ಕೇಂದ್ರ ಸರ್ಕಾರವು ದೇಶದ ಅನ್ನದಾತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
ಡಿಬಿಟಿ ಮೂಲಕ ನೇರ ನಗದು ಜಮೆ
ಈ ಯೋಜನೆಯಡಿ ದೇಶದ ಒಟ್ಟು 9.44 ಕೋಟಿಗೂ ಹೆಚ್ಚು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ತಲಾ ₹2,000 ಜಮೆಯಾಗಲಿದೆ. ಒಟ್ಟಾರೆಯಾಗಿ ₹18,880 ಕೋಟಿಗೂ ಅಧಿಕ ಮೊತ್ತವನ್ನು ಏಕಕಾಲದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆ.
ಹೂಗ್ಲಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ
ಶನಿವಾರ ಮಧ್ಯಾಹ್ನ 3:45 ಕ್ಕೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಅವರು ಕಿಸಾನ್ ನಿಧಿ ಬಿಡುಗಡೆ ಮಾಡುವುದರ ಜೊತೆಗೆ, ಹಲವು ರೈಲ್ವೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.
ಪಶ್ಚಿಮ ಬಂಗಾಳದ ರೈತರಿಗೆ ದೊಡ್ಡ ಲಾಭ
ಈ ಕಂತಿನಿಂದ ಪಶ್ಚಿಮ ಬಂಗಾಳದ ಸುಮಾರು 50 ಲಕ್ಷ ರೈತರು ಫಲಾನುಭವಿಗಳಾಗಲಿದ್ದಾರೆ. ರಾಜ್ಯದ 45.35 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಸರಿಸುಮಾರು ₹907 ಕೋಟಿ ತಲುಪಲಿದೆ. ಇಂದಿನ ಕಾರ್ಯಕ್ರಮಗಳ ನಂತರ ಪ್ರಧಾನಮಂತ್ರಿಯವರು ಬಂಗಾಳದ ಲೋಕಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.











































