ಕುಂದಾಪುರ: ಬೆಂಗಳೂರಿನ ಪದ್ಮಶ್ರೀ ಆರ್ಎಂಬಿ ಆರಾಧ್ಯ ಟ್ರಸ್ಟ್ ಸೇವಾ ರೂಪದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ನೀಡಲಾದ ನೂತನ ಬೆಳ್ಳಿ ರಥ ಸಮರ್ಪಣೆ ಹಾಗೂ ರಥೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.
ಬೆಳಿಗ್ಗೆಯಿಂದಲೇ ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ರಥ ಶುದ್ದಿ, ಬಲಿ ಸೇರಿದಂತೆ ರಥೋತ್ಸವ ಹಾಗೂ ಸಮರ್ಪಣಾ ಕಾರ್ಯಕ್ರಮಕ್ಕೆ ಪೂರಕವಾಗಿ ಅನೇಕ ಧಾರ್ಮಿಕ ಪೂಜಾ ವಿಧಿಗಳನ್ನು ನಡೆಸಲಾಗಿತ್ತು. 11 ಗಂಟೆಯ ಸುಮಾರಿಗೆ ಬಲಿ ವಿಧಿಗಳನ್ನು ನಡೆಸಿ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಉತ್ಸವಗಳನ್ನು ವಿದ್ಯುಕ್ತವಾಗಿ ನಡೆಸಿದ ಬಳಿಕ ಮೂರ್ತಿಧಾರಕ ಶ್ರೀಶಾ ಭಟ್ ಅವರು ಶ್ರೀ ದೇವಿಯನ್ನು ನೂತನ ರಥದಲ್ಲಿ ಕುಳ್ಳಿರಿಸಿದ್ದರು. ಅಲಂಕಾರ, ಹಣ್ಣು ಕಾಯಿ ಹಾಗೂ ಮಂಗಳಾರತಿ ಸೇವೆ ನಡೆದ ಬಳಿಕ, ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದ ಬಳಿಕ ವೈಭವದಿಂದ ರಥೋತ್ಸವ ನಡೆಯಿತು.ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಭಕ್ತರೊಂದಿಗೆ ಸೇವಾಕರ್ತ ಕುಟುಂಬದವರು ಜೊತೆಯಾಗಿ ಜಯಘೋಷವನ್ನು ಹಾಕುತ್ತಾ. ದೇವಸ್ಥಾನದ ಒಳ ಆವರಣದಲ್ಲಿ ರಥವನ್ನು ಎಳೆದು ಸಂಭ್ರಮಿಸಿದರು.
ಆಕರ್ಷಕ ಬೆಳ್ಳಿ ರಥ:
ಬೆಂಗಳೂರಿನ ಪದ್ಮಶ್ರೀ ಆರ್ಎಂಬಿ ಆರಾಧ್ಯ ಟ್ರಸ್ಟ್ನವರು ಸೇವಾ ರೂಪದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೀಡಲಾದ ನೂತನ ಬೆಳ್ಳಿ ರಥಕ್ಕೆ 106 ಕೆಜಿ ಬೆಳ್ಳಿ ಬಳಸಲಾಗಿದೆ. ಅಂದಾಜು ₹3 ಕೋಟಿ ವೆಚ್ಚವಾಗಿದೆ. ತಾಲ್ಲೂಕಿನ ಗೋಪಾಡಿಯ ಪ್ರಭಾಕರ ಆಚಾರ್ ಹಾಗೂ ಸಹೋದರರು ರಥ ನಿರ್ಮಾಣದ ಕೆಲಸವನ್ನು ನಿರ್ವಹಿಸಿದ್ದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿಮುತ್ತುರಾಜ್ ತುಂಬಿಗೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ರಾಜೇಶ್ ಕಾರಂತ, ಆಲೂರು ರಘುರಾಮ ದೇವಾಡಿಗ, ಧನಾಕ್ಷೀ ವಿಶ್ವನಾಥ ಪೂಜಾರಿ, ಮಹಾಲಿಂಗ ನಾಯ್ಕ, ಸುಧಾ ಬೈಂದೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್, ಅರ್ಚಕ ಸುರೇಶ್ ಭಟ್, ಕೊಲ್ಲೂರು ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಇದ್ದರು.ಬೆಳ್ಳಿ ರಥ ಸಮರ್ಪಣೆ ಮಾಡಿದ ದಾನಿಗಳನ್ನು ಹಾಗೂ ರಥ ನಿರ್ಮಾಣ ಮಾಡಿದ ಶಿಲ್ಪಿಗಳನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.











































