ಹಿಂದೂಗಳಲ್ಲದ ಆರೋಪ: ನಿಯಮ ಮೀರಿದ ನಾಲ್ವರು ಸಿಬ್ಬಂದಿ ಅಮಾನತು ಮಾಡಿದ ಟಿಟಿಡಿ

Picture of Savistara

Savistara

Bureau Report

ಟಿಟಿಡಿ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಹಿಂದುಯೇತರ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ತಿರುಪತಿ (ಆಂಧ್ರಪ್ರದೇಶ): ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯ ಆಚರಣೆ ಮಾಡುವವರು ಮಾತ್ರ ಉದ್ಯೋಗಿಗಳಾಗಿರಬೇಕು ಎಂಬ ಕಡ್ಡಾಯ ನಿಯಮವಿದೆ. ಈ ಕಟ್ಟಳೆಯನ್ನು ಮೀರಿದ ಆರೋಪದ ಮೇಲೆ ನಾಲ್ವರು ಸಿಬ್ಬಂದಿಯನ್ನು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (ಟಿಟಿಡಿ) ಅಮಾನತು ಮಾಡಿದೆ.ಅಮಾನತಾದ ಸಿಬ್ಬಂದಿ ಬೇರೆ ಧರ್ಮವನ್ನು ಪಾಲನೆ ಮಾಡುತ್ತಿರುವ ಬಗ್ಗೆ ಟಿಟಿಡಿಗೆ ಪುರಾವೆ ಸಿಕ್ಕ ಬಳಿಕ ಅವರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿದೆ ಎಂದು ದೇವಸ್ಥಾನ ಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.ಟಿಟಿಡಿಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್ (ಗುಣಮಟ್ಟ ನಿಯಂತ್ರಣ) ಆಗಿದ್ದ ಬಿ.ಎಲಿಜರ್, ಬಿಐಆರ್‌ಆರ್‌ಡಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿದ್ದ ಎಸ್​. ರೋಸಿ, ಬಿಐಆರ್‌ಆರ್‌ಡಿ ಆಸ್ಪತ್ರೆಯ ಗ್ರೇಡ್-1 ಫಾರ್ಮಸಿಸ್ಟ್ ಪ್ರೇಮಾವತಿ, ಎಸ್‌ವಿ ಆಯುರ್ವೇದ ಫಾರ್ಮಸಿಯಾಗಿದ್ದ ಜಿ.ಅಸುಂತ ಅಮಾನತಾದ ಸಿಬ್ಬಂದಿಗಳಾಗಿದ್ದಾರೆ.

ಟಿಟಿಡಿ ನೀಡಿದ ಸ್ಪಷ್ಟನೆ ಹೀಗಿದೆ: ಅಮಾನತಾದ ನಾಲ್ವರು ಸಿಬ್ಬಂದಿ ಹಿಂದುಯೇತರ ಸಂಪ್ರದಾಯವನ್ನು ಆಚರಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತಪಾಸಣೆ ನಡೆಸಿದಾಗ, ಅವರ ವಿರುದ್ಧ ಹಲವು ಪುರಾವೆಗಳು ಸಿಕ್ಕಿವೆ. ಉದ್ಯೋಗಿಗಳು ಮಂಡಳಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹಿಂದೂ ಧಾರ್ಮಿಕ ಸಂಘಟನೆಯನ್ನು ಪ್ರತಿನಿಧಿಸುವ ಸ್ಥಳದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುವಾಗ ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಟಿಟಿಡಿ ಆರೋಪಿಸಿದೆ.ದೇವಸ್ಥಾನ ಮಂಡಳಿಯ ಜಾಗೃತ ಇಲಾಖೆಯು ಸಲ್ಲಿಸಿದ ವರದಿ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಿದ ನಂತರ, ನಿಯಮಗಳ ಪ್ರಕಾರ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಯಿತು. ನಾಲ್ವರು ಉದ್ಯೋಗಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಂದೂಯೇತರಿಗೆ ಕೆಲಸ ಬಿಡುವಂತೆ ಸೂಚಿಸಿದ್ದ ಟಿಟಿಡಿ: ಹಿಂದುಗಳ ಆರಾಧ್ಯ ದೈವ ತಿಮ್ಮಪ್ಪನ ಲಡ್ಡು ಪ್ರಸಾದ ಕಲಬೆರಕೆಯಾದ ಆರೋಪ ದೇಶದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಮತ್ತು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಮಂಡಳಿಯು ದೇವಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಿಂದುಗಳಾಗಿರಬೇಕು ಎಂಬ ಕಡ್ಡಾಯ ನಿಯಮವನ್ನು ಜಾರಿ ಮಾಡಿತು. ಹಿಂದುಯೇತರರು ಬೇರೆಡೆಗೆ ವರ್ಗವಾಗಬೇಕು ಅಥವಾ ಸ್ವಯಂ ನಿವೃತ್ತಿ ಪಡೆಯಲು ಸೂಚಿಸಿತ್ತು.ಹಿಂದೂಯೇತರರಿಗೆ ನಿವೃತ್ತಿ ಯೋಜನೆ: ದೇವಸ್ಥಾನದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸಕ್ಕೆ ನೇಮಿತವಾಗಿರುವ ಹಿಂದೂಯೇತರ ಸಿಬ್ಬಂದಿ ಕೈಬಿಟ್ಟು, ಹಿಂದುಗಳನ್ನು ಮಾತ್ರ ನೇಮಿಸಬೇಕು ಎಂಬ ಬೇಡಿಕೆಗೆ ಟಿಟಿಡಿ ಸ್ಪಂದಿಸಿತ್ತು. ಹಿಂದೂಯೇತರ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್​ಎಸ್​) ಜಾರಿ ಮಾಡಲಾಗಿತ್ತು.

[t4b-ticker]
error: Content is protected !!