ಲಂಡನ್ನಲ್ಲಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಲೇಖಕಿ ಭಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರು ಇಬ್ಬರು ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರು: ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಟಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಬಾನು ಅವರು ಬರೆದಿದ್ದ ಹಸೀನಾ ಮತ್ತು ಇತರ ಕತೆಗಳು ಕೃತಿಯನ್ನ ದೀಪಾ ಭಸ್ತಿ ಇಂಗ್ಲಿಷ್ಗೆ ಅನುವಾದ ಮಾಡಿದ್ದರು. ಈ ಕೃತಿ ಈಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರವಾಗಿದೆ.ಬೂಕರ್ ಪ್ರಶಸ್ತಿಗೆ ಬಾನು ಮುಷ್ತಾಕ್ ಅವರ ಇಂಗ್ಲಿಷ್ ಅನುವಾದಿತ ಕೃತಿ “ಹಾರ್ಟ್ ಲ್ಯಾಂಪ್” ಶಾರ್ಟ್ ಲಿಸ್ಟ್ಗೆ ಆಯ್ಕೆಯಾಗಿತ್ತು. ಬೂಕರ್ ಪ್ರಶಸ್ತಿಗಾಗಿ ಲಿಸ್ಟ್ ಆಗಿದ್ದ ಒಟ್ಟು 6 ಕೃತಿಗಳಲ್ಲಿ ಅಂತಿಮವಾಗಿ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಭಾಜನವಾಯಿತು.
ಲಂಡನ್ನಲ್ಲಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಲೇಖಕಿ ಭಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರು ಇಬ್ಬರು ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯಕ್ಕೆ ದೊರೆತ ಮೊದಲ ಬೂಕರ್ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಮನ್ನಣೆ ಸಿಕ್ಕಂತಾಗಿದೆ.ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಯು 50 ಸಾವಿರ ಪೌಂಡ್ ನಗದು ಬಹುಮಾನ ಒಳಗೊಂಡಿದೆ. ಈ ಹಣವನ್ನು ಬಾನು ಮುಷ್ತಾಕ್ ಮತ್ತು ಕೃತಿಯನ್ನು ಇಂಗ್ಲಿಷ್ಗೆ ಅನುವಾದಿಸಿದ ದೀಪಾ ಭಸ್ತಿ ಅವರಿಗೆ ಹಂಚಲಾಗಿದೆ. ಬೂಕರ್ ಪ್ರಶಸ್ತಿಗೆ ಪಾತ್ರವಾಗಿರುವ ಬಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕತೆಗಳು ಕಥಾಸಂಕಲನವು ಮುಸ್ಲಿಂ ಸಮುದಾಯದ ಬಾಲಕಿಯರ ಮತ್ತು ಇತರ ಹೆಣ್ಣುಮಕ್ಕಳ ದೈನಂದಿನ ಜೀವನ ಕುರಿತದ್ದಾಗಿದೆ.
ಲಂಡನ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಾನು ಮುಷ್ತಾಕ್:
ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಬರಹಕ್ಕಾಗಿ ಲಂಡನ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳವಾರ ರಾತ್ರಿ ಲೇಖಕಿ ಮತ್ತು ವಕೀಲೆ ಬಾನು ಮುಷ್ತಾಕ್, ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಯ ಗೆಲುವು ಎಂದು ಬಣ್ಣಿಸಿದರು.
ಯಾವುದೇ ಕಥೆ ಚಿಕ್ಕದಲ್ಲ:
ಯಾವುದೇ ಕಥೆ ಎಂದಿಗೂ ಚಿಕ್ಕದಲ್ಲ, ಮಾನವ ಅನುಭವದ ವಸ್ತ್ರದಲ್ಲಿ ಪ್ರತಿಯೊಂದು ದಾರವು ತನ್ನದೇ ಆದ ತೂಕ ಹೊಂದಿರುತ್ತದೆ ಎಂಬ ನಂಬಿಕೆಯಿಂದ ಹುಟ್ಟಿದೆ ಎಂದು ಮುಷ್ತಾಕ್ ಬಣ್ಣಿಸಿದ್ದಾರೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಜಗತ್ತಿನಲ್ಲಿ, ಸಾಹಿತ್ಯವು ಕಳೆದುಹೋದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲಿ ನಾವು ಪರಸ್ಪರರ ಮನಸ್ಸಿನಲ್ಲಿ ಕೆಲವು ಪುಟಗಳವರೆಗೆ ವಾಸಿಸಬಹುದು” ಎಂದು ಮುಷ್ತಾಕ್ ಬಣ್ಣಿಸಿದ್ದಾರೆ.
ಅನುವಾದಕಿ ದೀಪಾ ಭಸ್ತಿ ಮಾತನಾಡಿ, “ನನ್ನ ಸುಂದರ ಭಾಷೆಗೆ ಇದು ಎಂತಹ ಸುಂದರವಾದ ಗೆಲುವು ಎನ್ನುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ತೀರ್ಪುಗಾರರ ಮನಗೆದ್ದ ಕೃತಿ:
ಕುಟುಂಬ ಮತ್ತು ಸಮುದಾಯದ ಉದ್ವಿಗ್ನತೆಗಳ ಭಾವಚಿತ್ರಗಳನ್ನು ಸೆರೆಹಿಡಿಯುವ ಹಾಗೂ ಆಡುಮಾತಿನ, ಹೃದಯಸ್ಪರ್ಶಿ ಮತ್ತು ರೋಮಾಂಚಕ ಶೈಲಿಗಾಗಿ ತೀರ್ಪುಗಾರರ ಮನಗೆಲ್ಲುವಲ್ಲಿ ಮುಷ್ತಾಕ್ ಅವರ ಕೃತಿ ಯಶಸ್ವಿಯಾಗಿದೆ.
ತೀರ್ಪುಗಾರರ ಅಧ್ಯಕ್ಷರು ಹೇಳಿದ್ದಿಷ್ಟು:
2025ರ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ತೀರ್ಪುಗಾರರ ಅಧ್ಯಕ್ಷರಾದ ಮ್ಯಾಕ್ಸ್ ಪೋರ್ಟರ್ ಮಾತನಾಡಿ, “ಈ ಪಟ್ಟಿಯು ಮಾನವೀಯತೆಯ ಬಗ್ಗೆ ಒತ್ತುವ ಮತ್ತು ಆಶ್ಚರ್ಯಕರ ಸಂಭಾಷಣೆಗಳಿಗೆ ಒಂದು ವಾಹಕವಾದ ಕಾದಂಬರಿಗಳ ಆಚರಣೆಯಾಗಿದೆ ಎಂದು ಬಣ್ಣಿಸಿದ್ದಾರೆ.ಪ್ರತಿ ಶಾರ್ಟ್ಲಿಸ್ಟ್ ಮಾಡಿದ ಇತರ ಶೀರ್ಷಿಕೆಗಳಿಗೆ 5,000 ಪೌಂಡ್ ಬಹುಮಾನ ನೀಡಲಾಗುತ್ತದೆ. ಈ ಮೊತ್ತವನ್ನು ಲೇಖಕ ಮತ್ತು ಅನುವಾದಕರು ಹಂಚಿಕೊಳ್ಳುತ್ತಾರೆ ಮತ್ತು ವಿಜೇತ ಕೃತಿಗೆ ಸಿಕ್ಕ ಬಹುಮಾನದ ಹಣವನ್ನು ಮುಷ್ತಾಕ್ ಮತ್ತು ಭಸ್ತಿ ನಡುವೆ ಹಂಚಲಾಗುತ್ತದೆ. ಅವರು ತಲಾ 25,000 ಪೌಂಡ್ ಪಡೆಯುತ್ತಾರೆ.
2022 ರಲ್ಲಿ, ಗೀತಾಂಜಲಿ ಶ್ರೀ ಮತ್ತು ಅನುವಾದಕ ಡೈಸಿ ರಾಕ್ವೆಲ್ ಮೊದಲ ಹಿಂದಿ ಕಾದಂಬರಿ ‘ಟೂಂಬ್ ಆಫ್ ಸ್ಯಾಂಡ್’ ಗಾಗಿ ಅಸ್ಕರ್ ಪ್ರಶಸ್ತಿಯನ್ನು ಗೆದ್ದರು, ಜೊತೆಗೆ ಪೆರುಮಾಳ್ ಮುರುಗನ್ ಅವರ ತಮಿಳು ಕಾದಂಬರಿ ‘ಪೈರ್’ ಅನ್ನು ಅನಿರುದ್ಧನ್ ವಾಸುದೇವನ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ, 2023 ರಲ್ಲಿ ದೀರ್ಘ ಪಟ್ಟಿಗೆ ಸೇರಿಸಲಾಯಿತು.
ಬಾನು ಮುಷ್ತಾಕ್ ಪರಿಚಯ :
ಕರ್ನಾಟಕದ ಬಾನು ಮುಷ್ತಾಕ್ ಲೇಖಕಿ, ಹೋರಾಟಗಾರ್ತಿ, ವಕೀಲರಾಗಿಯೂ ಗುರುತಿಸಿಕೊಂಡಿದ್ದಾರೆ. 1970-80ರಲ್ಲಿ ಮುಷ್ತಾಕ್ ಪ್ರಗತಿಪರ ಪ್ರತಿಭಟನೆಯ ಸಾಹಿತ್ಯದ ಬರವಣಿಗೆಯನ್ನು ಅಳವಡಿಸಿಕೊಂಡವರು. ಜಾತಿ ಮತ್ತು ವರ್ಗ ವ್ಯವಸ್ಥೆಯ ಟೀಕೆ, ಬಂಡಾಯ ಸಾಹಿತ್ಯದ ಚಳವಳಿಯು ದಲಿತ ಮತ್ತು ಮುಸ್ಲಿಂ ಬರಹಗಾರರನ್ನು ಹುಟ್ಟುಹಾಕಿತು. ಮುಷ್ತಾಕ್ ಇಲ್ಲಿಯವರೆಗೆ ಆರು ಸಣ್ಣ ಕಥಾ ಸಂಕಲನಗಳು, ಒಂದು ಕಾದಂಬರಿ, ಒಂದು ಪ್ರಬಂಧ ಸಂಗ್ರಹ ಮತ್ತು ಒಂದು ಕವನ ಸಂಕಲನ ಬರೆದಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳು ಸೇರಿದಂತೆ ಅವರ ಸಾಹಿತ್ಯ ಕೃತಿಗಳಿಗಾಗಿ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಅನೇಕ ಕಥೆಗಳು ಉರ್ದು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದಿಸಲ್ಪಟ್ಟಿದ್ದು, ಇಂಗ್ಲಿಷ್ಗೆ ಮೊದಲ ಪುಸ್ತಕ ಅನುವಾದ ‘ಹಾರ್ಟ್ ಲ್ಯಾಂಪ್’ 2025 ರಲ್ಲಿ ಪ್ರಕಟವಾಗಿದ್ದು, ಇದು ಪ್ಯಾರಿಸ್ ವಿಮರ್ಶೆಯಲ್ಲಿ ಪ್ರಕಟವಾಗಿದೆ.ಮುಷ್ತಾಕ್ ಸಾಹಿತ್ಯವನ್ನು ಮೀರಿ, ಅವರು ಪತ್ರಕರ್ತೆಯಾಗಿ ಒಂಬತ್ತು ವರ್ಷಗಳನ್ನು ಕಳೆದಿದ್ದಾರೆ ಮತ್ತು ಹಾಸನ ನಗರ ಪುರಸಭೆಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಅವರ “ಕರಿ ನಾಗರಗಳು” ಕೃತಿಯು ಚಲನಚಿತ್ರ ನಿರ್ಮಾಪಕ ಗಿರೀಶ್ ಕಾಸರವಳ್ಳಿ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ “ಹಸೀನಾ” (2004)ಗೆ ಸ್ಫೂರ್ತಿಯಾಗಿದೆ.
2022ರಲ್ಲಿ ಗೀತಾಂಜಲಿಗೆ ಒಲಿದಿದ್ದ ಬೂಕರ್ ಗರಿ:
2022ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ಯು ಲೇಖಕಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ ಲಭಿಸಿತ್ತು. ಈ ಕೃತಿಯನ್ನು ಅಮೆರಿಕದ ಡೇಸಿ ರಾಕ್ವೆಲ್ ಇಂಗ್ಲಿಷ್ಗೆ ಅನುವಾದಿಸಿದ್ದರು.50 ಸಾವಿರ ಪೌಂಡ್ ಮೌಲ್ಯದ ಸಾಹಿತ್ಯ ಪ್ರಶಸ್ತಿಗೆ ಜಗತ್ತಿನ ನಾನಾ ಭಾಗಗಳಿಂದ ಅನೇಕ ಮಹತ್ವದ ಪುಸ್ತಕಗಳು ಸ್ಪರ್ಧೆಯಲ್ಲಿದ್ದವು. ಆದರೆ ಅಂತಿಮವಾಗಿ, ಗೀತಾಂಜಲಿ ಶ್ರೀ ಅವರ ಈ ಕೃತಿಗೆ ಪ್ರಶಸ್ತಿ ಲಭಿಸಿದೆ. ಇದು ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದಿ ಭಾಷೆಯ ಕಾದಂಬರಿಯಾಗಿತ್ತು.












































