ಮುಂಬೈ: ಗುರುವಾರ ನಡೆದ ಚುನಾವಣೆಯಲ್ಲಿ ಶಿವಸೇನೆಯ (ಯುಬಿಟಿ) ಸೈಯದ್ ಇಕ್ಬಾಲ್ ಕಾಂಗ್ರೆಸ್ ಬೆಂಬಲದೊಂದಿಗೆ ಮಧ್ಯ ಮಹಾರಾಷ್ಟ್ರದ ಪರ್ಭಾನಿ ನಗರ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಮೇಯರ್ (Parbhani Mayor) ಆಗಿ ಆಯ್ಕೆಯಾಗಿದ್ದು, ಇದು ಬಿಜೆಪಿ ಆಕ್ಷೇಪಕ್ಕೆ ಕಾರಣವಾಗಿದೆ.
ಗುರುವಾರ ಬೆಳಿಗ್ಗೆ ನಡೆದ ಮೇಯರ್ ಚುನಾವಣೆಯಲ್ಲಿ, ಸೈಯದ್ ಇಕ್ಬಾಲ್ 39 ಮತಗಳನ್ನು ಪಡೆದು ಬಿಜೆಪಿಯ ತಿರುಮಲ ಖಿಲಾರೆಯನ್ನು (26 ಮತ) 13 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್ ಕಾರ್ಪೊರೇಟರ್ ಗಣೇಶ್ ದೇಶಮುಖ್ ಉಪಮೇಯರ್ ಆಗಿ ಆಯ್ಕೆಯಾದರು.
ಈ ಫಲಿತಾಂಶದೊಂದಿಗೆ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮೇಯರ್ ಹುದ್ದೆಯನ್ನು ಪಡೆದುಕೊಂಡ ಏಕೈಕ ಪುರಸಭೆ ಪರ್ಭಾನಿಯಾಗಿದೆ.ಮಹಾಯುತಿ ಟೀಕೆಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನಾ (ಶಿಂಧೆ ಬಣ) ನಾಯಕ ಸಂಜಯ್ ನಿರುಪಮ್, ಉದ್ಧವ್ ಬಣದ ವಿರದ್ಧ ವಾಗ್ದಾಳಿ ನಡೆಸಿದರು. ಪಕ್ಷವು ತನ್ನ ಸೈದ್ಧಾಂತಿಕ ಬೇರುಗಳಿಂದ ದೂರ ಸರಿದಿದ್ದು, ಈ ಮೊದಲು ಮುಸ್ಲಿಂ ಮತಗಳಿಗಾಗಿ ಹಿಂದೂಗಳಿಗೆ ದ್ರೋಹ ಬಗೆದಿದ್ದ ಉದ್ಧವ್ ಬಣದವರು ಈಗ ಮತ್ತೇ ಮರಾಠಿ ಸಮಾಜವನ್ನು ನಿರ್ಲಕ್ಷಿಸಿದ್ದಾರೆ, ಬಾಳಾಸಾಹೇಬ್ ಠಾಕ್ರೆಯವರ ಆದರ್ಶಗಳ ನಿಜವಾದ ಉತ್ತರಾಧಿಕಾರಿ ಎಂದು ಉದ್ಧವ್ ಠಾಕ್ರೆ ಇನ್ನೂ ಹೇಳಿಕೊಳ್ಳುತ್ತಾರೆಯೇ? ಎಂದು ನಿರುಪಮ್ ಪ್ರಶ್ನಿಸಿದ್ದಾರೆ.ಬಿಜೆಪಿ ಪ್ರತಿಕ್ರಿಯೆಉದ್ಧವ್ ಠಾಕ್ರೆ ಪರ್ಭಾನಿಯಲ್ಲಿ ಔರಂಗಜೇಬನ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ, ಚುನಾವಣೆಗೆ ಮುನ್ನ ಮರಾಠಿ ಮನೂಸ್ ಹೆಸರನ್ನು ತೆಗೆದುಕೊಳ್ಳುತ್ತಾರೆ, ಆದರೆ ಮೇಯರ್ ನೇಮಿಸುವ ವಿಷಯಕ್ಕೆ ಬಂದಾಗ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ನವನಾಥ್ ಬಾನ್ ಟೀಕಿಸಿದ್ದಾರೆ.ಎಂಎನ್ಎಸ್ ಸಮರ್ಥನೆಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ಸಂದೀಪ್ ದೇಶಪಾಂಡೆ ಇಕ್ಬಾಲ್ ನಾಮನಿರ್ದೇಶನವನ್ನು ಸಮರ್ಥಿಸಿಕೊಂಡಿದ್ದು, ಪಕ್ಷಕ್ಕೆ ಅಭಿವೃದ್ದಿ ಮುಖ್ಯವಾಗಿದ್ದು, ನೂತನ್ ಮೇಯರ್ ನಗರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾರೆ ಎನ್ನುವುದು ನನ್ನ ನಂಬಿಕೆ, ಮುಸ್ಲಿಮರಿಗೆ ದೇಶದಲ್ಲಿ ವಾಸಿಸಲು ಅವಕಾಶವಿಲ್ಲವೇ? ಎಂದು ದೇಶಪಾಂಡೆ ಪ್ರಶ್ನಿಸಿದ್ದಾರೆ.ಪರ್ಭಾನಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ಫಲಿತಾಂಶಪುರಸಭೆ ಚುನಾವಣೆಯಲ್ಲಿ, ಶಿವಸೇನೆ (ಯುಬಿಟಿ) 25 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ತಲಾ 12 ಸ್ಥಾನಗಳನ್ನು ಗೆದ್ದರೆ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 11 ಸ್ಥಾನಗಳನ್ನು ಗಳಿಸಿತು. ಉಳಿದ ಸ್ಥಾನಗಳು ಸಣ್ಣ ಪಕ್ಷಗಳು ಮತ್ತು ಒಬ್ಬ ಸ್ವತಂತ್ರ ಪಕ್ಷದ ಪಾಲಾದವು. ಶಿವಸೇನೆ (ಯುಬಿಟಿ)-ಕಾಂಗ್ರೆಸ್ ಮೈತ್ರಿಕೂಟವು ಸದನದಲ್ಲಿ 37 ಸ್ಥಾನಗಳನ್ನು ಹೊಂದಿದ್ದು, ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ.ರಾಜ್ಯದ 29 ಪುರಸಭೆಗಳಿಗೆ ಜನವರಿ 15 ರಂದು ಚುನಾವಣೆ ನಡೆದಿದ್ದು, ಅದರ ಮರುದಿನ ಫಲಿತಾಂಶಗಳು ಹೊರಬಿದ್ದವು. ಒಟ್ಟು 2,869 ಸ್ಥಾನಗಳಲ್ಲಿ ಬಿಜೆಪಿ 1,425 ಸ್ಥಾನಗಳನ್ನು ಗೆದ್ದರೆ, ಶಿವಸೇನೆ (ಯುಬಿಟಿ) 155 ಸ್ಥಾನಗಳನ್ನು ಗೆದ್ದಿದೆ ಎಂದು ವರದಿಯಾಗಿದೆ












































