ಉಡುಪಿ, ಸೆ. 20: ರಾಜ್ಯ ಸರಕಾರ ಸೆ.22ರಿಂದ ಅ.7ರ ವರೆಗೆ ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಬಿಲ್ಲವ ಸಮುದಾಯದವರು ಎಲ್ಲಿಯೂ ಕೂಡ ಉಪಜಾತಿ ನಮೂದಿಸಬಾರದು ಎಂದು ಬಿಲ್ಲವ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ವಿವಿಧ ಬಿಲ್ಲವ ಸಂಘಗಳ ತೀರ್ಮಾನದಂತೆ ಈ ನಿರ್ಧಾರಕ್ಕೆ ಬರಲಾಗಿದೆ. ಉಪನಾಮಗಳನ್ನು ಬಳಸುವುದು ಬೇಡ. ಕೇವಲ ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿಯ ಕಾಲಂನಲ್ಲಿ ಬಿಲ್ಲವ ಎಂದು ನಮೂದಿಸಬೇಕು. ಉಪಜಾತಿ ಕಾಲಂನಲ್ಲಿ ಏನೂ ಬರೆಯುವುದು ಬೇಡ. ಜಾತಿಯಪರ್ಯಾಯ ಹೆಸರುಗಳನ್ನು ಕಾಲಂ 11ರಲ್ಲಿಯೂ ಬರೆಯುವುದು ಬೇಡ.
ನಮ್ಮಲ್ಲಿ ಬಳಕೆಯಲ್ಲಿ ಇರುವ ಪದನಾಮ(ಸರ್ನೇಮ್), ಬಳಿ, ಗೋತ್ರಾ, ಕುಲ ಇತ್ಯಾದಿಗಳನ್ನು ಉಲ್ಲೇಖ ಮಾಡುವುದು ಬೇಡ. ಕೇವಲ ಜಾತಿ ಕಾಲಂನಲ್ಲಿ ಬಿಲ್ಲವ ಎಂದಷ್ಟೆ ಬರೆಯಬೇಕು ಎಂದು ಸಮುದಾಯದ ಮುಖಂಡರಾದ ಬಿ.ಎನ್.ಶಂಕರ್ ಪೂಜಾರಿ, ಪ್ರಮಲ್ ಕುಮಾರ್ ಡಾ| ಸಂತೋಷ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸರಕಾರವು ಬಿಲ್ಲವ ಜಾತಿಯೊಂದಿಗೆ ಕ್ರಿಶ್ಚಿಯನ್ ಎಂಬ ರ್ಪ ಉಲ್ಲೇಖಿಸಿ ಇನ್ನೊಂದು ಉಪಜಾತಿ ಮಾಡಿರುವ ಕುರಿತು ಸಮಾಜದ ಮುಖಂಡರೆಲ್ಲ ಸೇರಿ ಈಗಾಗಲೇ ಆಕ್ಷೇಪಣೆಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ನಮ್ಮಲ್ಲಿ ಬಿಲ್ಲವ ಕ್ರಿಶ್ಚಿಯನ್ ಎನ್ನುವ ಜಾತಿಯಿಲ್ಲ ನಮ್ಮದ ಬಿಲ್ಲವ ಜಾತಿ ಮಾತ್ರ ಎಂಬುದನ್ನು ಸಮಾಜ ಬಾಂಧವರು ಸಮೀಕ್ಷೆಯ ಸಂದರ್ಭದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದರು. ಮಂಜುನಾಥ, ಅಣ್ಣಪ್ಪ ಪೂಜಾರಿ, ಅನಿಲ್ ಪೂಜಾರಿ ಉಪಸ್ಥಿತರಿದ್ದರು.











































