲಿ ನಿಲ್ಲದಂತೆ ಅಪರ ಜಿಲ್ಲಾಧಿಕಾರಿ, ಧಾರ್ಮಿಕ ಪರಿಷತ್ ಇಲಾಖೆ ಆದೇಶ ಹೊರಡಿಸಿರುವುದಾಗಿ ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾ‌ರ್ ಹೇಳಿದ್ದಾರೆ.ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷದ ಮಾ.3 ರಂದು ಕೊಂಡಾಣ ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿದ್ದ ನೂತನ ಭಂಡಾರ ಮನೆಯನ್ನು ಕ್ಷೇತ್ರದ ಗುರಿಕಾರರೆನ್ನುವ ಮುತ್ತಣ್ಣ ಶೆಟ್ಟಿ ಮತ್ತು ಕೂಟವು ಏಕಾಏಕಿ ಕೆಡವಿ ಹಾಕಿತ್ತು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿದ್ದ ನನ್ನ ಅಧಿಕಾರವಧಿ 20240 ಫೆ.29ರಂದು ಮುಗಿದಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದೆ. ಅಧಿಕಾರ ಹಸ್ತಾಂತರಿಸಿದ ಎರಡೇ ದಿನದಲ್ಲಿ

ಶೇ.80 ರಷ್ಟು ನಿರ್ಮಾಣಗೊಂಡಿದ್ದ ಭಂಡಾರ ಮನೆಯನ್ನು ಜೆಸಿಬಿ ಮೂಲಕ ಕೆಡವಿ ಹಾಕಲಾಗಿತ್ತು. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಮುತ್ತಣ್ಣ ಶೆಟ್ಟಿ ಮತ್ತು ಕೂಟದ ವಿರುದ್ಧ ಪ್ರಕರಣ ದಾಖಲುಗೊಂಡು ಆರೋಪಿಗಳ ಬಂಧನವೂ ನಡೆದಿತ್ತು. ಅಲ್ಲದೆ ಮಾ.4 ರಂದು ಕೋಟೆಕಾರು ಪ.ಪಂ ಮುಂಭಾಗದಲ್ಲಿ ಕೃತ್ಯವನ್ನ ಖಂಡಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು.

ಭಂಡಾರ ಮನೆ ಧ್ವಂಸ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ಮುತ್ತಣ್ಣ ಶೆಟ್ಟಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಾಗಿ ವಿಚಾರಣೆ ಹಂತದಲ್ಲಿರುವುದರಿಂದ ಆರೋಪಿಯು ಕೊಂಡಾಣ ಕ್ಷೇತ್ರದಲ್ಲಿ ಗುರಿಕಾರ ಸ್ಥಾನವನ್ನು ನಿರ್ವಹಿಸಬಾರದೆಂದು ಕಳೆದ 2025 ರ ಫೆ.27 ರಂದು ಅಪರ ಜಿಲ್ಲಾಧಿಕಾರಿ ಮತ್ತು ಧಾರ್ಮಿಕ ಪರಿಷತ್ ಇಲಾಖೆಯಿಂದ ಆದೇಶ ಬಂದಿದೆ. ನೂತನ ವ್ಯವಸ್ಥಾಪನಾ ಸಮಿತಿಗೂ ಕ್ಷೇತ್ರದಲ್ಲಿ ಕಾನೂನು ಉಲ್ಲಂಘಿಸದಂತೆ ಆದೇಶ ಜಾರಿ ಮಾಡಲಾಗಿದೆ. ಆದರೂ ಆರೋಪಿ ಮುತ್ತಣ್ಣ ಶೆಟ್ಟಿ ಇಲಾಖೆಯ ಆದೇಶವನ್ನೇ ಧಿಕ್ಕರಿಸಿ ಕಳೆದ ಮೇ 5ರಂದು ಕೋಟೆಕಾರಿನಲ್ಲಿ ನಡೆದಿದ್ದ ವೈದ್ಯನಾಥ ದೈವದ ವಲಸರಿ ಜಾತ್ರೆಯಲ್ಲಿ ಮುಂಡಾಸು ಕಟ್ಟಿ ಗುರಿಕಾರ ಸ್ಥಾನದಲ್ಲಿ ನಿಂತಿದ್ದರು.ನನ್ನ ಅಧ್ಯಕ್ಷತೆಯ ಮೂರು ವರ್ಷದ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ಪ್ರತಿ ದಿನವೂ ಕಾಣಿಕೆ ರೂಪದಲ್ಲಿ ಭಕ್ತರಿಂದ ಬಂದ 18,8,632 ರೂಪಾಯಿಗಳನ್ನ ಬ್ಯಾಂಕಿಗೆ ಜಮಾವಣೆ ಮಾಡಲಾಗಿದೆ. ಆದರೆ ಈ ಹಿಂದೆ ಮುತ್ತಣ್ಣ ಶೆಟ್ಟಿ ನೇತೃತ್ವದ ಸಮಿತಿಯು ಕ್ಷೇತ್ರಕ್ಕೆ ಬಂದಿದ್ದ ಆದಾಯವನ್ನು ಬ್ಯಾಂಕಿಗೆ ಪಾವತಿಸಿಲ್ಲ. ಯಾವುದೇ ಲೆಕ್ಕ ಪತ್ರವನ್ನೂ ಮಂಡಿಸಿಲ್ಲ. ಹತ್ತು ವರ್ಷಗಳ ಹಿಂದೆ ಖಾಸಗಿ ಫೈನಾನ್ಸ್ ನವರ ಕೈಯಲ್ಲಿ ರೂ.10 ಲಕ್ಷ ಹಣವನ್ನು ಮುತ್ತಣ್ಣ ಶೆಟ್ಟಿ ನೀಡಿದ್ದು, ತಿಂಗಳಿಗೆ 30,000 ರೂಪಾಯಿಗಳನ್ನ ಬಡ್ಡಿ ರೂಪದಲ್ಲಿ ಸ್ವೀಕರಿಸಿದ್ದಾಗಿ ಸ್ವತಃ ಫೈನಾನ್ಸ್ ನವರೇ ತನ್ನ ಬಳಿ ಹೇಳಿದ್ದಾರೆ. 1931ರಲ್ಲಿ ಮದ್ರಾಸ್ ಸರಕಾರದ ಅವಧಿಯಲ್ಲಿ ಕ್ಷೇತ್ರವು ಎಂಡೋಮೆಂಟ್ ಗೆ ಸೇರಿದೆ. 1950 ರಲ್ಲಿ ಅಂದಿನ ಅಧಿಕಾರಿಗಳು ಹೊರಡಿಸಿರುವ ಆದೇಶದ ಪ್ರತಿಯಲ್ಲಿ ಭಂಡಾರ ಮನೆ ಮತ್ತು ಭದ್ರತಾ ಕೊಠಡಿ ದೈವಸ್ಥಾನದ ಪಕ್ಕದಲ್ಲೇ ಆಗಬೇಕೆಂದು ಉಲ್ಲೇಖವಿದೆ. ९७ ಆದೇಶದ ಪ್ರಕಾರವೇ ಭಂಡಾರ ಮನೆಯನ್ನು ದೈವಸ್ಥಾನದ ಸಮೀಪದಲ್ಲೇ ನಿರ್ಮಿಸಲಾಗಿತ್ತು ಎಂದರು.

ಇದೇ ಮೇ 21ರಿಂದ 23ರ ವರೆಗೆ ಕೊಂಡಾಣ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡೇ ಬಂಡಿ ಉತ್ಸವ ಇದಾಗಿದ್ದು, ಉತ್ಸವದಲ್ಲಿ ಆರೋಪಿ ಮುತ್ತಣ್ಣ ಶೆಟ್ಟಿ ಗುರಿಕಾರ ಸ್ಥಾನದಲ್ಲಿ ನಿಲ್ಲಲು ಕಾನೂನಿನ ಪ್ರಕಾರ ಅವಕಾಶವಿಲ್ಲ. ಕೊಂಡಾಣ ಕ್ಷೇತ್ರದ ಹರಕೆಯ ಕುರಿತಂತೆಯೂ ಮುತ್ತಣ್ಣ ಶೆಟ್ಟಿ ಬಳಿಯಲ್ಲಿ ಯಾರೂ ಕೂಡ ವ್ಯವಹರಿಸಬಾರದು. ಮುತ್ತಣ್ಣ ಶೆಟ್ಟಿಗೂ ಕೊಂಡಾಣ ಕ್ಷೇತ್ರಕ್ಕೂ ಸಂಬಂಧವಿಲ್ಲವೆಂದು ಧಾರ್ಮಿಕ ಪರಿಷತ್ ನಿಂದಲೇ ಆದೇಶವಿದೆ ಎಂದು ಕೃಷ್ಣ ಶೆಟ್ಟಿ ಹೇಳಿದರು.ಸನಾತನ ಧರ್ಮ ಜಾಗರಣಾ ಸಮಿತಿಯ ಅಧ್ಯಕ್ಷರಾದ ರಮೇಶ್ ಕೊಲ್ಯ, ಪ್ರಮುಖರಾದ ಜಯಂತ್ ಸಂಕೋಳಿಗೆ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

[t4b-ticker]
error: Content is protected !!