ಸರಕಾರಿ ಸಭೆ, ಸಮಾರಂಭದಲ್ಲಿ ಸಿರಿಧಾನ್ಯ ತಿಂಡಿ ಬಳಕೆಗೆ ರಾಜ್ಯ ಸರಕಾರ ಆದೇಶ

Picture of Savistara

Savistara

Bureau Report

ಸರಕಾರದಿಂದ ಸಿರಿಧಾನ್ಯ ತಿಂಡಿಗಳ ಪಟ್ಟಿಯೂ ಸಿದ್ಧ, ಸಾವಯವ, ಸಿರಿಧಾನ್ಯಗಳಿಗೆ ಬೇಡಿಕೆ ಸೃಷ್ಟಿಗೆ ಕ್ರಮ

ಬೆಂಗಳೂರು: ಸರಕಾರಿ ಸಭೆ, ಸಮಾರಂಭಗಳಲ್ಲಿಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ-ತಿನಿಸು ಮತ್ತು ಪಾನೀಯಗಳನ್ನು ಬಳಸುವಂತೆ ರಾಜ್ಯ ಸರಕಾರ ಆದೇಶಿಸಿದ್ದು, ಬಳಸಬಹುದಾದ ತಿಂಡಿ-ತಿನಿಸುಗಳ ಪಟ್ಟಿಯನ್ನೂ ಸಲಹೆ ರೂಪದಲ್ಲಿ ನೀಡಿದೆ.ಸಾವಯವ ಮತ್ತು ಸಿರಿಧಾನ್ಯಗಳಿಗೆ ದೇಶಿ ಮತ್ತು ಜಾಗತಿಕ ಬೇಡಿಕೆ ಸೃಷ್ಟಿಸಲು ಹಾಗೂ ಜನರಿಗೆ ಪೌಷ್ಟಿಕಾಂಶದ ಆಹಾರದ ಬಗ್ಗೆ ಅರಿವು ಮೂಡಿಸಲು ಸರಕಾರದ ಎಲ್ಲ ಇಲಾಖೆಗಳೂ ತಮ್ಮ ಅಧೀನ ಕಚೇರಿಗಳು, ನಿಗಮ, ಮಂಡಳಿಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ-ತಿನಿಸು, ಪಾನೀಯಗಳನ್ನು ಬಳಸುವಂತೆ ಆದೇಶಿಸಿದೆ.

ಈಗಾಗಲೇ ಸಾವಯವ ಕೃಷಿ ನೀತಿ ಅನುಷ್ಠಾನದಲ್ಲಿದ್ದು, ಸಾಂಪ್ರದಾಯಿಕ ಮತ್ತು ಸಾವಯವ ಸಿರಿಧಾನ್ಯಗಳನ್ನು ಪ್ರಜ್ಞಾವಂತರ ಆಹಾರವನ್ನಾಗಿ ರಾಜ್ಯ ಸರಕಾರ ಉತ್ತೇಜಿಸುತ್ತಿದೆ. ಇದರ ಭಾಗವಾಗಿ ರೈತ ಸಿರಿ ಯೋಜನೆಯಡಿ ಬೆಳೆ ಸಮೀಕ್ಷೆ ಆಧರಿಸಿ ಸಿರಿಧಾನ್ಯ ಬೆಳೆದ ರೈತರಿಗೆ ಪ್ರತೀ ಹೆಕ್ಟೇರ್‌ಗೆ 10 ಸಾವಿರ ರೂ. ಗಳಂತೆ ಗರಿಷ್ಠ 2 ಹೆಕ್ಟೇ‌ರ್ ವರೆಗೆ ಪ್ರೋತ್ಸಾಹ ಧನವನ್ನೂ ನೀಡುತ್ತಿದೆ.ಜತೆಗೆ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್‌, ಬ್ರಾಂಡಿಂಗ್ ಯಂತ್ರೋಪಕರಣಗಳಿಗೂ ಸಹಾಯಧನ ನೀಡುತ್ತಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ಸಾವಯವ ಮತ್ತು ಸಿರಿಧಾನ್ಯ ಹಬ್ ಕೂಡ ಸ್ಥಾಪಿಸುತ್ತಿದ್ದು, ಇದೀಗ ಸರಕಾರಿ ಸಭೆ, ಸಮಾರಂಭಗಳಲ್ಲೂ ಸಾವಯವ, ಸಿರಿಧಾನ್ಯ ಆಧಾರಿತ ತಿಂಡಿ-ತಿನಿಸುಗಳನ್ನು ಬಳಸುವಂತೆ ನಿರ್ದೇಶಿಸಿದೆ.

ಸಭೆಗಳಲ್ಲಿ ಬಳಸಬಹುದಾದ ಸಿರಿಧಾನ್ಯ ಆಧಾರಿತ ತಿಂಡಿ-ತಿನಿಸು

ಮಸಾಲಾ ಕುರುಕಲು ತಿಂಡಿ, ಸಿರಿಧಾನ್ಯಗಳ ಕುಕೀಸ್, ಸಿರಿಧಾನ್ಯಗಳ ಕ್ರಂಚ್ ಬಾರ್, ಸಿರಿಧಾನ್ಯಗಳ ಸಿಹಿ ತಿನಿಸು, ರಾಗಿ-ಬೆಲ್ಲದ ಬಿಸ್ಕತ್ತು, ಸಿರಿಧಾನ್ಯಗಳ ಪಫ್, ಕುರುಕಲು ಮಿಕ್ಸ‌ರ್, ಸಿರಿಧಾನ್ಯಗಳ ಮೊಳಕೆ ಬಳಸಿದ ಬಿಸ್ಕತ್ತು, ಬೂಂದಿ, ಜೋಳದ ಪಾಪ್ಸ್, ಎನರ್ಜಿ ಬಾರ್, ರಿಬ್ಬನ್ ಪಕೋಡ, ಕೋಡುಬಳೆ ಹಾಗೂ ಮುರುಕು.

[t4b-ticker]
error: Content is protected !!