ಸಿಗಂದೂರು ಲಾಂಚ್ ಕುಂದಾಪುರ-ಗಂಗೊಳ್ಳಿ ಒಂದಾಗಿಸಲು ಬರಲಿ

Picture of Savistara

Savistara

Bureau Report

ಕುಂದಾಪುರ: ಸಿಗಂದೂರಿನ ಅಂಬಾರ ಕೊಡ್ಲು- ಕಳಸವಳ್ಳಿಯನ್ನು ಬೆಸೆಯುತ್ತಿದ್ದ ಲಾಂಚ್ (ಬಾರ್ಜ್‌)ಗಳು ಇನ್ನು ಗಂಗೊಳ್ಳಿ- ಕೋಡಿ-ಕುಂದಾಪುರವನ್ನು ಒಂದಾಗಿಸಲು ಬರಲಿ ಎಂಬ ಬೇಡಿಕೆ ವ್ಯಕ್ತವಾಗುತ್ತಿದೆ.

ಆರು ದಶಕಗಳಿಂದ ಕನಸಾಗಿದ್ದ ಸಿಗಂದೂರು ಸೇತುವೆ ಉದ್ಘಾಟನೆಯಾಗುತ್ತಿದ್ದಂತೆ ಅಲ್ಲಿನ ಜನ, ಜಾನುವಾರು, ವಾಹನಗಳನ್ನು ನದಿ ದಾಟಿಸುತ್ತಿದ್ದ ಲಾಂಚ್ (ಬಾರ್ಜ್) ವ್ಯವಸ್ಥೆ ಸ್ಥಗಿತಗೊಂಡಿದೆ. ಆ ವ್ಯವಸ್ಥೆಯನ್ನು ಗಂಗೊಳ್ಳಿ- ಕೋಡಿ ಮಧ್ಯೆ ಸಂಪರ್ಕಕ್ಕೆ ಬಳಸಿಕೊಂಡಾಗ ಕುಂದಾಪುರದ ಸಮಗ್ರ ಅಭಿವೃದ್ಧಿಯೂ ಸಾಧ್ಯವಿದೆ ಎಂಬುದು ಇಲ್ಲಿನವರ ಆಶಯವಾಗಿದೆ.ಗಂಗೊಳ್ಳಿ -ಕುಂದಾಪುರ ನಡುವೆ ಹರಿಯುತ್ತಿರುವ ಪಂಚಗಂಗಾವಳಿ ನದಿಯ ಅಂತರ ಒಂದು ಕಿ.ಮೀ. ಇದೆ. ಬಸ್ ಮೂಲಕ ಗಂಗೊಳ್ಳಿಯಿಂದ ಕುಂದಾಪುರ ಸಂಪರ್ಕಿಸಲು 16 ಕಿ.ಮೀ ಇದೆ. ಈ ದೂರ ಕ್ರಮಿಸಲು ವಾಹನಗಳಿಗೆ ಸುಮಾರು 45 ನಿಮಿಷ ಬೇಕಾಗುತ್ತದೆ. ದೋಣಿಯಲ್ಲಿ ಸಾಗಿದರೆ 20 ನಿಮಿಷ ಸಾಕಾಗುತ್ತದೆ. ಗಂಗೊಳ್ಳಿಯಿಂದ ಕೋಡಿ ಹಾಗೂ ಕುಂದಾಪುರಕ್ಕೆ ಪ್ರತಿದಿನ ಸಾವಿರಾರು ಮಂದಿ ಬೇರೆ ಬೇರೆ ಕಾರಣಕ್ಕೆ ಪ್ರಯಾಣ ಬೆಳೆಸುತ್ತಾರೆ. ಕೆಲವರು ದೋಣಿಗಳನ್ನು ಅವಲಂಬಿಸಿದರೆ, ಉಳಿದವರು ಬಸ್, ಖಾಸಗಿ ವಾಹನಗಳಲ್ಲಿ ಪಯಣಿಸುತ್ತಾರೆ.ಕುಂದಾಪುರ- ಗಂಗೊಳ್ಳಿ ನಡುವೆ ಸೇತುವೆ ನಿರ್ಮಾಣದ ಕುರಿತು ಸುಮಾರು ಮೂರು ದಶಕಗಳಿಂದ ಪ್ರಸ್ತಾಪವಾಗುತ್ತಿದ್ದರೂ, ಶಂಕುಸ್ಥಾಪನೆಗೆ ಕಾಲ ಕೂಡಿ ಬಂದಿಲ್ಲ. ಚುನಾವಣೆ ಬಂದಾಗ, ಸರ್ಕಾರಗಳು ಬದಲಾದಾಗ, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದಾಗ ಸೇತುವೆ ಬಗ್ಗೆ ಹೇಳಿಕೆಗಳು ಸುದ್ದಿಯಾಗಿ ಬಳಿಕ ಅದನ್ನು ಜನರೂ ಮರೆಯುತ್ತಾರೆ.

ಕಳೆದ 4-5 ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪ್ರಣಾಳಿಕೆಯಲ್ಲಿ ಗಂಗೊಳ್ಳಿ- ಕುಂದಾಪುರ ಸೇತುವೆ ನಿರ್ಮಾಣ ವಿಚಾರ ಸಾಮಾನ್ಯವಾಗಿದೆ. ಭರವಸೆ, ಘೋಷಣೆ, ವಾಗ್ದಾನ ಹೇಳಿಕೆಗಳಿಗೆ ಸಿಮೀತವಾಗಿರುವುದರಿಂದಾಗಿ ಇಲ್ಲಿನ ಜನ ಸೇತುವೆ ತುರ್ತಾಗಿ ಆಗಬೇಕು ಎನ್ನುವ ಒತ್ತಾಸೆಯಿಂದ ವಿಮುಖರಾಗುತ್ತಿದ್ದಾರೆ.ಈ ಸಂದರ್ಭದಲ್ಲಿ ಅವರಿಗೆ ‘ಸಿಗಂದೂರಿನ ಲಾಂಚ್’ ಆಶಾಭಾವವಾಗಿ ಕಾಣಿಸಿಕೊಂಡಿದೆ. ಪ್ರಸ್ತಾವಿತ ಸೇತುವೆ ನಿರ್ಮಾಣವಾಗುವವರೆಗೂ ಗಂಗೊಳ್ಳಿ -ಕುಂದಾಪುರ-ಕೋಡಿ ಪ್ರಯಾಣಕ್ಕೆ ಸಿಗಂದೂರಿನ ಲಾಂಚ್ ಬಳಕೆ ಮಾಡಿಕೊಳ್ಳುವ ಕುರಿತು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಗಂಭೀರ ಚಿಂತನೆ ನಡೆಸಲಿ. ಈ ಸಂಬಂಧ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಇಚ್ಛಾಶಕ್ತಿ ತೋರಬೇಕು ಎನ್ನುವುದು ಇಲ್ಲಿನವರ ಆಗ್ರಹ.

ಈ ಮಾರ್ಗದಲ್ಲಿ ಕೇವಲ 10-15 ನಿಮಿಷದಲ್ಲಿ ಕುಂದಾಪುರ ಸಂಪರ್ಕಿಸಲು ಸಾಧ್ಯವಾಗುವ ಲಾಂಚ್ (ಬಾರ್ಜ್) ಬಳಕೆಯಿಂದ ಜನರಿಗೆ ಅನುಕೂಲವಾಗುವ ಜೊತೆಗೆ ಸರ್ಕಾರಕ್ಕೂ ಆದಾಯ ಬರುತ್ತದೆ. ಈ ಬಗ್ಗೆ ಸರ್ಕಾರ ಸ್ಥಳೀಯರ ಹಕ್ಕೊತ್ತಾಯವನ್ನು ಪರಿಗಣಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ.

ಸಂಪರ್ಕದ ಉಪಯೋಗ

  • ತುರ್ತು, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ಶೀಘ್ರವಾಗಿ ತಲುಪಲು ಅನುಕೂಲ
  • ಗಂಗೊಳ್ಳಿಯ ತಾಜಾ ಮೀನು ತ್ವರಿತವಾಗಿ ಕುಂದಾಪುರ, ಉಡುಪಿ ಜಿಲ್ಲೆಯ ಜನರನ್ನು ತಲುಪಲು ನೆರವು
  • ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಡಲ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ
  • ಅನಗತ್ಯ ಇಂಧನ ವೆಚ್ಚ, ಸಮಯ ಉಳಿತಾಯ
  • ಕುಂದಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ರಿಂಗ್ ರೋಡ್ ಮೂಲಕ ಸಂಪರ್ಕ ಸಲೀಸು
  • ಸರಕು ಸಾಗಾಣಿಕೆ ವೆಚ್ಚ ಇಳಿಕೆಯಾಗಿ ಉದ್ದಿಮೆಯ ಬೆಳವಣಿಗೆ
  • ಕುಂದಾಪುರದ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಿಗೆ
  • ಮಾರುಕಟ್ಟೆಯಲ್ಲಿ ಖರೀದಿಗೂ ಅನುಕೂಲ
[t4b-ticker]
error: Content is protected !!